ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭವಿಷ್ಯದ ನಾಯಕನಾಗಿ ಸಂಜು ಸ್ಯಾಮ್ಸನ್ ಹೆಸರು ಚರ್ಚೆಯಲ್ಲಿದೆ. ಆದರೆ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಸಂಜುಗೆ ತಕ್ಷಣವೇ ನಾಯಕತ್ವ ನೀಡುವುದು ದೊಡ್ಡ ಪ್ರಮಾದವಾಗಲಿದೆ ಎಂದು ಎಚ್ಚರಿಸಿದ್ದಾರೆ. ತಂಡದ ಸಂಸ್ಕೃತಿಗೆ ಹೊಂದಿಕೊಳ್ಳಲು ಸಂಜುಗೆ ಸಮಯ ನೀಡಬೇಕು ಎಂದಿದ್ದಾರೆ
ಚೆನ್ನೈ: ಐಪಿಎಲ್ ಸೀಸನ್ನಲ್ಲಿ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಭವಿಷ್ಯದ ಸೂಪರ್ ಸ್ಟಾರ್ ಆಗಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಇದರ ಜೊತೆಗೆ, ಸಂಜು ಅವರೇ ತಂಡವನ್ನು ಮುನ್ನಡೆಸಬೇಕು ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ, ಸಂಜುಗೆ ಈಗಲೇ ನಾಯಕತ್ವ ನೀಡುವುದು ದೊಡ್ಡ ಪ್ರಮಾದವಾಗಲಿದೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಎಚ್ಚರಿಸಿದ್ದಾರೆ. ಸಂಜು ಸ್ಯಾಮ್ಸನ್ ಒಬ್ಬ ಅತ್ಯುತ್ತಮ ಆಟಗಾರ, ಆದರೆ ಚೆನ್ನೈ ತಂಡದ ಸಂಸ್ಕೃತಿ ಮತ್ತು ಅಭಿಮಾನಿಗಳ ನಿರೀಕ್ಷೆಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಮಯ ನೀಡಬೇಕು ಎಂದು ಕೈಫ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ.
ಆ ತಪ್ಪು ಮಾಡಬೇಡಿ ಎಂದ ಮೊಹಮ್ಮದ್ ಕೈಫ್
"ಸಂಜುಗೆ ಈಗಲೇ ಕ್ಯಾಪ್ಟನ್ಸಿ ಕೊಡುವುದು ತಪ್ಪು ನಿರ್ಧಾರ. ಯಾಕಂದ್ರೆ, ಅವರಿಗೆ ಇನ್ನೂ ಚೆನ್ನೈ ತಂಡದ ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಅಲ್ಲಿನ ಅಭಿಮಾನಿಗಳು, ಅವರ ದೊಡ್ಡ ಮಟ್ಟದ ನಿರೀಕ್ಷೆಗಳು ಮತ್ತು ತಂಡದ ಇತರ ಆಟಗಾರರನ್ನು ಹತ್ತಿರದಿಂದ ತಿಳಿಯಲು ಸಂಜುಗೆ ಸಮಯ ಬೇಕು," ಎಂದು ಮೊಹಮ್ಮದ್ ಕೈಫ್ ವಿವರಿಸಿದ್ದಾರೆ.
