IPL 2021: ನಿನಗಿದು ಬೇಕಿತ್ತಾ ಮಗನೇ..? ಆವೇಶ್ ಖಾನ್ ಫುಲ್ ಟ್ರೋಲ್..!
* ಡೆಲ್ಲಿ ಕ್ಯಾಪಿಟಲ್ಸ್ ಎದುರು ರೋಚಕ ಗೆಲುವು ಸಾಧಿಸಿದ ಆರ್ಸಿಬಿ
* ಕೊನೆಯ ಎಸೆತದಲ್ಲಿ ಸಿಕ್ಸರ್ ಚಚ್ಚಿ ಬೆಂಗಳೂರು ತಂಡಕ್ಕೆ ಗೆಲುವು ತಂದುಕೊಟ್ಟ ಭರತ್
* ಗೆಲ್ಲುವ ಮುಂಚೆಯೇ ನಗು ಬೀರಿ ಟ್ರೋಲ್ ಆದ ಆವೇಶ್ ಖಾನ್
ಬೆಂಗಳೂರು(ಅ.09): 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡಗಳು ಮುಖಾಮುಖಿಯಾಗಿದ್ದವು. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯವು ಕೊನೆಯ ಕ್ಷಣದವರೆಗೂ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಕೆ.ಎಸ್. ಭರತ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಆಕರ್ಷಕ ಜತೆಯಾಟದ ಬ್ಯಾಟಿಂಗ್ ನಡೆಸುವ ಮೂಲಕ ಆರ್ಸಿಬಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಅದರಲ್ಲೂ ಕೊನೆಯ ಎಸೆತದಲ್ಲಿ ಭರತ್ ಸಿಕ್ಸರ್ ಬಾರಿಸುವ ಮೂಲಕ ಬೆಂಗಳೂರು ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು. ಇದೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ವೇಗಿ ಆವೇಶ್ ಖಾನ್ ವ್ಯಾಪಕ ಟ್ರೋಲ್ಗೆ ಒಳಗಾಗಿದ್ದಾರೆ.
ಹೌದು, ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯುವ ವೇಗಿ ಆವೇಶ್ ಖಾನ್ (Avesh Khan) 22 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಆರ್ಸಿಬಿ ವಿರುದ್ದದ ಪಂದ್ಯದಲ್ಲಿ ಆವೇಶ್ ಖಾನ್ಗೆ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಕೊನೆಯ ಓವರ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಲಿನ ದವಡೆಯಿಂದ ಪಾರಾಗಿದೆ. ಕೊನೆಯ ಓವರ್ನಲ್ಲಿ ಆವೇಶ್ ಖಾನ್ ತೋರಿದ ಒಂದು ಎಕ್ಸ್ಪ್ರೆಶನ್ ಪಂದ್ಯದ ದಿಕ್ಕೇ ಬದಲಾಗುವಂತೆ ಮಾಡಿತು.
IPL 2021: ಅಂತಿಮ ಎಸೆತದಲ್ಲಿ ಸಿಕ್ಸರ್, ಡೆಲ್ಲಿ ವಿರುದ್ಧ RCBಗೆ ರೋಚಕ ಗೆಲುವು!
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 165 ರನ್ಗಳ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭವನ್ನು ಪಡೆಯಲು ವಿಫಲವಾಯಿತು. ಆರ್ಸಿಬಿ 6 ರನ್ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್ಮನ್ಗಳಾದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಪೆವಿಲಿಯನ್ ಸೇರಿದ್ದರು. ಇನ್ನು ಎಬಿ ಡಿವಿಲಿಯರ್ಸ್ 26 ರನ್ ಬಾರಿಸಿ ವಿಕೆಟ್ ಒಪ್ಪಿಸಿದಾಗ ಆರ್ಸಿಬಿ ಪಾಳಯದಲ್ಲಿ ಸೋಲಿನ ಆತಂಕ ಮನೆ ಮಾಡಿತ್ತು. ಈ ವೇಳೆ ಜತೆಯಾದ ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಕೆ.ಎಸ್. ಭರತ್ (KS Bharat) ನಾಲ್ಕನೇ ವಿಕೆಟ್ಗೆ ಮುರಿಯದ ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಕೊನೆಯ ಓವರ್ನಲ್ಲಿ ಆರ್ಸಿಬಿ ಗೆಲ್ಲಲು 15 ರನ್ಗಳ ಅಗತ್ಯವಿತ್ತು. 20ನೇ ಓವರ್ ಬೌಲಿಂಗ್ ಮಾಡುವ ಜವಾಬ್ದಾರಿಯನ್ನು ಯುವ ವೇಗಿ ಆವೇಶ್ ಖಾನ್ ಹೊತ್ತುಕೊಂಡಿದ್ದರು. ಮೊದಲ ಎಸೆತದಲ್ಲೇ ಗ್ಲೆನ್ ಮ್ಯಾಕ್ಸ್ವೆಲ್ ಬೌಂಡರಿ ಬಾರಿಸಿದರು. ಇನ್ನು ಎರಡನೇ ಎಸೆತದಲ್ಲಿ 2 ರನ್ ಗಳಿಸುವ ಮೂಲಕ ಮ್ಯಾಕ್ಸ್ವೆಲ್ ಈ ಆವೃತ್ತಿಯ ಐಪಿಎಲ್ನಲ್ಲಿ 6ನೇ ಅರ್ಧಶತಕ ಪೂರೈಸಿದರು. ಇನ್ನು ಮೂರನೇ ಎಸೆತದಲ್ಲಿ ಲೆಗ್ಬೈ ಮೂಲಕ ಆರ್ಸಿಬಿ ಒಂದು ರನ್ ಗಳಿಸಿತು. ಕೊನೆಯ ಮೂರು ಎಸೆತಗಳಲ್ಲಿ ಆರ್ಸಿಬಿ ಗೆಲ್ಲಲು 8 ರನ್ಗಳ ಅಗತ್ಯವಿತ್ತು. ಇನ್ನು ನಾಲ್ಕನೇ ಎಸೆತವನ್ನು ಚುಕ್ಕೆ ಎಸೆಯುವ ಮೂಲಕ ