BCCI on Virat Kohli : ನಾಯಕ ಸ್ಥಾನದಿಂದ ಕೆಳಗಿಳಿಯಿರಿ ಎಂದು ಕೊಹ್ಲಿಗೆ ಯಾರೊಬ್ಬರೂ ಹೇಳಿರಲಿಲ್ಲ!
ಬಿಸಿಸಿಐನಲ್ಲಿ ಇದ್ದವರೆಲ್ಲರಿಗೂ ಕೊಹ್ಲಿ ನಿರ್ಧಾರದಿಂದ ಅಚ್ಚರಿಯಾಗಿತ್ತು
ನಿರ್ಧಾರವನ್ನು ಮರುಪರಿಶೀಲನೆ ಮಾಡಿ ಎಂದು ಕೇಳಿಕೊಂಡಿದ್ದೆವು
ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮ
ಮುಂಬೈ (ಡಿ. 31): ಭಾರತ (India) ಏಕದಿನ ತಂಡದ (ODI Team ) ನಾಯಕತ್ವ (captaincy )ವಿವಾದ ಕುರಿತಂತೆ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ (BCCI selection committee chairman)ಚೇತನ್ ಶರ್ಮ ಇದೇ ಮೊದಲ ಬಾರಿಗೆ ಮಾತನಾಡಿದ್ದು, ವಿರಾಟ್ ಕೊಹ್ಲಿ ಮಾಡಿದ ಕೆಲ ಆರೋಪಗಳ ಬಗ್ಗೆ ಸ್ಪಷ್ಟ ಉತ್ತರ ನೀಡಿದ್ದಾರೆ. ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಿದ ಬಳಿಕ ಮಾತನಾಡಿದ ಚೇತನ್ ಶರ್ಮ (Chetan Sharma), "ಭಾರತೀಯ ಕ್ರಿಕೆಟ್ ನ ಸಲುವಾಗಿ ವಿರಾಟ್ ಕೊಹ್ಲಿ ಅವರಿಗೆ ಟೀಂ ಇಂಡಿಯಾದ ನಾಯಕನಾಗಿ ಮುಂದುವರಿಯುವಂತೆ ಆಯ್ಕೆ ಸಮಿತಿ ಸದಸ್ಯರು, ಬಿಸಿಸಿಐ ಅಧಿಕಾರಿಗಳು ಕೇಳಿಕೊಂಡಿದ್ದರು' ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿ ತಮ್ಮ ನಿರ್ಧಾರವನ್ನು ಹೇಳಿದಾಗ ಆಯ್ಕೆ ಸಮಿತಿಯಲ್ಲಿ ಇದ್ದವರೆಲ್ಲರೂ ಅವರಿಗೆ ನಾಯಕ ಸ್ಥಾನದಲ್ಲಿ ಮುಂದುವರಿಯುವಂತೆ ಕೇಳಿಕೊಂಡಿದ್ದಾಗಿ ತಿಳಿಸಿದ್ದಾರೆ.
ಈ ನಡುವೆ ಚೇತನ್ ಶರ್ಮ ನೀಡಿರುವ ಈ ಹೇಳಿಕೆ ವಿರಾಟ್ ಕೊಹ್ಲಿ (Virat Kohli) ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ನೀಡಿರುವ ಹೇಳಿಕೆಗೆ ತದ್ವಿರುದ್ಧವಾಗಿದೆ. ಟಿ20 ಮಾದರಿಯಲ್ಲಿ ನಾಯಕತ್ವವನ್ನು ತ್ಯಜಿಸದೇ ಇರುವಂತೆ ಹಾಗೂ ತಮ್ಮ ನಿರ್ಧಾರದ ಬಗ್ಗೆ ಮರುಪರಿಶೀಲನೆ ಮಾಡುವಂತೆ ಬಿಸಿಸಿಐನಿಂದ ಯಾರೊಬ್ಬರೂ ನನಗೆ ಹೇಳಿರಲಿಲ್ಲ ಎಂದಿದ್ದರು.
"ಟಿ20 ವಿಶ್ವಕಪ್ ಗೆ (T20 World Cup)ತಂಡ ಆಯ್ಕೆ ಮಾಡಲು ಆರಂಭಿಸಿದಾಗ ವಿರಾಟ್ ಕೊಹ್ಲಿ ತಮ್ಮ ನಿರ್ಧಾರದ ಬಗ್ಗೆ ಹೇಳಿದರು. ವಿಶ್ವಕಪ್ ಗೆ ಇನ್ನು ಕೆಲವೇ ದಿನಗಳಿರುವಾಗ ನಾಯಕನಿಂದ ಇಂಥ ನಿರ್ಧಾರ ಕೇಳಿದಾಗ ಆಯ್ಕೆ ಸಮಿತಿಯಲ್ಲಿ ಇದ್ದವರೆಲ್ಲರೂ ಅಚ್ಚರಿಗೆ ಒಳಗಾಗಿದ್ದರು. ಎಲ್ಲರ ಮುಖದಲ್ಲೂ ಒಂದೇ ಭಾವವಿತ್ತು. ಅಂದು ಸಭೆಯಲ್ಲಿ ಯಾರೆಲ್ಲ ಹಾಜರಿದ್ದರೋ ಎಲ್ಲರೂ ಕೂಡ ವಿರಾಟ್ ಕೊಹ್ಲಿಗೆ ತಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ಕೇಳಿಕೊಂಡರು. ಯಾಕೆಂದರೆ ವಿಶ್ವಕಪ್ ವೇಳೆ ಇಂಥ ಸುದ್ದಿಗಳು ಹಾಗೂ ಇಂಥ ನಿರ್ಧಾರ ಖಂಡಿತವಾಗಿ ತಂಡದ ಮೇಲೆ ಪರಿಣಾಮ ಬೀರುತ್ತದೆ. ಅದಲ್ಲದೆ, ಈ ವಿಚಾರವನ್ನು ವಿಶ್ವಕಪ್ ಮುಗಿದ ಬಳಿಕವೂ ಮಾತನಾಡಬಹುದು" ಎಂದು ಹೇಳಿದ್ದರು ಎಂದು ಚೇತನ್ ಶರ್ಮ ತಿಳಿಸಿದ್ದಾರೆ.
