ವೀಸಾ ನಿರಾಕರಣೆ, ಭಾರತದಲ್ಲಿ ಆಯೋಜಿಸಿದ ಅಂಧರ ಟಿ20 ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ಔಟ್
ಅಂಧರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ಅತಿಥ್ಯ ವಹಿಸಿದೆ. ಈ ಟೂರ್ನಿಗೆ ಆಗಮಿಸಲು ಪಾಕಿಸ್ತಾನ ಅಂಧರ ತಂಡ ಭಾರತ ವಿದೇಶಾಂಗ ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು. ಆದರೆ ಭಾರತ ವೀಸಾ ನಿರಾಕರಿಸಿದೆ. ಪರಿಣಾಮ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಿದೆ.
ನವದೆಹಲಿ(ಡಿ.06): ಏಷ್ಯಾಕಪ್ ಟೂರ್ನಿಗೆ ಭಾರತ ಪಾಕಿಸ್ತಾನ ಪ್ರವಾಸ ಮಾಡಲ್ಲ ಅನ್ನೋ ಮಾತುಗಳು ಕೇಳಿಬಂದ ಬೆನ್ನಲ್ಲೇ, ಭಾರತದಲ್ಲಿ ಆಯೋಜಿಸುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಪಾಲ್ಗೊಳ್ಳಲ್ಲ ಅನ್ನೋ ಬೆದರಿಕೆ ಮಾತುಗಳು ಇತ್ತೀಚೆಗೆ ಕೇಳಿಬಂದಿತ್ತು. ಈ ಹಗ್ಗಜಗ್ಗಾಟ ನಡುವೆ ಭಾರತದಲ್ಲಿ ಆಯೋಜನೆಗೊಂಡಿರುವ ಅಂಧರ ಟಿ20 ವಿಶ್ವಕಪ್ ಟೂರ್ನಿಯಿಂದ ಪಾಕಿಸ್ತಾನ ತಂಡ ಹೊರಬಿದ್ದಿದೆ. ಪಾಕಿಸ್ತಾನ ತಂಡ ವೀಸಾ ಅನುಮತಿ ನೀಡಲು ಭಾರತೀಯ ವಿದೇಶಾಂಗ ಇಲಾಖೆ ನಿರಾಕರಿಸಿದೆ. ಇದರ ಪರಿಣಾಮ ಟೂರ್ನಿಯಿಂದ ಪಾಕಿಸ್ತಾನ ಹೊರಬಿದ್ದಿದೆ.
ಡಿಸೆಂಬರ್ 5 ರಿಂದ 17ರ ವರೆಗೆ ಅಂಧರ ಟಿ20 ವಿಶ್ವಕಪ್ ಟೂರ್ನಿ ಆಯೋಜಿಸಲಾಗಿದೆ. ಪಾಕಿಸ್ತಾನ ತಂಡ ಭಾರತ ಪ್ರವಾಸಕ್ಕೆ ವೀಸಾ ಅನುಮತಿ ಮನವಿ ಸಲ್ಲಿಸಿತ್ತು. ಆದರೆ ಪಾಕಿಸ್ತಾನ ಅಂಧರ ಕ್ರಿಕೆಟ್ ಸಂಸ್ಥೆ ಕೆಲ ಎಡವಟ್ಟುಗಳಿಂದ ಪಾಕಿಸ್ತಾನ ಆಟಗಾರರ ವೀಸಾಗೆ ಅನುಮತಿ ಸಿಕ್ಕಿಲ್ಲ. ಇದರ ಪರಿಣಾಮ ಭಾರತ ಪ್ರವಾಸ ಸಾಧ್ಯವಾಗಿಲ್ಲ. ಈಗಾಗಲೇ ಟೂರ್ನಿ ಆರಂಭಗೊಂಡಿರುವ ಕಾರಣ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರಬಿದ್ದಿದೆ.
2023ರ ಏಕದಿನ ವಿಶ್ವಕಪ್ ಟೂರ್ನಿ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ರಮೀಜ್ ರಾಜಾ
ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪಾಕಿಸ್ತಾನ ಅಂಧರ ಕ್ರಿಕೆಟ್ ಸಂಸ್ಥೆ, ಇದು ಭಾರತದ ರಾಜಕೀಯ. ಆಟಗಾರರ ಪಾಸ್ಪೋರ್ಟ್ಗಳಲ್ಲಿ ಯಾವುದೇ ದೋಷವಿಲ್ಲ. ಭಾರತದಲ್ಲಿ ಕ್ರೀಡೆ ಜೊತೆಗೆ ರಾಜಕೀಯ ಬೆರೆಸಲಾಗುತ್ತದೆ ಎಂದು ಆರೋಪಿಸಿದೆ. ಈ ಕುರಿತು ಭಾರತೀಯ ವಿದೇಶಾಂಗ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಈ ಬೆಳವಣಿಗೆ ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಇತರ ಕ್ರೀಡೆ ಮೇಲೂ ಪರಿಣಾಮ ಬೀರಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈಗಾಗಲೇ ಏಷ್ಯಾಕಪ್ ಟೂರ್ನಿ ಹಾಗೂ ಏಕದಿನ ವಿಶ್ವಕಪ್ ಟೂರ್ನಿ ಪ್ರವಾಸ ಕುರಿತು ಭಾರತ ಹಾಗೂ ಪಾಕಿಸ್ತಾನ ಕಿತ್ತಾಡಿಕೊಂಡಿದೆ. ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಆಡಲು ಪಾಕಿಸ್ತಾನಕ್ಕೆ ಭಾರತ ತಂಡ ತೆರಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ ಬೆನ್ನಲ್ಲೇ, ಇದೇ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಬಹಿಷ್ಕಾರ ಹಾಕುವ ಬೆದರಿಕೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಡ್ಡಿತ್ತು. ಮುಂದಿನ ವರ್ಷ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ತೆರಳದಿರಲು ನಾವು ನಿರ್ಧರಿಸಿದ್ದೇವೆ. ಅದರ ಬದಲು ತಟಸ್ಥ ಸ್ಥಳದಲ್ಲಿ ಆಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ. 2023ರ ಏಷ್ಯಾಕಪ್ ಆಯೋಜನೆ ಹಕ್ಕು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಬಳಿ ಇದ್ದು, ಟೂರ್ನಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ಅಜೆಂಡಾದಲ್ಲಿ ಇತ್ತೀಚೆಗೆ ಉಲ್ಲೇಖಿಸಲಾಗಿತ್ತು.
IND vs PAK ಏಷ್ಯಾಕಪ್ 2023 ಟೂರ್ನಿಗಾಗಿ ಭಾರತ ತಂಡದ ಪಾಕ್ ಪ್ರವಾಸ, ಬಿಸಿಸಿಐ ಮಹತ್ವದ ಹೇಳಿಕೆ!
ಭಾರತದ ಈ ನಡೆಯಿಂದ ಆಕ್ರೋಶಗೊಂಡ ಪಿಸಿಬಿ 2023ರ ಏಕದಿನ ವಿಶ್ವಕಪ್ನಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ‘ಪಿಸಿಬಿ ಈಗ ಕಠಿಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಯಾಕೆಂದರೆ ಭಾರತದಲ್ಲಿ ಪಾಕಿಸ್ತಾನ ತಂಡ ದೊಡ್ಡ ಟೂರ್ನಿಗಳಲ್ಲಿ ಆಡದಿದ್ದರೆ ಐಸಿಸಿ ಹಾಗೂ ಎಸಿಸಿಗೆ ಭಾರೀ ನಷ್ಟಉಂಟಾಗಲಿದೆ’ ಎಂದು ಪಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.