ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಟ್ರೇಡ್‌ಗಾಗಿ ಮುಂಬೈ ತಂಡವು ಶಿವಂ ದುಬೆ ಮತ್ತು ಆಯುಷ್ ಮ್ಹತ್ರೆಯನ್ನು ಕೇಳಿದ್ದು, ಇದಕ್ಕೆ ಒಪ್ಪದ ಸಿಎಸ್‌ಕೆ, ದುಬೆ ಜೊತೆಗೆ ₹10 ಕೋಟಿ ನಗದು ನೀಡುವ ಆಫರ್ ಇಟ್ಟಿದೆ. ಈ ರೇಸ್‌ನಲ್ಲಿ ಕೆಕೆಆರ್ ಕೂಡ ಆಸಕ್ತಿ ತೋರಿದೆ.

ಐಪಿಎಲ್ (IPL) ಅಂಗಳದಲ್ಲಿ ಒಂದು ಸುದ್ದಿ ಭಾರೀ ಸಂಚಲನ ಸೃಷ್ಟಿಸುತ್ತಿದೆ. ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮುಂಬರುವ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಲಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ 'ಬಿಗ್ ಟ್ರೇಡ್' ಡೀಲ್ ಅಷ್ಟು ಸುಲಭವಾಗಿಲ್ಲ. ಹಾರ್ದಿಕ್‌ನನ್ನು ಬಿಟ್ಟುಕೊಡಲು ಮುಂಬೈ ಇಂಡಿಯನ್ಸ್ ಮಾಲೀಕರು ಸಿಎಸ್‌ಕೆ ಮುಂದೆ ಇಟ್ಟಿರುವ ಡಿಮಾಂಡ್ ಕೇಳಿ ಫ್ರಾಂಚೈಸಿಗಳೇ ಬೆಚ್ಚಿಬಿದ್ದಿವೆ!

ಸಿಎಸ್‌ಕೆ ಪ್ಲಾನ್‌ಗೆ ಮುಂಬೈ ಶಾಕ್..!

ವರದಿಗಳ ಪ್ರಕಾರ..ಐಪಿಎಲ್ 2026ರ ಸೀಸನ್ ಮುಗಿದ ನಂತರ ಹಾರ್ದಿಕ್ ಪಾಂಡ್ಯ ಮುಂಬೈ ತಂಡವನ್ನು ತೊರೆಯುವುದು ಬಹುತೇಕ ಖಚಿತ. ಸ್ಟಾರ್ ಆಲ್‌ರೌಂಡರ್ ಹಾರ್ದಿಕ್‌ನನ್ನು ಹೇಗಾದರೂ ಮಾಡಿ ತಂಡಕ್ಕೆ ಸೇರಿಸಿಕೊಳ್ಳಲು ಸಿಎಸ್‌ಕೆ ಹವಣಿಸುತ್ತಿದೆ. ಮುಂಬೈ ಇಂಡಿಯನ್ಸ್ ಮಾತ್ರ ಹಾರ್ದಿಕ್ ಬದಲಿಗೆ ಚೆನ್ನೈನ ಅತಿ ದೊಡ್ಡ ಮ್ಯಾಚ್ ವಿನ್ನರ್ ಶಿವಂ ದುಬೆ ಮತ್ತು ಯುವ ಸೆನ್ಸೇಷನ್ ಆಯುಷ್ ಮ್ಹತ್ರೆ ಅವರನ್ನು ಟ್ರೇಡ್‌ನಲ್ಲಿ ನೀಡಬೇಕು ಎಂದು ಪಟ್ಟು ಹಿಡಿದಿದೆ ಎನ್ನಲಾಗಿದೆ.

₹10 ಕೋಟಿ ಆಫರ್ ನೀಡಿದ ಸಿಎಸ್‌ಕೆ?

ಭವಿಷ್ಯದ ಆಶಾಕಿರಣ ಎನ್ನಲಾಗಿರುವ ಯುವ ಆಟಗಾರ ಆಯುಷ್ ಮ್ಹತ್ರೆಯನ್ನು ಬಿಟ್ಟುಕೊಡಲು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಸಿದ್ಧವಿಲ್ಲ. ಹೀಗಾಗಿ ಸಿಎಸ್‌ಕೆ ಒಂದು ಬದಲಿ ಆಫರ್ ನೀಡಿದೆ ಎಂದು ತಿಳಿದುಬಂದಿದೆ. ಶಿವಂ ದುಬೆ ಅವರ ಜೊತೆಗೆ ಹೆಚ್ಚುವರಿಯಾಗಿ ₹10 ಕೋಟಿ ನಗದು ನೀಡಲು ಸಿಎಸ್‌ಕೆ ಒಪ್ಪಿಕೊಂಡಿದೆ ಎನ್ನಲಾಗುತ್ತಿದೆ. ಸೌತ್ ಆಫ್ರಿಕಾದ ಸ್ಟಾರ್ ಬ್ಯಾಟರ್ ಡೆವಾಲ್ಡ್ ಬ್ರೆವಿಸ್ ವಿಚಾರದಲ್ಲೂ ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿ ಹೊರಬಿದ್ದಿದೆ.

ರೇಸ್‌ನಲ್ಲಿ ಕೆಕೆಆರ್ ಎಂಟ್ರಿ.. ಹಾರ್ದಿಕ್ ಮನಸ್ಸಲ್ಲೇನಿದೆ?

ಒಂದು ವೇಳೆ ಮುಂಬೈ ಮತ್ತು ಸಿಎಸ್‌ಕೆ ನಡುವಿನ ಈ ಮಾತುಕತೆ ವಿಫಲವಾದರೆ ಹಾರ್ದಿಕ್ ಪಾಂಡ್ಯರನ್ನು ಸೆಳೆಯಲು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಕೂಡ ಸಿದ್ಧವಾಗಿದೆ. ಹಾರ್ದಿಕ್ ಪಾಂಡ್ಯ ಮಾತ್ರ ಎಂ.ಎಸ್. ಧೋನಿ ಅವರೊಂದಿಗೆ ಮಾತನಾಡಿದ್ದು, ಧೋನಿ ಮಾರ್ಗದರ್ಶನದಲ್ಲಿ ಸಿಎಸ್‌ಕೆ ಪರ ಆಡಲು ಮೊದಲ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಟ್ರೇಡ್ ಯಶಸ್ವಿಯಾದರೆ, ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಮತ್ತು ಪವರ್‌ಫುಲ್ ಆಟಗಾರರ ಅದಲು-ಬದಲು ಪ್ರಕ್ರಿಯೆಯಾಗಲಿದೆ. ₹10 ಕೋಟಿ ನಗದು ಮತ್ತು ಸ್ಟಾರ್ ಆಲ್‌ರೌಂಡರ್ ಶಿವಂ ದುಬೆ ಅವರ ಬಲಿಯಾಗುತ್ತಾ? ಅಥವಾ ಮುಂಬೈ ತನ್ನ ಡಿಮಾಂಡ್ ಬದಲಿಸಿಕೊಳ್ಳುತ್ತಾ? ಎಂಬುದನ್ನು ಕಾದು ನೋಡಬೇಕಿದೆ.