ರಾಹುಲ್‌ ದ್ರಾವಿಡ್‌ ಅವರ ಆರೋಗ್ಯದ ಬಗ್ಗೆ ಚಿಂತೆ ಮಾಡುವ ಕಾರಣಗಳಿಲ್ಲ. ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಭಾನುವಾರ ತಿರುವನಂತಪುರದಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದ್ದು, ಅದಕ್ಕೂ ಮುನ್ನವೇ ಅವರು ತಂಡವನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ. 

ನವದೆಹಲಿ (ಜ.13):ಭಾರತ ತಂಡದ ಮಾಜಿ ನಾಯಕ ಮತ್ತು ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಇನ್ನೊಂದೆಡೆ ಪ್ರವಾಸಿ ಶ್ರೀಲಂಕಾ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಹಾಗೂ ಸಿಬ್ಬಂದಿ ಕೇರಳದ ತಿರುವನಂತಪುರಕ್ಕೆ ತೆರಳಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ರಾಹುಲ್‌ ದ್ರಾವಿಡ್‌ ಅವರು, ಕೋಲ್ಕತ್ತದಿಂದ ತಿರುವನಂತಪುರದ ಬದಲಿಗೆ ಮುಂಜಾನೆಯೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಗುರುವಾರ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಅವರು ರಕ್ತದೊತ್ತಡದ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು ಮತ್ತು ಅವರನ್ನು ಬೆಂಗಾಲ್ ಕ್ರಿಕೆಟ್ ಅಸೋಸಿಯೇಷನ್‌ನ ವೈದ್ಯರು ಪರೀಕ್ಷಿಸಿದರು. ದ್ರಾವಿಡ್‌ ಅವರ ಆರೋಗ್ಯದ ಕುರಿತಾಗಿ ಚಿಂತೆ ಪಡಬೇಕಾದ ಯಾವುದೇ ಅಗತ್ಯವಿಲ್ಲ. ಶನಿವಾರದ ವೇಳೆಗೆ ಅವರು ತಿರುವನಂತಪುರಕ್ಕೆ ತೆರಳುವ ಸಾಧ್ಯತೆ ಇದೆ. ಭಾನುವಾರ ಅಂತಿಮ ಏಕದಿನ ಪಂದ್ಯ ನಡೆಯಲಿದೆ. ಬೆಂಗಳೂರು ಮೂಲದ ವಿಮಾನದಲ್ಲಿ ರಾಹುಲ್‌ ದ್ರಾವಿಡ್‌ ಏಕಾಂಗಿಯಾಗಿ ಪ್ರಯಾಣ ಮಾಡುತ್ತಿರುವ ಚಿತ್ರಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಚಿತ್ರದಲ್ಲೂ ಕೂಡ ದ್ರಾವಿಡ್‌ ಆರೋಗ್ಯವಾಗಿಯೇ ಕಂಡಿದ್ದಾರೆ.

Scroll to load tweet…


ಜನವರಿ 11 ರಂದು 50ನೇ ವರ್ಷದ ಜನ್ಮದಿನವನ್ನು ಟೀಂ ಇಂಡಿಯಾ ಮುಖ್ಯ ಕೋಚ್‌ ಆಚರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ತಮ್ಮ ವೈದ್ಯರನ್ನು ಸಂಪರ್ಕಿಸಿ, ಕೆಲವು ಆರೋಗ್ಯದ ಎಚ್ಚರಿಕೆ ಹಾಗೂ ಪರೀಕ್ಷೆಗಳಿಗೆ ಒಳಗೊಳ್ಳುವ ಸಲುವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.

ವಿಶ್ವಕಪ್‌ ಸೋಲಿಗೆ ಮುಂದುವರಿದ ಬಿಸಿಸಿಐ ಸಿಟ್ಟು, ಟೀಮ್‌ ಇಂಡಿಯಾ ಮತ್ತೊಂದು ಸಿಬ್ಬಂದಿಗೆ ಗೇಟ್‌ಪಾಸ್‌

ಪ್ರವಾಸಿ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಟೀಮ್‌ ಇಂಡಿಯಾ ಈವರೆಗೂ ಅದ್ಭುತವಾಗ ಆಡಿದೆ. ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ರಿಂದ ತಂಡ ಗೆದ್ದಿದ್ದರೆ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಮುನ್ನಡೆ ಕಂಡುಕೊಂಡಿದೆ. ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮ ನೇತೃತ್ವದ ಟೀಮ್‌ ಇಂಡಿಯಾ 67 ರನ್‌ಗಳ ಗೆಲುವು ಸಾಧಿಸಿತ್ತು. ರೋಹಿತ್‌ ಶರ್ಮ, ಶುಭಮನ್‌ ಗಿಲ್‌ ಹಾಗೂ ವಿರಾಟ್‌ ಕೊಹ್ಲಿ ಅವರ ಆಕರ್ಷಕ ಆಟದಿಂದ ಉತ್ತಮ ಗೆಲುವು ಕಂಡಿತ್ತು.

ಕೆಎಲ್‌ ರಾಹುಲ್‌ ಮೇಲೆ ನಮ್ಮ ಸಂಪೂರ್ಣ ಬೆಂಬಲವಿದೆ: ವಿಶ್ವಾಸ ವ್ಯಕ್ತಪಡಿಸಿದ ಗುರು ದ್ರಾವಿಡ್‌

ಇನ್ನು ಕೋಲ್ಕತ್ತದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಭರ್ಜರಿ ಪ್ರದರ್ಶನ ನೀಡಿದ್ದರು. ಸ್ಪಿನ್ನರ್‌ ಕುಲದೀಪ್‌ ಯಾದವ್‌ ನೇತೃತ್ವದಲ್ಲಿ ತಂಡ ಭರ್ಜರಿ ದಾಳಿ ನಡೆಸಿತು. ಗಾಯದ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದ ಯಜುವೇಂದ್ರ ಚಾಹಲ್‌ ಬದಲಿಗೆ ಸ್ಥಾನ ಪಡೆದಿದ್ದ ಕುಲದೀಪ್‌ ಯಾದವ್‌, ಶ್ರೀಲಂಕಾದ ಬ್ಯಾಟಿಂಗ್‌ನ ಬೆನ್ನೆಲುಬನ್ನು ಮುರಿದು ಮೂರು ಪ್ರಮುಖ ವಿಕೆಟ್‌ಗಳನ್ನು ಉರುಳಿಸಿದ್ದರು. ಇದರಲ್ಲಿ ಏಕದಿನ ಮಾದರಿಯ ಕ್ರಿಕೆಟ್‌ಗೆ ಮರಳಿದ್ದ ಶ್ರೀಲಂಕಾ ನಾಯಕ ದಸುನ್‌ ಶನಕ ವಿಕೆಟ್‌ ಕೂಡ ಸೇರಿತ್ತು.