ಇಂಗ್ಲೆಂಡ್ನ 'ದ ಹಂಡ್ರೆಡ್' ಕ್ರಿಕೆಟ್ ಟೂರ್ನಿಯಲ್ಲಿ ಕಾವ್ಯಾ ಮಾರನ್ ಮಾಲೀಕತ್ವದ 'ಸನ್ರೈಸರ್ಸ್ ಲೀಡ್ಸ್' ತಂಡವು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ. ನೀಡಿ ಖರೀದಿಸಿದೆ. ಭಾರತ-ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ನಡೆದ ಈ ಖರೀದಿಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಲಂಡನ್/ಹೈದರಾಬಾದ್ (ಮಾ.12): ಇಂಗ್ಲೆಂಡ್ನ 'ದ ಹಂಡ್ರೆಡ್' (The Hundred) ಕ್ರಿಕೆಟ್ ಟೂರ್ನಿಯ ಹೊಸ ಸೀಸನ್ಗಾಗಿ ನಡೆದ ಹರಾಜಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಒಡತಿ ಕಾವ್ಯಾ ಮಾರನ್ ಅವರ ಫ್ರಾಂಚೈಸಿ ಅಚ್ಚರಿಯ ನಿರ್ಧಾರ ಕೈಗೊಂಡಿದೆ. ಕಾವ್ಯಾ ಮಾರನ್ ಮಾಲೀಕತ್ವದ 'ಸನ್ ರೈಸರ್ಸ್ ಲೀಡ್ಸ್' ತಂಡವು ಪಾಕಿಸ್ತಾನದ ಆಟಗಾರನ ಮೇಲೆ ಕೋಟಿಗಟ್ಟಲೆ ಹಣ ಸುರಿದು ಖರೀದಿಸಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಆಕ್ರೋಶಕ್ಕೆ ಕಾರಣವಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದೊಂದಿಗೆ ಎಲ್ಲಾ ಸಂಬಂಧಗಳನ್ನು ಕಡಿದುಕೊಂಡಿದೆ. ಇತ್ತೀಚಿನ ಐಸಿಸಿ ಟೂರ್ನಿಗಳಲ್ಲಿ ಭಾರತೀಯ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡುವುದನ್ನೂ ತಪ್ಪಿಸಿದ್ದರು. ಏಷ್ಯಾ ಕಪ್ ಟ್ರೋಫಿಯನ್ನು ಮೊಹ್ಸಿನ್ ನಖ್ವಿ ಅವರ ಕೈಯಿಂದ ಪಡೆಯಲು ಭಾರತ ನಿರಾಕರಿಸಿದ್ದು ಪಾಕಿಸ್ತಾನದ ಮೇಲಿನ ಆಕ್ರೋಶಕ್ಕೆ ಸಾಕ್ಷಿಯಾಗಿತ್ತು. ಇಂತಹ ಸಂದರ್ಭದಲ್ಲಿ ಕಾವ್ಯಾ ಮಾರನ್ ಅವರ ಫ್ರಾಂಚೈಸಿ ಪಾಕ್ ಆಟಗಾರನನ್ನು ಖರೀದಿಸಿರುವುದು ಆಘಾತಕ್ಕೆ ಕಾರಣವಾಗಿದೆ.
2.34 ಕೋಟಿ ನೀಡಿ ಅಬ್ರಾರ್ ಅಹ್ಮದ್ ಖರೀದಿ
ಸನ್ ರೈಸರ್ಸ್ ಲೀಡ್ಸ್ ತಂಡವು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂಪಾಯಿಗಳಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಅಬ್ರಾರ್ ಅವರನ್ನು ಪಡೆಯಲು 'ಟ್ರೆಂಟ್ ರಾಕೆಟ್ಸ್' ತಂಡ ಕೂಡ ಪೈಪೋಟಿ ನಡೆಸಿತು. ಆದರೆ ಅಂತಿಮವಾಗಿ ಸನ್ ರೈಸರ್ಸ್ ದೊಡ್ಡ ಮೊತ್ತದ ಬಿಡ್ ಮಾಡಿ ಅಬ್ರಾರ್ ಅವರನ್ನು ತನ್ನದಾಗಿಸಿಕೊಂಡಿತು. ಇದು 2009ರ ನಂತರ ಭಾರತೀಯ ಮಾಲೀಕತ್ವದ ತಂಡವೊಂದು ಪಾಕಿಸ್ತಾನಿ ಕ್ರಿಕೆಟಿಗನನ್ನು ಖರೀದಿಸಿದ ಮೊದಲ ಘಟನೆಯಾಗಿದೆ.
ಐಪಿಎಲ್ ಸನ್ರೈಸರ್ಸ್ ತಂಡದ ಬಹಿಷ್ಕಾರಕ್ಕೆ ಕರೆ
ಪಾಕಿಸ್ತಾನಿ ಆಟಗಾರನನ್ನು ಖರೀದಿಸಿದ ಸನ್ ರೈಸರ್ಸ್ ಲೀಡ್ಸ್ ನಿರ್ಧಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರು "ಲಜ್ಜೆಗೇಡಿತನ" ಎಂದು ಟೀಕಿಸುತ್ತಿದ್ದಾರೆ. ಕಾವ್ಯಾ ಮಾರನ್ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದು, ಐಪಿಎಲ್ ತಂಡವಾದ 'ಸನ್ ರೈಸರ್ಸ್ ಹೈದರಾಬಾದ್' ಅನ್ನು ಬಹಿಷ್ಕರಿಸುವುದಾಗಿ ಕೆಲವರು ಎಚ್ಚರಿಕೆ ನೀಡಿದ್ದಾರೆ. ಬಾಂಗ್ಲಾದೇಶದೊಂದಿಗಿನ ಸಂಬಂಧ ಹದಗೆಟ್ಟಾಗ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಕೈಬಿಡಲಾಗಿತ್ತು, ಹೀಗಿರುವಾಗ ಪಾಕ್ ಆಟಗಾರನ ಸೇರ್ಪಡೆ ಸಹಜವಾಗಿಯೇ ಕಿಚ್ಚು ಹಚ್ಚಿದೆ.
ಅಬ್ರಾರ್ ಅಹ್ಮದ್ ಕಳಪೆ ಫಾರ್ಮ್
ಅಬ್ರಾರ್ ಅಹ್ಮದ್ 2026ರ ಟಿ20 ವಿಶ್ವಕಪ್ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿದ 4 ಪಂದ್ಯಗಳಲ್ಲಿ ಅವರು ಕೇವಲ 6 ವಿಕೆಟ್ ಪಡೆದಿದ್ದರು. ಅವರ ಎಕಾನಮಿ ರೇಟ್ ಕೂಡ ಉತ್ತಮವಾಗಿರಲಿಲ್ಲ. ವಿಶೇಷವಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ಅವರು 38 ರನ್ ಬಿಟ್ಟುಕೊಟ್ಟು ಒಂದೂ ವಿಕೆಟ್ ಪಡೆದಿರಲಿಲ್ಲ. ಅಂತಹ ಆಟಗಾರನಿಗಾಗಿ ಭಾರತೀಯ ಮೂಲದ ಫ್ರಾಂಚೈಸಿ ಕೋಟಿಗಟ್ಟಲೆ ಹಣ ಹೂಡಿರುವುದು ಕ್ರೀಡಾಪ್ರೇಮಿಗಳ ಅಸಮಾಧಾನಕ್ಕೆ ಕಾರಣವಾಗಿದೆ.


