ರಾಜಸ್ಥಾನ ರಾಯಲ್ಸ್ ತಂಡ 15600 ಕೋಟಿ ರೂಪಾಯಿಗೆ ಮಾರಾಟವಾಗಿ ಕೆಲ ತಿಂಗಳು ಉರುಳಿದೆ. ಇದೀಗ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಗಂಭೀರ ಆರೋಪ ಮಾಡಿದ್ದಾರೆ. ತಮಗೆ ಬರಬೇಕಿದ್ದ ಪಾಲಿನಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ಮುಂಬೈ (ಜು.24) ರಾಜಸ್ಥಾನ ರಾಯಲ್ಸ್ ತಂಡ ಮಾರಾಟವಾದರೂ ವಿವಾದ ಬಿಟ್ಟಿಲ್ಲ. ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಬಳಿಕ ರಾಜಸ್ಥಾನ ರಾಯಲ್ಸ್ ತಂಡ 2 ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಪ್ರಕರಣ ಭಾರಿ ವಿವಾದ ಸೃಷ್ಟಿಸಿತ್ತು. ಬಳಿಕ ಸುಧಾರಿಸಿಕೊಂಡು ಐಪಿಎಲ್ ಸೇರಿಕೊಂಡು ಇತ್ತೀಚೆಗೆ ಮಾರಾಟವಾದರೂ ವಿವಾದ ಬೆಂಬಿದಡೆ ಕಾಡುತ್ತಿದೆ. ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಮಾರಾಟದ ಪಾಲು ಹಂಚಿಕೆಯಲ್ಲಿ ವಂಚನೆ ನಡೆದಿದೆ ಎಂದು ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಗಂಭೀರ ಆರೋಪ ಮಾಡಿದ್ದಾರೆ. ಇಷ್ಟೇ ಅಲ್ಲ ಕೋರ್ಟ್ ಮೆಟ್ಟಿಲೇರಿದ್ದಾರೆ.ಇದೇ ವೇಳೆಮಾಜಿ ಮಾಲೀಕ ಮನೋಜ್ ಬಡಾಲೆಗೆ ಬಹಿರಂಗ ಸವಾಲು ಹಾಕಿದ್ದು, ಕೋರ್ಟ್ನಲ್ಲ ಭೇಟಿಯಾಗೋಣ ಎಂದಿದ್ದಾರೆ.
ಏನಿದು ವಂಚನೆ ಆರೋಪ?
ರಾಜಸ್ಥಾನ್ ರಾಯಲ್ಸ್ (RR) ಫ್ರಾಂಚೈಸಿಯ ಮಾಜಿ ಸಹ ಮಾಲೀಕ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ, ಮಾಜಿ ಮಾಲೀಕ ಮನೋಜ್ ಬಡಾಲೆ ಹಾಗೂ ಅವರ ಎಮರ್ಜಿಂಗ್ ಮೀಡಿಯಾ ವೆಂಚರ್ಸ್ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ. ಮನೋಜ್ ಬಡಾಲೆ ಇತ್ತೀಚೆಗಷ್ಟೇ ಉದ್ಯಮಿ ಲಕ್ಷ್ಮಿ ಮಿತ್ತಲ್ ಪುತ್ರ ಆದಿತ್ಯ ಮಿತ್ತಲ್ ಹಾಗೂ ಸೀರಮ್ ಇನ್ಸ್ಟಿಟ್ಯೂಟ್ ಮುಖ್ಯಸ್ಥ ಆದರ್ ಪೂನಾವಾಲಾ ಸೇರಿದಂತೆ ಪ್ರಮುಖರು ರಾಜಸ್ಥಾನ ರಾಯಲ್ಸ್ ತಂಡವನ್ನು ಖರೀದಿಸಿದ್ದಾರೆ. ಬರೋಬ್ಬರಿ 15,600 ಕೋಟಿ ರೂಪಾಯಿಗೆ ತಂಡ ಮಾರಾಟವಾಗಿತ್ತು. ಆದರೆ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ತಮಗಿದ್ದ ಶೇ 11.7 ರಷ್ಟು ಷೇರುಗಳಿಗೆ ಸರಿಯಾದ ಮೌಲ್ಯ ನೀಡದೆ ವಂಚನೆ ಮಾಡಲಾಗಿದೆ. ತಮಗೆ ನೈಜ ಮೌಲ್ಯಕ್ಕಿಂತ ಅತ್ಯಂತ ಕಡಿಮೆ ಹಣ ನೀಡಿ ವಂಚಿಸಲಾಗಿದೆ ಎಂದು ರಾಜ್ ಕುಂದ್ರಾ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.
