ಭಾರತದ ಮುಂದಿನ T20 ನಾಯಕನಾಗಿ ಶ್ರೇಯಸ್ ಅಯ್ಯರ್ ಅಥವಾ ಸಂಜು ಸ್ಯಾಮ್ಸನ್ ಬದಲಿಗೆ ರಜತ್ ಪಾಟಿದಾರ್ ಸೂಕ್ತ ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ. ಐಪಿಎಲ್‌ನಲ್ಲಿ ಪಾಟಿದಾರ್ ಅವರ ಸ್ಫೋಟಕ ಪ್ರದರ್ಶನ, ವಿಶೇಷವಾಗಿ ಗುಜರಾತ್ ಟೈಟಾನ್ಸ್ ವಿರುದ್ಧದ ಅರ್ಧಶತಕವು ಅವರನ್ನು ನಾಯಕತ್ವದ ರೇಸ್‌ನಲ್ಲಿ ಮುಂಚೂಣಿಗೆ ತಂದಿದೆ ಎಂದು ಅಶ್ವಿನ್ ಹೇಳಿದ್ದಾರೆ.

ಚೆನ್ನೈ: ಸೂರ್ಯಕುಮಾರ್ ಯಾದವ್ ನಂತರ ಭಾರತದ ಮುಂದಿನ T20 ನಾಯಕ ಯಾರು? ಶ್ರೇಯಸ್ ಅಯ್ಯರ್ ಅಥವಾ ಸಂಜು ಸ್ಯಾಮ್ಸನ್ ಹೆಸರುಗಳು ಚರ್ಚೆಯಲ್ಲಿವೆ. ಆದರೆ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ಈ ಇಬ್ಬರ ಬದಲು ಅಚ್ಚರಿಯ ಹೆಸರೊಂದನ್ನು ಸೂಚಿಸಿದ್ದಾರೆ.

Add Asianetnews Kannada as a Preferred SourcegooglePreferred

ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಆರ್‌ಸಿಬಿಯನ್ನು ಫೈನಲ್‌ಗೆ ತಲುಪಿಸಿದ ರಜತ್ ಪಾಟಿದಾರ್ ಅವರ ಪ್ರದರ್ಶನ, ಆಯ್ಕೆ ಸಮಿತಿಯ ಆದ್ಯತೆಗಳನ್ನೇ ಬದಲಿಸಬಹುದು ಎಂದು ಅಶ್ವಿನ್ ಹೇಳಿದ್ದಾರೆ. ನಾಯಕತ್ವದ ರೇಸ್‌ನಲ್ಲಿದ್ದ ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್‌ಗೆ ಪಾಟಿದಾರ್ ಪ್ರದರ್ಶನ ದೊಡ್ಡ ಸವಾಲಾಗಿದೆ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್ 'ಆಶ್ ಕಿ ಬಾತ್‌'ಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರಜತ್ ಪಾಟೀದಾರ್ ನಾಯಕತ್ವ, ಬ್ಯಾಟಿಂಗ್ ಕೊಂಡಾಡಿದ ಅಶ್ವಿನ್

ವಿಶ್ವದರ್ಜೆಯ ವೇಗದ ಬೌಲರ್‌ಗಳ ವಿರುದ್ಧ ರಜತ್ ಪಾಟಿದಾರ್ ಆಡಿದ ರೀತಿ ನಿಜಕ್ಕೂ ನನ್ನನ್ನು ಬೆರಗುಗೊಳಿಸಿದೆ ಎಂದು ಅಶ್ವಿನ್ ಹೇಳಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್‌ನ ಕಗಿಸೊ ರಬಾಡಾಗೆ ಪಾಟಿದಾರ್ ಹೊಡೆದ ಒಂದು ಸಿಕ್ಸರ್, ಆ ಪಂದ್ಯದ ಮತ್ತು ಬಹುಶಃ ಟೂರ್ನಿಯ ಶ್ರೇಷ್ಠ ಶಾಟ್‌ಗಳಲ್ಲಿ ಒಂದಾಗಿದೆ ಎಂದು ಅಶ್ವಿನ್ ಬಣ್ಣಿಸಿದ್ದಾರೆ. "ಬ್ಯಾಕ್ ಫುಟ್‌ನಲ್ಲಿ ನಿಂತು ರಬಾಡಾಗೆ ರಜತ್ ಪಾಟಿದಾರ್ ಹೊಡೆದ ಆ ಸಿಕ್ಸರ್, ಈ ಪಂದ್ಯದ ಅತ್ಯುತ್ತಮ ಶಾಟ್ ಆಗಿತ್ತು. ಬಹುಶಃ ಈ ಟೂರ್ನಿಯಲ್ಲೇ ಅದು ಬೆಸ್ಟ್ ಶಾಟ್ ಇರಬಹುದು. ಆ ಪೊಸಿಷನ್‌ನಿಂದ ಅಷ್ಟು ಪವರ್ ಜನರೇಟ್ ಮಾಡಲು ಅವನಿಗೆ ಹೇಗೆ ಸಾಧ್ಯವಾಯಿತು ಎಂಬುದು ನನಗೆ ಈಗಲೂ ನಂಬಲಾಗುತ್ತಿಲ್ಲ," ಎಂದು ಅಶ್ವಿನ್ ವಿವರಿಸಿದ್ದಾರೆ.

