ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್‌ ವಿಕ್ರಂ ರಾಥೋಡ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಅಹಮದಾಬಾದ್‌(ಮಾ.17): ಸಾಲು ಸಾಲು ಬ್ಯಾಟಿಂಗ್‌ ವೈಫಲ್ಯ. ಕಳೆದ 4 ಟಿ20 ಪಂದ್ಯಗಳಲ್ಲಿ ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸುವ ಮೂಲಕ ರನ್‌ ಬರ ಅನುಭವಿಸುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಮತ್ತೆ ತಂಡದಲ್ಲಿ ಸ್ಥಾನ ಸಿಗುತ್ತಾ ಎನ್ನುವ ಪ್ರಶ್ನೆ ಆರಂಭವಾಗಿದೆ.

ಆಸ್ಟ್ರೇಲಿಯಾ ವಿರುದ್ದದ ಕೊನೆಯ ಟಿ20 ಪಂದ್ಯದಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ರಾಹುಲ್‌, ಇಂಗ್ಲೆಂಡ್‌ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಕೇವಲ ಒಂದು ರನ್‌ ಬಾರಿಸಿದ್ದರು. ಇನ್ನು ಎರಡು ಹಾಗೂ ಮೂರನೇ ಟಿ20 ಪಂದ್ಯದಲ್ಲಿ ರಾಹುಲ್ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದಾರೆ. ಹೀಗಿರುವಾಗಲೇ ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್‌ ವಿಕ್ರಂ ರಾಥೋಡ್‌ ಕನ್ನಡಿಗ ರಾಹುಲ್‌ ಪರ ಬ್ಯಾಟ್‌ ಬೀಸಿದ್ದಾರೆ.

ನಮ್ಮ ಕ್ರಿಕೆಟ್‌ ಆಡಳಿತ ಮಂಡಳಿ ಕಠಿಣ ಸಂದರ್ಭಗಳಲ್ಲಿ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತದೆ. ಈಗ ರಾಹುಲ್ ಅವರನ್ನೇ ತೆಗೆದುಕೊಂಡರೆ, ರಾಹುಲ್‌ ಕಳೆದ ಕೆಲ ವರ್ಷಗಳಿಂದ ತಂಡದ ಸಾಕಷ್ಟು ಉತ್ತಮವಾಗಿ ಆಡಿದ್ದಾರೆ. ಹಾಗಾಗಿ ಕೆಲವೊಂದು ವೈಫಲ್ಯಗಳಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ರಾಹುಲ್‌ ನಮ್ಮ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು ಎಂದು ವಿಕ್ರಂ ರಾಥೋಡ್‌ ಹೇಳಿದ್ದಾರೆ.

ಟೀಂ ಇಂಡಿಯಾ ಮೇಲೆ ಕಿಡಿಕಾರಿದ ಗೌತಮ್ ಗಂಭೀರ್..!

ಐಸಿಸಿ ಟಿ20 ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿರುವ ರಾಹುಲ್‌, ಭಾರತ ಪರ ಗರಿಷ್ಠ ಶ್ರೇಯಾಂಕ ಹೊಂದಿದ ಆಟಗಾರ ಎನಿಸಿದ್ದಾರೆ. ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಗರಿಷ್ಠ ರನ್‌ ಬಾರಿಸುವ ಮೂಲಕ ಕೆ.ಎಲ್‌. ರಾಹುಲ್‌ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದರು.