ಇದು ಫೋಟೋ ಶಾಪ್ ಖಂಡಿತ ಅಲ್ಲ, ಧೋನಿ-ಗಂಭೀರ್ ಸಂಗಮಕ್ಕೆ ಕ್ರಿಕೆಟ್ ಅಭಿಮಾನಿಗಳು ಫಿದಾ..!
* ಲಖನೌ ಸೂಪರ್ ಜೈಂಟ್ಸ್ ಎದುರು ರೋಚಕ ಸೋಲು ಕಂಡು ಚೆನ್ನೈ ಸೂಪರ್ ಕಿಂಗ್ಸ್
* ಧೋನಿ ಜತೆ ಮುಕ್ತವಾಗಿ ಮಾತುಕತೆ ನಡೆಸಿದ ಗೌತಮ್ ಗಂಭೀರ್
* ಧೋನಿ ಜತೆ ಯಾವುದೇ ಮನಸ್ತಾಪವಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ ಗೌತಿ
ಬೆಂಗಳೂರು(ಏ.01): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡವು ಸತತ ಎರಡನೇ ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ನೀಡಿದ್ದ 211 ರನ್ಗಳ ಕಠಿಣ ಗುರಿಯನ್ನು ಕೆ.ಎಲ್. ರಾಹುಲ್ (KL Rahul) ನೇತೃತ್ವದ ಲಖನೌ ಸೂಪರ್ ಜೈಂಟ್ಸ್ (Lucknow Super Giants) ತಂಡವು ರೋಚಕವಾಗಿ ತಲುಪುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಪಂದ್ಯದಲ್ಲಿ ಲಖನೌ ತಂಡವು 6 ವಿಕೆಟ್ಗಳ ಜಯ ಸಾಧಿಸುವ ಮೂಲಕ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದೆ.
ಪಂದ್ಯದ ವೇಳೆ ಉಭಯ ತಂಡದ ಆಟಗಾರರು ಗೆಲುವಿಗಾಗಿ ವೀರಾವೇಶದಿಂದ ಹೋರಾಡಿದರಾದರೂ ಪಂದ್ಯ ಮುಕ್ತಾಯದ ಬಳಿಕ ಎರಡು ತಂಡಗಳ ಆಟಗಾರರು ಗುಂಪಿನಲ್ಲಿ ಒಟ್ಟಾಗಿ ಮಾತುಕತೆ ನಡೆಸುವ ದೃಶ್ಯಗಳು ಸಾಮಾನ್ಯ. ಆದರೆ ಉಭಯ ತಂಡಗಳ ಇಬ್ಬರು ದಿಗ್ಗಜರು ಮುಖಾಮುಖಿಯಾದರೆ ಅದು ಹೆಚ್ಚು ಗಮನ ಸೆಳೆಯುತ್ತದೆ. ಹೀಗಿರುವಾಗ ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಗೌತಮ್ ಗಂಭೀರ್ (Gautam Gambhir) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಒಟ್ಟಾಗಿ ಮಾತುಕತೆ ನಡೆಸಿದ್ದು, ಹೆಚ್ಚು ಗಮನ ಸೆಳೆದಿದೆ.
ಈ ಕುರಿತಂತೆ ಟೀಂ ಇಂಡಿಯಾ (Team India) ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಂನಲ್ಲಿ ಧೋನಿ ಜತೆಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದು, ನಾಯಕನನ್ನು ಭೇಟಿಯಾಗಿದ್ದು, ಖುಷಿ ಎನಿಸಿತು ಎಂದು ಗಂಭೀರ್ ಬರೆದುಕೊಂಡಿದ್ದಾರೆ. ಆದರೆ ಇದು ಫೋಟೋಶಾಪ್ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿಯೇ ಗೇಲಿ ಮಾಡಿದ್ದಾರೆ. ಯಾಕೆಂದರೆ ಕಳೆದ ಹಲವು ವರ್ಷಗಳಿಂದಲೂ ಮಹೇಂದ್ರ ಸಿಂಗ್ ಧೋನಿ ಹಾಗೂ ಗೌತಮ್ ಗಂಭೀರ್ ನಡುವೆ ಮನಸ್ತಾಪವಿದೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ ಈ ಫೋಟೋ ಅಂತಹ ಎಲ್ಲಾ ಟೀಕೆ ಹಾಗೂ ಗೊಂದಲಗಳಿಗೆ ಉತ್ತರ ನೀಡಿದಂತಿದೆ.
IPL 2022: ಲಖನೌಗೆ ಶರಣಾದ ಚೆನ್ನೈ ಸೂಪರ್ ಕಿಂಗ್ಸ್, ರಾಹುಲ್ ಪಡೆಗೆ ಮೊದಲ ಗೆಲುವು
ಈ ಮೊದಲು ಗೌತಮ್ ಗಂಭೀರ್ ತಮ್ಮ ಹಾಗೂ ಧೋನಿ ನಡುವೆ ಯಾವುದೇ ಮನಸ್ತಾಪವಿಲ್ಲ ಎನ್ನುವ ವಿಚಾರವನ್ನು ಪುನರುಚ್ಚರಿಸಿದ್ದರು. ಭಾರತದ ಮಾಜಿ ನಾಯಕ ಎಂ.ಎಸ್.ಧೋನಿ ಜೊತೆಗಿನ ಮನಸ್ತಾಪ ವರದಿಯನ್ನು ಅವರ ಸಹ ಆಟಗಾರರಗಿದ್ದ ಗೌತಮ್ ಗಂಭೀರ್ ತಳ್ಳಿ ಹಾಕಿದ್ದರು.
ಈ ಬಗ್ಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಧೋನಿ ಹಾಗೂ ನನ್ನ ನಡುವೆ ಪರಸ್ಪರ ಗೌರವವಿದೆ ಮತ್ತು ಅದು ಯಾವತ್ತೂ ಉಳಿಯಲಿದೆ. ಇದನ್ನು ದೇಶದ 138 ಕೋಟಿ ಜನರ ಮುಂದೆ ಯಾವಾಗ ಬೇಕಾದರೂ ಹೇಳಬಲ್ಲೆ. ಧೋನಿಗೆ ಏನಾದರೂ ಅಗತ್ಯವಿದ್ದರೆ ಅವರ ನೆರವಿಗೆ ಧಾವಿಸುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ. ಅವರು ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆ ದೊಡ್ಡದು’ ಎಂದು ಅವರು ಶ್ಲಾಘಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಬ್ಯಾಟ್ ಮಾಡಿ 7 ವಿಕೆಟ್ ಕಳೆದುಕೊಂಡು 210 ರನ್ ಬಾರಿಸಿತ್ತು. ರಾಬಿನ್ ಉತ್ತಪ್ಪ ಆಕರ್ಷಕ ಅರ್ಧಶತಕ ಬಾರಿಸಿದ್ದರು. ಇನ್ನು ಈ ಕಠಿಣ ಗುರಿ ಬೆನ್ನತ್ತಿದ ಲಖನೌ ತಂಡವು ಕ್ವಿಂಟನ್ ಡಿ ಕಾಕ್ ಹಾಗೂ ಎವಿನ್ ಲೆವಿಸ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ರೋಚಕ ಜಯ ಸಾಧಿಸಿತು.