ಹೈಕೋಕರ್ಟ್ ಮೆಟ್ಟಿಲೇರಿದ ರಾಜ್ ಕುಂದ್ರಾ
ವಂಚನೆ ಆರೋಪ ಮಾಡಿರುವ ರಾಜ್ ಕುಂದ್ರಾ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (NCLT) ಹಾಗೂ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮನೋಜ್ ಬಡಾಲೆ ನಡವಳಿಕೆ ವಿರುದ್ಧ ಶೋಷಣೆ ಮತ್ತು ಆಡಳಿತ ದುರುಪಯೋಗದ ಆರೋಪ ಹೊರಿಸಿದ್ದಾರೆ.
ಲಂಡನ್ ಕೋರ್ಟ್ನಲ್ಲಿ ಮನೋಜ್ ಬಡಾಲೆ ಪ್ರಕರಣ
ಉದ್ಯಮಿ ಮನೋಜ್ ಬಡಾಲೆಯ ಇಎಂವಿ ಸಂಸ್ಥೆ ಲಂಡನ್ ಹೈಕೋರ್ಟ್ನಿಂದ ತಾತ್ಕಾಲಿಕ ರಿಲೀಫ್ ಪಡೆದುಕೊಂಡಿದೆ. 2019 ರಲ್ಲಿ ಮಾಡಿಕೊಳ್ಳಲಾದ ಗೌಪ್ಯ ಸಂಧಾನ ಒಪ್ಪಂದವನ್ನು ರಾಜ್ ಕುಂದ್ರಾ ಉಲ್ಲಂಘಿಸಿದ್ದಾರೆ ಎಂದು ಕೋರ್ಟ್ನಲ್ಲಿ ವಾದಿಸಿತ್ತು. 2015 ರ ಬೆಟ್ಟಿಂಗ್ ಪ್ರಕರಣದ ನಂತರ ಶೇರುಗಳನ್ನು ಹಸ್ತಾಂತರಿಸಿದ್ದ ಕುಂದ್ರಾ, 2019 ರ ಒಪ್ಪಂದದಡಿ 4.94 ಮಿಲಿಯನ್ ಡಾಲರ್ ಪಡೆದುಕೊಂಡಿದ್ದರು ಎಂದು ಸಂಸ್ಥೆ ಹೇಳಿತ್ತು.
ಪಟ್ಟು ಬಿಡದ ರಾಜ್ ಕುಂದ್ರಾ ಹರಾಜು ಪ್ರಕ್ರಿಯೆ ಪಾರದರ್ಶಕತೆಯಿಂದ ಕೂಡಿಲ್ಲ ಎಂದು ಆರೋಪಿಸಿದ್ದಾರೆ. ಮಾರುಕಟ್ಟೆ ಮೌಲ್ಯವನ್ನು ಕುಗ್ಗಿಸಿ ತಮಗೆ ವಂಚನೆ ಮಾಡಿ ಮೌಲ್ಯ ತೋರಿಸಿದ್ದಾರೆ. ನಿಜವಾದ ಆರ್ಥಿಕ ಮೌಲ್ಯಮಾಪನವನ್ನು ಮರೆಮಾಚಲಾಗಿದೆ ಎಂಬ ಆರೋಪವನ್ನು ರಾಜ್ ಕುಂದ್ರಾ ಮಾಡಿದ್ದಾರೆ. ಇದೇ ವೇಳೆ ಭಾರತೀಯ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.