ಭಾರತೀಯ ಕ್ರಿಕೆಟ್ ಸಲುವಾಗಿ ನಾಯಕನಾಗಿ ಮುಂದುವರಿಯುವಂತೆ ಅಂದು ಸಭೆಯಲ್ಲಿ ಇದ್ದವರೆಲ್ಲರೂ ಹೇಳಿದ್ದರು. ಸಭೆಯ ಸಂಯೋಜಕರು , ಮಂಡಳಿಯ ಅಧಿಕಾರಿಗಳು ಎಲ್ಲರೂ ಅವರಿಗೆ ಇದೇ ಮಾತನ್ನು ಹೇಳಿದ್ದರು. ಅಂದು ಕೊಹ್ಲಿಗೆ ಈ ಮಾತನ್ನು ಹೇಳದೇ ಇದ್ದವರು ಯಾರಿದ್ದಾರೆ ಎಂದು ಕೇಳಿ? ಇಂಥ ಸುದ್ದಿಗಳನ್ನು ನಾವು ಏಕಾಏಕಿ ಕೇಳಿದಾಗ ನಿಜಕ್ಕೂ ಅಚ್ಚರಿಗೊಂಡಿದ್ದೆವು. ಯಾಕೆಂದರೆ ಇದು ಕೊಹ್ಲಿಯ ವಿಚಾರ ಮಾತ್ರವೇ ಆಗಿರಲಿಲ್ಲ. ಇದು ವಿಶ್ವಕಪ್ ನ ವಿಚಾರವಾಗಿತ್ತು ಎಂದು ಚೇತನ್ ಶರ್ಮ ವಿವರಿಸಿದ್ದಾರೆ. ವಿಶ್ವಕಪ್ ಮುಗಿದ ಬಳಿಕ ಇದರ ಬಗ್ಗೆ ನಾವೆಲ್ಲರೂ ಕುಳಿತು ಮಾತನಾಡಬಹುದು ಎಂದು ಎಲ್ಲರೂ ಅವರಲ್ಲಿ ವಿನಂತಿಯನ್ನೂ ಮಾಡಿದ್ದರು. ಆದರೆ, ತಮ್ಮದೇ ಯೋಜನೆಗಳನ್ನು ಹೊಂದಿದ್ದ ವಿರಾಟ್ ಕೊಹ್ಲಿ ಅದಾಗಲೇ ನಾಯಕತ್ವ ತ್ಯಜಿಸುವ ಬಗ್ಗೆ ನಿರ್ಧಾರವನ್ನು ಮಾಡಿ ಬಿಟ್ಟಿದ್ದರು. ಕೊನೆಗೆ ನಾವು ಅವರ ನಿರ್ಧಾರವನ್ನು ಗೌರವಿಸಿದೆವು. ಬಿಸಿಸಿಐನಲ್ಲಿದ್ದ ಎಲ್ಲರೂ ಅವರಿಗೆ ನಿರ್ಧಾರ ಮರುಪರಿಶೀಲನೆ ಮಾಡುವಂತೆ ಹೇಳಿದ್ದು ಸತ್ಯ ಎಂದು ವಿವರಿಸಿದರು.
Virat Kohli sacked as ODI captain: ಮೊದಲ ಬಾರಿಗೆ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ!
ಕೊಹ್ಲಿ-ರೋಹಿತ್ ನಡುವೆ ಭಿನ್ನಾಭಿಪ್ರಾಯವಿಲ್ಲ: ಇದೇ ವೇಳೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮ (Rohit Sharma) ನಡುವಿನ ಭಿನ್ನಾಭಿಪ್ರಾಯದ ಊಹಾಪೋಹಗಳ ಬಗ್ಗೆ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ, "ಊಹೆಗಳನ್ನು ಆಧರಿಸಿ ಬರೆಯಬೇಡಿ. ನಾನೂ ಕೂಡ 20 ವರ್ಷ ಮಾಧ್ಯಮದ ಭಾಗವಾಗಿದ್ದೆ. ಇಂಥ ಊಹಾಪೋಹದ ವರದಿಗಳನ್ನು ಕಂಡಾಗ ನಗು ಬರುತ್ತದೆ. ಅವರಿಬ್ಬರು ಒಂದು ಕುಟುಂಬ, ಟೀಂ ಹಾಗೂ ಯುನಿಟ್ ಆಗಿ ಕೆಲಸ ಮಾಡುತ್ತಿದ್ದಾರೆ' ಎಂದು ಹೇಳುವ ಮೂಲಕ ಕೊಹ್ಲಿ ಹಾಗೂ ರೋಹಿತ್ ನಡುವಿನ ಭಿನ್ನಾಭಿಪ್ರಾಯವನ್ನು ಅಲ್ಲಗಳೆದರು