ಪಾಟಿದಾರ್ ಅವರ ಈ ಅದ್ಭುತ ಪ್ರದರ್ಶನ, ಭಾರತೀಯ ತಂಡದ ಭವಿಷ್ಯದ ನಾಯಕತ್ವದ ಚರ್ಚೆಗಳಲ್ಲೂ ದೊಡ್ಡ ಬದಲಾವಣೆ ತರಲಿದೆ ಎಂದು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ. "ಪಾಟಿದಾರ್ ಅವರ ಈ ಸ್ಫೋಟಕ ಇನ್ನಿಂಗ್ಸ್‌ಗೂ ಮುನ್ನ, ನಾಯಕತ್ವದ ಚರ್ಚೆಗಳಲ್ಲಿ ಶ್ರೇಯಸ್ ಅಯ್ಯರ್ ಸ್ವಲ್ಪ ಮುಂದಿದ್ದರು. ಆದರೆ ಈ ಒಂದೇ ಪಂದ್ಯದಿಂದ ಪಾಟಿದಾರ್ ಆ ಅಂತರವನ್ನು ಕಡಿಮೆ ಮಾಡಿದ್ದಾರೆ. ಈ ಇನ್ನಿಂಗ್ಸ್‌ಗೂ ಮುನ್ನ ಕ್ಯಾಪ್ಟನ್ಸಿ ಮತ್ತು ಬ್ಯಾಟಿಂಗ್ ಚರ್ಚೆಗಳಲ್ಲಿ ಶ್ರೇಯಸ್ ಅಯ್ಯರ್ ಸ್ವಲ್ಪ ಮುಂದಿದ್ದರು. ಆದರೆ ಈ ರಾತ್ರಿಯ ನಂತರ ಪಾಟಿದಾರ್, ಅಯ್ಯರ್ ಜೊತೆ ಸಮನಾಗಿ ನಿಂತಿದ್ದಾರೆ," ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವದರ್ಜೆಯ ಬೌಲರ್‌ಗಳನ್ನು ಮೈಚಳಿ ಬಿಟ್ಟು ಎದುರಿಸಿದ ಪಾಟೀದಾರ್

ಕಳೆದ ಸೀಸನ್‌ನಲ್ಲಿ ಆರ್‌ಸಿಬಿಯನ್ನು ಮೊದಲ ಐಪಿಎಲ್ ಕಿರೀಟದತ್ತ ಮುನ್ನಡೆಸಿದ್ದ ಪಾಟಿದಾರ್, ಕ್ವಾಲಿಫೈಯರ್-1ರಲ್ಲಿ ಕೇವಲ 33 ಎಸೆತಗಳಲ್ಲಿ ಅಜೇಯ 93 ರನ್ ಸಿಡಿಸಿ, ತಂಡವನ್ನು ಸತತ ಎರಡನೇ ಬಾರಿಗೆ ಫೈನಲ್‌ಗೆ ಕೊಂಡೊಯ್ದಿದ್ದರು. ವೇಗದ ಬೌಲರ್‌ಗಳಷ್ಟೇ ಅಲ್ಲ, ಅಫ್ಘಾನಿಸ್ತಾನದ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ವಿರುದ್ಧವೂ ಪಾಟಿದಾರ್ ಅಬ್ಬರಿಸಿದ್ದರು. ರಬಾಡ ಮತ್ತು ರಶೀದ್ ಇಬ್ಬರನ್ನೂ ಸಮರ್ಥವಾಗಿ ಎದುರಿಸಿದ ರೀತಿ, ಪಾಟಿದಾರ್ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಅಶ್ವಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Scroll to load tweet…

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 17 ಸೀಸನ್‌ಗಳಿಂದ ಐಪಿಎಲ್ ಟ್ರೋಫಿ ಬರ ಅನುಭವಿಸುತ್ತಾ ಬಂದಿತ್ತು. ಆದರೆ ಕಳೆದ ಸೀಸನ್‌ನಲ್ಲಿ ಮೊದಲ ಬಾರಿಗೆ ನಾಯಕರಾದ ರಜತ್ ಪಾಟೀದಾರ್, ಚೊಚ್ಚಲ ಪ್ರಯತ್ನದಲ್ಲೇ ಆರ್‌ಸಿಬಿ ತಂಡಕ್ಕೆ ನಾಯಕನಾಗಿ ಟ್ರೋಫಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಅದೇ ಲಯವನ್ನು ಮುಂದುವರೆಸಿರುವ ಪಾಟೀದಾರ್ ಮತ್ತೊಮ್ಮೆ ಆರ್‌ಸಿಬಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ. ಒಂದು ವೇಳೆ ಆರ್‌ಸಿಬಿ ತಂಡವು ಈ ಬಾರಿಯೂ ಐಪಿಎಲ್ ಟ್ರೋಫಿ ಜಯಿಸಿದರೇ, ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಆರ್‌ಸಿಬಿ ಪಾತ್ರವಾಗಲಿದೆ.