ರವಿಶಾಸ್ತ್ರಿ ಕೋಚ್ ಆಗಿದ್ದಾಗ ಈ 2 ವಿಚಾರಗಳನ್ನು ಸಹಿಸುತ್ತಿರಲಿಲ್ಲ: ದಿನೇಶ್ ಕಾರ್ತಿಕ್
* ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಡಿಕೆ
* ರವಿಶಾಸ್ತ್ರಿ ಎರಡು ವಿಚಾರಗಳನ್ನು ಸಹಿಸುತ್ತಿರಲಿಲ್ಲ ಎಂದ ದಿನೇಶ್ ಕಾರ್ತಿಕ್
* ರವಿಶಾಸ್ತ್ರಿ 2021ರ ಟಿ20 ವಿಶ್ವಕಪ್ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು
ನವದೆಹಲಿ(ಆ.17): ಭಾರತ ಕ್ರಿಕೆಟ್ ತಂಡವು ಕಂಡತಹ ಯಶಸ್ವಿ ಕೋಚ್ಗಳಲ್ಲಿ ಒಬ್ಬರೆನಿಸಿಕೊಂಡಿರುವ ರವಿಶಾಸ್ತ್ರಿ ಕೋಚ್ ಶೈಲಿಯ ಕುರಿತಂತೆ ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ರವಿಶಾಸ್ತ್ರಿ ಕೋಚ್ ಆಗಿದ್ದಾಗ ಆಟಗಾರರು ಮಾಡುವ ಎರಡು ಕೆಲಸಗಳ ಬಗ್ಗೆ ಅವರು ಎಂದೆಂದಿಗೂ ಪ್ರಶಂಸೆ ವ್ಯಕ್ತಪಡಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.
ರವಿಶಾಸ್ತ್ರಿ, ಟೀಂ ಇಂಡಿಯಾ ಕೋಚ್ ಆಗಿದ್ದಾಗ ಐಸಿಸಿ ಟೂರ್ನಿಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸರಣಿಗಳಲ್ಲೂ ಯಶಸ್ಸು ಗಳಿಸಿತ್ತು. ಶಾಸ್ತ್ರಿ ಮಾರ್ಗದರ್ಶನದಲ್ಲಿಯೇ ಆಸ್ಟ್ರೇಲಿಯಾ ನೆಲದಲ್ಲಿ ಭಾರತ ತಂಡವು ಸತತ ಎರಡು ಬಾರಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇನ್ನು ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಟೀಂ ಇಂಡಿಯಾ ಫೈನಲ್ಗೇರಿತ್ತು. ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆದ ಬಳಿಕ ಆಟಗಾರರಲ್ಲಿ ಹೊಸ ಮನೋಭಾವ ಹೊಂದುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಕ್ರಿಕೆಟ್ ವೆಬ್ಸೈಟ್ Cricbuzz ಜತೆ ಮಾತನಾಡಿರುವ ದಿನೇಶ್ ಕಾರ್ತಿಕ್, ರವಿಶಾಸ್ತ್ರಿಯವರು, ಆಟಗಾರರು ನಿಯಮಿತ ವೇಗದಲ್ಲಿ ರನ್ಗಳಿಸದೇ ಇರುವ ಆಟಗಾರರು ಅವರು ಇಷ್ಟಪಡುತ್ತಿರಲಿಲ್ಲ. ಇದರ ಜತೆಗೆ ನೆಟ್ಸ್ನಲ್ಲಿ ಅಭ್ಯಾಸ ನಡೆಸಿದ್ದಕ್ಕಿಂತ ವಿಭಿನ್ನವಾಗಿ ಮೈದಾನದಲ್ಲಿ ಪ್ರಯೋಗ ನಡೆಸುವುದನ್ನು ಸಹ ಅವರು ಸಹಿಸುತ್ತಿರಲಿಲ್ಲ. ಈ ಎರಡು ವಿಚಾರಗಳಲ್ಲಿ ಅವರು ಆಟಗಾರರನ್ನು ಪ್ರೋತ್ಸಾಹಿಸುತ್ತಿರಲಿಲ್ಲ. ತಮ್ಮ ತಂಡದಿಂದ ಏನನ್ನೂ ಸಾಧಿಸಬಹುದು ಎನ್ನುವುದು ರವಿಶಾಸ್ತ್ರಿಯವರಿಗೆ ಗೊತ್ತಿತ್ತು. ಆದರೆ ವೈಫಲ್ಯಗಳ ಬಗ್ಗೆ ಅವರ ಸಹನೆ ತುಂಬಾ ಕಡಿಮೆಯಿತ್ತು. ಆಟಗಾರರಿಂದ ಉತ್ತಮ ಪ್ರದರ್ಶನವನ್ನು ಅವರು ಬಯಸುತ್ತಿದ್ದರು ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ಐಸಿಸಿ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ನಾನಿಲ್ಲ: ಗಾಳಿಸುದ್ದಿಗಳಿಗೆ ತೆರೆ ಎಳೆದ ಸೌರವ್ ಗಂಗೂಲಿ
