ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ಬಗ್ಗೆ ಮೊಹಮ್ಮದ್ ಶಮಿ ಪ್ರತಿಕ್ರಿಯಿಸಿದ್ದಾರೆ. ತಮ್ಮನ್ನು 'ಕಾರ್ಮಿಕ' ಎಂದು ಕರೆದುಕೊಂಡ ಅವರು, ಕಠಿಣ ಪರಿಶ್ರಮವೇ ಮುಖ್ಯ ಎಂದಿದ್ದಾರೆ. ಬಂಗಾಳವನ್ನು ತಮ್ಮ ಕರ್ಮಭೂಮಿ ಎಂದು ಬಣ್ಣಿಸಿದ ಶಮಿ, ಈಡನ್ ಗಾರ್ಡನ್ಸ್ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದ್ದಾರೆ.
ಕೋಲ್ಕತಾ: ದೇಶೀಯ ಕ್ರಿಕೆಟ್ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಟೀಂ ಇಂಡಿಯಾಗೆ ಯಾಕೆ ಆಯ್ಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಲಖನೌ ಸೂಪರ್ ಜೈಂಟ್ಸ್ ವೇಗಿ ಮೊಹಮ್ಮದ್ ಶಮಿ ಖಡಕ್ ಉತ್ತರ ನೀಡಿದ್ದಾರೆ. ಐಪಿಎಲ್ನಲ್ಲಿ ಹೈದರಾಬಾದ್ ವಿರುದ್ಧದ ಕಳೆದ ಪಂದ್ಯದಲ್ಲಿ ಶಮಿ ನಾಲ್ಕು ಓವರ್ಗಳಲ್ಲಿ ಕೇವಲ 9 ರನ್ ನೀಡಿ ಎರಡು ವಿಕೆಟ್ ಪಡೆದು ಭರ್ಜರಿ ಪ್ರದರ್ಶನ ನೀಡಿದ್ದರು. ಇದೀಗ ತಮ್ಮ ತವರು ನೆಲವಾದ ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ವೇಳೆ, ಟೀಂ ಇಂಡಿಯಾ ಆಯ್ಕೆ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ನಾವು ಕಾರ್ಮಿಕರು, ಬೌಲಿಂಗ್ ಮಾಡುವುದಷ್ಟೇ ನಮ್ಮ ಕೆಲಸ
ಬಂಗಾಳ ಪ್ರೊ ಟಿ20 ಲೀಗ್ನ ಮೂರನೇ ಸೀಸನ್ ಉದ್ಘಾಟನಾ ಸಮಾರಂಭದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆ ಮತ್ತು ರಿಂಕು ಸಿಂಗ್ ಜೊತೆ ಶಮಿ ವೇದಿಕೆ ಹಂಚಿಕೊಂಡಿದ್ದರು. ಈ ವೇಳೆ ಮಾತನಾಡಿದ ಅವರು "ನಾವು ಮಜ್ದೂರ್ (ಕಾರ್ಮಿಕ) ಇದ್ದ ಹಾಗೆ, ಬೌಲಿಂಗ್ ಮಾಡೋದು ಅಷ್ಟೇ ನಮ್ಮ ಕೆಲಸ. ಜೀವನ ಮತ್ತು ವೃತ್ತಿಜೀವನದಲ್ಲಿ ಏಳುಬೀಳುಗಳು, ಗಾಯಗಳು ಸಹಜ. ಆದರೆ ನಾವು ಕಠಿಣ ಪರಿಶ್ರಮವನ್ನು ಎಂದಿಗೂ ಮರೆಯಬಾರದು. ಐಷಾರಾಮಿ ಜೀವನ ಮತ್ತು ಸೋಶಿಯಲ್ ಮೀಡಿಯಾ ಹಿಂದೆ ಬಿದ್ದರೆ, ಅದು ನಮ್ಮ ದೌರ್ಬಲ್ಯವಾಗಿ ಬದಲಾಗುತ್ತದೆ" ಎಂದು ಶಮಿ ಹೇಳಿದರು.
"ನಾನು ರೈತ ಕುಟುಂಬದಿಂದ ಬಂದವನು, ನನ್ನ ಬೇರುಗಳನ್ನು ಮರೆತಿಲ್ಲ. ಆಟದ ಮೇಲಿನ ನನ್ನ ಉತ್ಸಾಹ ಇಂದಿಗೂ ಹಾಗೆಯೇ ಇದೆ" ಎಂದು ಶಮಿ ಹೇಳಿದ್ದಾರೆ. "ಈಡನ್ ಗಾರ್ಡನ್ಸ್ನಲ್ಲಿ ಆಡುವಾಗ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತೇನೆ. ಇಲ್ಲಿನ ಪಿಚ್ ಮತ್ತು ಪರಿಸ್ಥಿತಿಗಳು ನನಗೆ ಚೆನ್ನಾಗಿ ಗೊತ್ತು. ಲಖನೌ ಪರ ಕೆಕೆಆರ್ ವಿರುದ್ಧ ಆಡುವಾಗ 'ಸ್ಥಳೀಯ' ಆಟಗಾರನಾಗಿ ನನಗೆ ಆ ಅನುಕೂಲ ಸಿಗಲಿದೆ. ನಾನು ಹುಟ್ಟಿದ್ದು ಯುಪಿಯಲ್ಲಾದರೂ, ಬಂಗಾಳ ನನ್ನ ಕರ್ಮಭೂಮಿ" ಎಂದು ಶಮಿ ಪುನರುಚ್ಚರಿಸಿದರು. "ನಾನು ಯಾವಾಗಲೂ ದೇಶೀಯ ಕ್ರಿಕೆಟ್ಗೆ ಆದ್ಯತೆ ನೀಡುತ್ತೇನೆ. ಜೀವ ಇರುವವರೆಗೂ ಬಂಗಾಳ ಪರವಾಗಿ ನಾನು ಆಡುತ್ತೇನೆ" ಎಂದು ಶಮಿ ಭರವಸೆ ನೀಡಿದರು.
ಗಾಯದ ಬಳಿಕ ಭರ್ಜರಿ ಕಮ್ಬ್ಯಾಕ್ ಮಾಡಿರುವ ಶಮಿ
ಗಾಯದ ನಂತರ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಶಮಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೇವಲ 9 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಅವರು ಎಸೆದ 24 ಎಸೆತಗಳಲ್ಲಿ 18 ಡಾಟ್ ಬಾಲ್ಗಳಿದ್ದವು. ಕಳೆದ ರಣಜಿ ಟ್ರೋಫಿ ಸೀಸನ್ನಲ್ಲಿ 16.72 ಸರಾಸರಿಯಲ್ಲಿ 37 ವಿಕೆಟ್ಗಳನ್ನು ಪಡೆದು, ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ ಆರು ಬೌಲರ್ಗಳಲ್ಲಿ ಶಮಿ ಒಬ್ಬರಾಗಿದ್ದರು. ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಸೆಮಿಫೈನಲ್ನಲ್ಲಿ 90 ರನ್ಗಳಿಗೆ 8 ವಿಕೆಟ್ ಪಡೆದ ಶಮಿ ಪ್ರದರ್ಶನ ಗಮನ ಸೆಳೆದಿತ್ತು. ಇಂದು ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್, ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಸತತ ಮೂರು ಸೋಲುಗಳ ನಂತರ ಕೆಕೆಆರ್ ತನ್ನ ತವರಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.


