ಟೀಂ ಇಂಡಿಯಾ 3ನೇ ಟಿ20 ಪಂದ್ಯದಲ್ಲಿ ಮಾಡಿದ ಒಂದು ಎಡವಟ್ಟಿನ ಬಗ್ಗೆ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್ ಕಿಡಿಕಾರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್‌(ಮಾ.17): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ದ ಆತಿಥೇಯ ಭಾರತ ತಂಡ 8 ವಿಕೆಟ್‌ಗಳ ಹೀನಾಯ ಸೋಲು ಕಂಡಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಮೇಲೆ ಟೀಕೆಯ ಸುರಿಮಳೆಯೇ ಬರಲಾರಂಭಿಸಿದೆ. 

Add Asianetnews Kannada as a Preferred SourcegooglePreferred

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಹಾಲಿ ಸಂಸದ ಗೌತಮ್‌ ಗಂಭೀರ್‌, ಮೂರನೇ ಟಿ20 ಪಂದ್ಯದಿಂದ ಸೂರ್ಯಕುಮಾರ್ ಯಾದವ್‌ರನ್ನು ತಂಡದಿಂದ ಹೊರಬಿಟ್ಟಿದ್ದಕ್ಕೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಸಾಕಷ್ಟು ಕಾಯುವಿಕೆಯ ಬಳಿಕ ಇಂಗ್ಲೆಂಡ್‌ ವಿರುದ್ದದ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ಇಶನ್‌ ಕಿಶನ್ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್‌ಗಳ ಜಯ ದಾಖಲಿಸಿತ್ತು. ಹೀಗಾಗಿ ಸೂರ್ಯಕುಮಾರ್ ಯಾದವ್‌ಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. 

ಟೀಂ ಇಂಡಿಯಾಗೆ ಶಾಕ್; 3ನೇ ಟಿ20 ಪಂದ್ಯದಲ್ಲಿ ಮುಗ್ಗರಿಸಿದ ಕೊಹ್ಲಿ ಸೈನ್ಯ!

ಒಂದು ವೇಳೆ ಗಾಯದ ಸಮಸ್ಯೆ ಎದುರಾಯಿತು ಎಂದಿಟ್ಟುಕೊಳ್ಳಿ. ಆಗ ಸೂರ್ಯಕುಮಾರ್ ಯಾದವ್‌ ಅವರಿಂದ ಏನನ್ನು ನಿರೀಕ್ಷಿಸುತ್ತೀರಿ. ಯಾರೂ ಗಾಯಕ್ಕೆ ತುತ್ತಾಗದಿರಲಿ ಎಂದು ನಾನು ಆಶಿಸುತ್ತೇನೆ. ಆದರೆ ಒಂದು ವೇಳೆ ಯಾರಾದರೂ ಗಾಯಕ್ಕೆ ತುತ್ತಾಗಿ ನಾಲ್ಕು ಅಥವಾ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಮಾಡುವ ಪರಿಸ್ಥಿತಿ ಬಂದರೆ ಯಾರನ್ನು ಕಣಕ್ಕಿಳಿಸುತ್ತೀರಾ?. ಶ್ರೇಯಸ್ ಅಯ್ಯರ್‌ಗೆ ಪರ್ಯಾಯವಾಗಿ ಯಾರಿಗೆ ಅವಕಾಶ ನೀಡುತ್ತೀರಾ ಎಂದು ಟೀಂ ಇಂಡಿಯಾ ಆಡಳಿತ ಮಂಡಳಿಯನ್ನು ಗೌತಿ ಪ್ರಶ್ನಿಸಿದ್ದಾರೆ. 

ಇನ್ನು ಸೂರ್ಯಕುಮಾರ್ ಯಾದವ್‌ಗೆ ಸರಿಯಾದ ಅವಕಾಶ ನೀಡದೇ ಬೆಂಚ್‌ ಕಾಯಿಸುವಂತೆ ಮಾಡಿದ್ದು ಅತ್ಯಂತ ಕಠಿಣ ನಿರ್ಧಾರ ಎಂದು ಇಂಗ್ಲೆಂಡ್‌ ಮಾಜಿ ಸ್ಪಿನ್ನರ್ ಗ್ರೇಮ್‌ ಸ್ವಾನ್‌ ತಿಳಿಸಿದ್ದಾರೆ.