ರವಿಶಾಸ್ತ್ರಿಯವರು ಓರ್ವ ಕೋಚ್ ಆಗಿ ತಮ್ಮ ಸಾಮರ್ಥ್ಯವನ್ನು ಹಾಗೂ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ ಎಂದು ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ರವಿಶಾಸ್ತ್ರಿ ಓರ್ವ ಆಟಗಾರನಾಗಿ ಪ್ರಾಯಶಃ ಹೆಚ್ಚು ಯಶಸ್ವಿಯಾಗದೇ ಇರಬಹುದು, ಆದರೆ ಓರ್ವ ಕೋಚ್ ಆಗಿ ಹೆಚ್ಚು ಯಶಸ್ಸು ಕಂಡಿದ್ದಾರೆ. ನಾವು ಅವರಿಂದ ಏನು ನಿರೀಕ್ಷಿಸಿದ್ದೆವೋ ಅದಕ್ಕಿಂತ ಹೆಚ್ಚಿನದನ್ನು ಅವರು ಸಾಧಿಸಿದ್ದಾರೆ. ಅವರು ಯಾವಾಗಲು ಆಟಗಾರರಿಂದ ಏನಾದರೂ ವಿಶೇಷವಾದದನ್ನು ಸಾಧಿಸಲು ಹುರಿದುಂಬಿಸುತ್ತಿದ್ದರು ಎಂದು ತಮಿಳುನಾಡು ಮೂಲದ ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ.
2014ರಲ್ಲಿ ಭಾರತದ ಕೋಚ್ ಸ್ಥಾನ ಅಲಂಕರಿಸಿದ್ದ ಶಾಸ್ತ್ರಿ 2021ರ ಟಿ20 ವಿಶ್ವಕಪ್ (ICC T20 World Cup) ಬಳಿಕ ಹುದ್ದೆಯಿಂದ ಕೆಳಗಿಳಿದಿದ್ದರು. ಈ ಮಧ್ಯ ಒಂದು ವರ್ಷ ಅನಿಲ್ ಕುಂಬ್ಳೆ (Anil Kumble) ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ತಮ್ಮ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಮಾತನಾಡಿದ್ದ ರವಿಶಾಸ್ತ್ರಿ, ‘ನನ್ನ ಕೋಚಿಂಗ್ ಅವಧಿಯಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ. ಆದರೆ ನಮ್ಮ ಸಮಯ ಮುಗಿದ ಮೇಲೆ ನಾವು ಇರಬಾರದು’ ಎಂದಿದ್ದರು. ‘ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ್ನದ್ದನ್ನು ಸಾಧಿಸಿದ್ದೇನೆ. 5 ವರ್ಷ ಟೆಸ್ಟ್ನಲ್ಲಿ ನಂ.1 ಆಗಿದ್ದೆವು. ನಾವು ಎಲ್ಲಾ ದೇಶಗಳ ವಿರುದ್ಧ ಅವರದೇ ಅಂಗಳದಲ್ಲಿ ಆಡಿ ಗೆದ್ದಿದ್ದೇವೆ ಎಂದಿದ್ದರು. ಇದು ನನ್ನ ನಾಲ್ಕು ದಶಕದ ಕ್ರಿಕೆಟ್ ಬದುಕಿನಲ್ಲಿ ಅತ್ಯಂತ ತೃಪ್ತಿಕರ ಕ್ಷಣ. ಆದರೆ ಅಗತ್ಯಕ್ಕಿಂತ ಹೆಚ್ಚಾಗಿ ನೀವು ಇಲ್ಲಿರಬಾರದು. ಹುದ್ದೆ ತೊರೆಯುವುದರಲ್ಲಿ ಬೇಸರವಿದೆ. ಯಾಕೆಂದರೆ ನಾನು ಶ್ರೇಷ್ಠ ಆಟಗಾರರ ಜೊತೆ ಕೆಲಸ ನಿರ್ವಹಿಸಿದ್ದೇನೆ. ಡ್ರೆಸ್ಸಿಂಗ್ ರೂಮಿನಲ್ಲಿ ಉತ್ತಮ ಸಮಯ ಕಳೆದಿದ್ದೇವೆ ಎಂದು ಹೇಳಿದ್ದರು.