ಟಿ20 ಮಾದರಿಯಿಂದ ತಮ್ಮನ್ನು ಹೊರಗಿಟ್ಟಿರುವುದಕ್ಕೆ ವೇಗಿ ಮೊಹಮ್ಮದ್ ಶಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ವರ್ಷಗಳ ಐಪಿಎಲ್ ಅಂಕಿಅಂಶಗಳನ್ನು ಉಲ್ಲೇಖಿಸಿ, ತಾನು ಅತ್ಯುತ್ತಮ ಪ್ರದರ್ಶನ ನೀಡಿದ್ದರೂ ತನ್ನನ್ನು ಟಿ20 ಬೌಲರ್ ಅಲ್ಲ ಎಂದು ಪರಿಗಣಿಸುವುದನ್ನು ಅವರು ಪ್ರಶ್ನಿಸಿದ್ದಾರೆ. ಸದ್ಯಕ್ಕೆ ನಿವೃತ್ತಿಯಾಗುವ ಯೋಚನೆ ಇಲ್ಲವೆಂದು ಶಮಿ ಸ್ಪಷ್ಟಪಡಿಸಿದ್ದಾರೆ.

ಲಖನೌ: ಟಿ20 ಫಾರ್ಮ್ಯಾಟ್‌ನಿಂದ ತಮ್ಮನ್ನು ಹೊರಗಿಡುತ್ತಿರುವ ಬಗ್ಗೆ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಕಳೆದ ಐದಾರು ವರ್ಷಗಳ ಐಪಿಎಲ್ ಅಂಕಿಅಂಶಗಳನ್ನು ನೋಡಿದರೆ, ಬೇರೆ ಯಾವುದೇ ಭಾರತೀಯ ಬೌಲರ್‌ಗಿಂತ ತಾನೇ ಉತ್ತಮ ಪ್ರದರ್ಶನ ನೀಡಿದ್ದೇನೆ. ಆದರೂ ತನ್ನನ್ನು ಟಿ20 ಬೌಲರ್ ಅಲ್ಲ ಎಂದು ಹೇಳುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಮಿ ಹೇಳಿದ್ದಾರೆ. ಸದ್ಯಕ್ಕೆ ನಿವೃತ್ತಿಯಾಗುವ ಯೋಚನೆ ಇಲ್ಲ, ಯಾವಾಗ ಆಟದಲ್ಲಿ ಬೇಸರ ಬರುತ್ತದೆಯೋ ಆಗ ನಿಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಪದೇ ಪದೇ ಕಡೆಗಣಿಸುತ್ತಿರುವ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್‌ಗೆ ಖಡಕ್‌ ಆಗಿ ತಿರುಗೇಟು ನೀಡಿದ್ದಾರೆ.

ಸಾಮರ್ಥ್ಯವನ್ನು ಪ್ರಶ್ನಿಸುವವರು ಮೊದಲು ಅಂಕಿಅಂಶಗಳನ್ನು ನೋಡಲಿ

"ಯಾರೂ ಬಂದು ನನ್ನ ಅಂಕಿ-ಅಂಶಗಳನ್ನು ಹೊಗಳಬೇಕಿಲ್ಲ. ನಿಮ್ಮಲ್ಲಿ ಸಾಮರ್ಥ್ಯ ಇದ್ದರೆ, ಯಾಕೆ ಅಂಕಿಅಂಶಗಳನ್ನು ನೋಡಿ ಅಳೆಯಬೇಕು? ನನ್ನ ಐಪಿಎಲ್ ರೆಕಾರ್ಡ್ಸ್ ನೋಡಿ, ಕಳೆದ 5-6 ವರ್ಷಗಳಲ್ಲಿ ಯಾವ ಭಾರತೀಯ ಬೌಲರ್ ಆದ್ರೂ ನನ್ನ ರೆಕಾರ್ಡ್ ಹತ್ತಿರ ಬಂದಿದ್ದಾರಾ? ಆದರೂ ನಾನು ಟಿ20 ಬೌಲರ್ ಅಲ್ಲ ಅಂತಾರೆ. ಕಳೆದ ಕೆಲವು ವರ್ಷಗಳಲ್ಲಿ ನಾನು 130 ವಿಕೆಟ್ ಪಡೆದಿದ್ದೇನೆ. ನಿಮಗೆ ಇನ್ನೇನು ಬೇಕು?" ಎಂದು ಶಮಿ ಪ್ರಶ್ನಿಸಿದ್ದಾರೆ.

ಟಿ20 ಫಾರ್ಮ್ಯಾಟ್‌ನಲ್ಲಿ ತಾನು ಈಗಲೂ ಬಲಿಷ್ಠನಾಗಿದ್ದೇನೆ ಎಂಬುದನ್ನು ಶಮಿ ಇತ್ತೀಚಿನ ಪ್ರದರ್ಶನಗಳ ಮೂಲಕ ಸಾಬೀತುಪಡಿಸಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ 7 ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದರು. ಆದರೂ, 2026ರ ಟಿ20 ವಿಶ್ವಕಪ್ ತಂಡದಲ್ಲಿ ಹರ್ಷಿತ್ ರಾಣಾ ಬದಲಿಗೆ ಆಯ್ಕೆ ಸಮಿತಿಯು ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿತು. ಶಮಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ್ದು 2025ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ.

