ನಮಗೆ ಸಂಸಾರವಿದೆ, ದಯವಿಟ್ಟು ಗಾಯಮಾಡಬೇಡ ಎನ್ನುತ್ತಿದ್ದರಂತೆ ಟೀಂ ಇಂಡಿಯಾ ಬಾಲಂಗೋಚಿಗಳು..!
ಟೀಂ ಇಂಡಿಯಾ ಬಾಲಂಗೋಚಿಗಳು ನನ್ನ ಬೌಲಿಂಗ್ ಬೌನ್ಸರ್ ಎದುರಿಸಲು ಸಾಕಷ್ಟು ಹೆದರುತ್ತಿದ್ದರು ಎಂದು ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ಹೇಳಿದ್ದಾರೆ. ಈ ಕುರಿತಾದ ಒಂದು ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಕರಾಚಿ(ಆ.20): ಅಂತಾರಾಷ್ಟ್ರೀಯ ಕ್ರಿಕೆಟ್ ಕಂಡ ಮಾರಕ ವೇಗಿಗಳಲ್ಲಿ ಪಾಕಿಸ್ತಾನದ ಶೊಯೇಬ್ ಅಖ್ತರ್ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ಅತಿಶಯೋಕ್ತಿಯಾಗಲಾರದು. ಕರಾರುವಕ್ಕಾದ ವೇಗದ ಬೌಲಿಂಗ್ ಎದುರಿಸುವುದಕ್ಕೆ ಹಲವು ಬ್ಯಾಟ್ಸ್ಮನ್ಗಳು ಸಾಕಷ್ಟು ಬಾರಿ ಪರದಾಡುತ್ತಿದ್ದರು. ಆದರೆ ತಮ್ಮ ಬೌಲಿಂಗಿಗೆ ಹೆದರುತ್ತಿದ್ದವರು ಬಾಲಂಗೋಚಿ ಬ್ಯಾಟ್ಸ್ಮನ್ಗಳು ಎಂದು ಸ್ವತಃ ಅಖ್ತರ್ ಹೇಳಿದ್ದಾರೆ.
ಪಾಕಿಸ್ತಾನ ನಿರೂಪಕಿ ಸವೇರಾ ಪಾಷಾ ಜತೆಗೆ 'ಕ್ರಿಕ್ ಕಾಸ್ಟ್' ಯೂಟ್ಯೂಬ್ ಪ್ರೋಗ್ರಾಂನಲ್ಲಿ ಮಾತನಾಡಿದ ಅಖ್ತರ್ ಕೆಲವೊಂದು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಈ ವೇಳೆ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದ ಗ್ಯಾರಿ ಕರ್ಸ್ಟನ್ಗೆ ಬೌನ್ಸರ್ ಹಾಕಿದ್ದ ಘಟನೆಯನ್ನು ಮೆಲುಕು ಹಾಕಿದ್ದಾರೆ.
ನನ್ನ ಎಸೆತದಲ್ಲಿ ಫುಲ್ ಶಾಟ್ ಹೊಡೆಯಬೇಡಿ. ಯಾಕೆಂದರೆ ನೀವು ಎದುರಿಸುತ್ತಿರುವುದು ವಿಶ್ವದ ಅತ್ಯಂತ ವೇಗದ ಬೌಲರ್ ಎನ್ನುವುದು ನೆನಪಿರಲಿ ಎಂದು ಗ್ಯಾರಿಗೆ ಮೊದಲೇ ಹೇಳಿದ್ದೆ. ಆದರೆ ಗ್ಯಾರಿ ನನ್ನ ಮಾತನ್ನು ಹಗುರವಾಗಿ ಪರಿಗಣಿಸಿ ಫುಲ್ ಶಾಟ್ ಮಾಡಿದರು. ಆದರೆ ನಾನು ಹಾಕಿದ ಬೌನ್ಸರ್ ಅವರ ಕಣ್ಣಿಗೆ ಪೆಟ್ಟು ಬೀಳುವಂತೆ ಮಾಡಿತು. ನಾನು ಅವರು ಬೇಟಿಯಾದಗಲೆಲ್ಲಾ ಅವರು ತಮ್ಮ ಕಣ್ಣಿನ ಕಡೆ ಬೆರಳು ಮಾಡಿ ತೋರಿಸುತ್ತಾರೆ ಎಂದು ಅಖ್ತರ್ ಹೇಳಿದ್ದಾರೆ.
ಪ್ರಧಾನಿ ಮೋದಿ ಮನವಿ ಮಾಡಿಕೊಂಡರೆ ಧೋನಿ ಟಿ20 ವಿಶ್ವಕಪ್ ಆಡಬಹುದು ಎಂದ ಪಾಕ್ ಮಾಜಿ ವೇಗಿ..!
ಯಾರದರೂ ನಿಮಗೆ ಔಟ್ ಮಾಡು ಆದರೆ ಗಾಯಮಾಡಬೇಡ ಎಂದು ಹೇಳುತ್ತಿದ್ದರಾ ಎನ್ನುವ ಪ್ರಶ್ನೆಗೆ ಸಾಕಷ್ಟು ಭಾರತದ ಬಾಲಂಗೋಚಿ ಬ್ಯಾಟ್ಸ್ಮನ್ಗಳು ಹಾಗೂ ಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಹಾಗೆ ಹೇಳಿದ್ದರು ಎಂದಿದ್ದರು.
ಮುತ್ತಯ್ಯ ಮುರುಳೀಧರನ್ ಸೇರಿದಂತೆ ಟೀಂ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳು ನಮಗೆ ಗಾಯಮಾಡಬೇಡ. ನಮಗೆ ಫ್ಯಾಮಿಲಿ ಇದೆ ಎಂದು ಹೇಳುತ್ತಿದ್ದರು ಎಂದು ಅಖ್ತರ್ ಹೇಳಿದ್ದಾರೆ. ಅದರಲ್ಲೂ ಮುತ್ತಯ್ಯ ಮುರುಳೀಧರನ್ ನನಗೆ ನಿಧಾನವಾಗಿ ಬೌಲಿಂಗ್ ಮಾಡು, ನಾನೇ ಔಟಾಗುತ್ತೇನೆ ಎನ್ನುತ್ತಿದ್ದರಂತೆ.
ಯೂಸುಪ್ ಮುರುಳಿ ಕೈ ಬೆರಳುಗಳನ್ನು ಮುರಿದು ಹಾಕು, ಆತನ ಸ್ಪಿನ್ ಬೌಲಿಂಗ್ ಎದುರಿಸುವುದು ಕಷ್ಟವಾಗುತ್ತಿದೆ ಎಂದು ಹೇಳುತ್ತಿದ್ದರಂತೆ. ಬಳಿಕ ನಾನು ಕೆಲವು ಬೌನ್ಸರ್ಗಳನ್ನು ಮುರುಳಿಗೆ ಹಾಕಿದೆ. ಆಗ ನನ್ನ ಬಳಿ ಬಂದ ಮುರುಳಿ, ನನಗೆ ಈ ರೀತಿ ಮಾಡಬೇಡ. ಒಂದು ವೇಳೆ ಬಾಲ್ ನನಗೆ ಬಡಿದರೆ ನಾನು ಸತ್ತೇ ಹೋಗುತ್ತೇನೆ ಎಂದಿದ್ದರು ಎಂದು ಮುಗುಳು ನಗುತ್ತಾ ಹೇಳಿದ್ದಾರೆ