ಯುವ ಆಟಗಾರರಿಗೆ ತಕ್ಷಣವೇ ದೊಡ್ಡ ಜವಾಬ್ದಾರಿಗಳನ್ನು ನೀಡುವುದರಿಂದ ಅವರ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ ಎಂದು ಕೈಫ್ ಬೆಟ್ಟು ಮಾಡಿದ್ದಾರೆ. ಟೀಂ ಇಂಡಿಯಾದಲ್ಲಿ ಶುಭಮನ್ ಗಿಲ್ ವಿಚಾರದಲ್ಲಿ ಆದ ತಪ್ಪನ್ನು ಸಿಎಸ್ಕೆ ಪುನರಾವರ್ತಿಸಬಾರದು ಎಂದು ಕೈಫ್ ನೆನಪಿಸಿದ್ದಾರೆ. "ಎಲ್ಲಾ ಜವಾಬ್ದಾರಿಗಳನ್ನು ಒಂದೇ ಬಾರಿಗೆ ಒಬ್ಬರ ತಲೆಗೆ ಕಟ್ಟುವುದು ಸರಿಯಲ್ಲ. ಅದು ಆಟಗಾರನ ಸಹಜ ಆಟದ ಮೇಲೆ ಪರಿಣಾಮ ಬೀರುತ್ತದೆ. ಧೋನಿಯ ಉತ್ತರಾಧಿಕಾರಿಯಾಗಿ ಸಂಜು ಅವರನ್ನು ರೂಪಿಸುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಯೋಜನೆ. ಆದರೆ, ಅದನ್ನು ನಿಧಾನವಾಗಿ ಮಾಡಬೇಕು. ಒಂದು ಅಥವಾ ಎರಡು ವರ್ಷ ಸಂಜು ಒಬ್ಬ ಬ್ಯಾಟರ್ ಆಗಿ ಅಲ್ಲಿ ಆಡಲಿ. ಆ ನಂತರವಷ್ಟೇ ನಾಯಕತ್ವದ ಬಗ್ಗೆ ಯೋಚಿಸಿದರೆ ಸಾಕು" ಎಂದು ಕೈಫ್ ಸಲಹೆ ನೀಡಿದ್ದಾರೆ.
ಹಾಲಿ ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಈಗ ಬದಲಾಯಿಸಬಾರದು ಎಂದೂ ಕೈಫ್ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಋತುರಾಜ್ ತಂಡದ ಭಾಗವಾಗಿದ್ದು, ಅವರಿಗೆ ತಂಡದ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇದೆ ಎಂದು ಕೈಫ್ ತಿಳಿಸಿದ್ದಾರೆ. 2024ರಲ್ಲಿ ಧೋನಿ ನಂತರ ನಾಯಕರಾದ ಋತುರಾಜ್ ನಾಯಕತ್ವದಲ್ಲಿ ತಂಡ ಪ್ಲೇಆಫ್ ತಲುಪಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ, ಸಂಜು ಅವರನ್ನು ನಾಯಕರನ್ನಾಗಿ ಮಾಡಬೇಕೆಂಬ ಕೂಗು ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆದರೂ, ಸಂಜು ಮೇಲೆ ತಕ್ಷಣವೇ ದೊಡ್ಡ ಜವಾಬ್ದಾರಿ ಹೊರಿಸದೆ, ತಂಡದಲ್ಲಿ ಹೊಂದಿಕೊಳ್ಳಲು ಸಮಯ ನೀಡಬೇಕು ಎಂಬುದು ಕೈಫ್ ಅವರ ಅಭಿಪ್ರಾಯ.
ನಾಯಕನಾಗಿ ಅಪಾರ ಅನುಭವ ಇರುವ ಸಂಜು ಸ್ಯಾಮ್ಸನ್:
ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ನಾಯಕನಾಗಿ ಅಪಾರ ಅನುಭವ ಹೊಂದಿದ್ದಾರೆ. ಈಗಾಗಲೇ ಸಂಜು ಸ್ಯಾಮ್ಸನ್ ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿ ಒಮ್ಮೆ ಫೈನಲ್ಗೂ ಕೊಂಡೊಯ್ದಿದ್ದರು. ಹೀಗಾಗಿ ಭವಿಷ್ಯದ ನಾಯಕತ್ವದ ದೃಷ್ಟಿಯಿಂದ ಸಂಜು ಸ್ಯಾಮ್ಸನ್ ಅವರನ್ನು ರಾಜಸ್ಥಾನ ರಾಯಲ್ಸ್ನಿಂದ ಚೆನ್ನೈ ಸೂಪರ್ ಕಿಂಗ್ಸ್ಗೆ ಕರೆ ತರಲಾಗಿದೆ ಎನ್ನಲಾಗುತ್ತಿದೆ.