ನಿವೃತ್ತಿ ಯೋಚನೆ ಸದ್ಯಕ್ಕಿಲ್ಲ!

ನಿವೃತ್ತಿ ಬಗ್ಗೆ ಸದ್ಯಕ್ಕೆ ಯೋಚಿಸುತ್ತಿಲ್ಲ ಎಂದು ಶಮಿ ಹೇಳಿದ್ದಾರೆ. "ಅಂತಹ ಆಲೋಚನೆಗಳು ನಮ್ಮನ್ನು ದುರ್ಬಲಗೊಳಿಸುತ್ತವೆ. ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದೀರಿ ಎಂದರೆ, ನೀವು ಈಗಾಗಲೇ ಸೋತಿದ್ದೀರಿ ಎಂದರ್ಥ. ನನಗೆ ಆಲಸ್ಯವಾಗಲಿ, ಬೇಸರವಾಗಲಿ ಇಲ್ಲ. ನಾನು ಆಟವನ್ನು ಎಂಜಾಯ್ ಮಾಡುತ್ತಿದ್ದೇನೆ. ನನಗೆ ಬೇಜಾರಾದಾಗ ಆಟ ನಿಲ್ಲಿಸುತ್ತೇನೆ," ಎಂದಿದ್ದಾರೆ.

ತಂಡದಲ್ಲಿ ಸ್ಥಾನ ಸಿಗದಿರಲು ಪಿ.ಆರ್. ಏಜೆನ್ಸಿಗಳ ಕೊರತೆಯೇ ಕಾರಣವೇ ಎಂಬ ಪ್ರಶ್ನೆಗೆ ಶಮಿ 'ಹೌದು' ಎಂದು ಉತ್ತರಿಸಿದ್ದಾರೆ. "ಪಿಆರ್ ಒಂದು ದೊಡ್ಡ ಫ್ಯಾಕ್ಟರ್. ಹಲವು ಕಂಪನಿಗಳು ಆಟಗಾರರಿಗಾಗಿ ಇದನ್ನು ಮಾಡುತ್ತವೆ. ಆದರೆ ನನಗೆ ಅದೃಷ್ಟದ ಮೇಲೆ ನಂಬಿಕೆ ಇದೆ. ಯಾರಾದರೂ ನನ್ನನ್ನು ಸ್ವಲ್ಪ ಕಾಲ ತಡೆಯಬಹುದು, ಆದರೆ ನಾನು ಅದನ್ನು ಪಾಸಿಟಿವ್ ಆಗಿಯೇ ನೋಡುತ್ತೇನೆ," ಎಂದು ಶಮಿ ಹೇಳಿದ್ದಾರೆ.

ಕಳೆದ ಸೀಸನ್‌ಗಳಲ್ಲಿ ಗುಜರಾತ್ ಟೈಟಾನ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದ ಶಮಿ, ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಫಿಟ್‌ನೆಸ್ ಮರಳಿ ಪಡೆದರೂ ತಮ್ಮನ್ನು ಕಡೆಗಣಿಸುತ್ತಿರುವ ಬಿಸಿಸಿಐ ಆಯ್ಕೆ ಸಮಿತಿಗೆ, ಐಪಿಎಲ್‌ನಲ್ಲಿನ ಪ್ರದರ್ಶನದ ಮೂಲಕವೇ ಬಲವಾದ ಉತ್ತರ ನೀಡಲು ಶಮಿ ಸಜ್ಜಾಗಿದ್ದಾರೆ.

2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್‌ಗೇರಲು ಮತ್ತು 2025ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಶಮಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಗಾಯದ ಕಾರಣದಿಂದಾಗಿ ಸ್ವಲ್ಪ ಕಾಲ ತಂಡದಿಂದ ಹೊರಗುಳಿದಿದ್ದರು. ಸಂಪೂರ್ಣ ಫಿಟ್‌ನೆಸ್ ಮರಳಿ ಪಡೆದರೂ ಆಯ್ಕೆ ಸಮಿತಿ ಅವರನ್ನು ಕಡೆಗಣಿಸಿತ್ತು. ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಸರಣಿಗಳು ಮತ್ತು ಟಿ20 ವಿಶ್ವಕಪ್‌ಗೂ ಶಮಿಯನ್ನು ಪರಿಗಣಿಸಿರಲಿಲ್ಲ. 2025-26ರ ದೇಶೀಯ ಸೀಸನ್‌ನಲ್ಲಿ ಬಂಗಾಳ ಪರ 67 ವಿಕೆಟ್ ಪಡೆದು ಉತ್ತಮ ಫಾರ್ಮ್‌ನಲ್ಲಿದ್ದರೂ, ಅಜಿತ್ ಅಗರ್ಕರ್ ನೇತೃತ್ವದ ಸಮಿತಿ ಶಮಿಯನ್ನು ಕೈಬಿಟ್ಟಿತ್ತು. ಅಗರ್ಕರ್ ವಿರುದ್ಧ ಶಮಿ ಮಾಡಿದ ಬಹಿರಂಗ ಹೇಳಿಕೆಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.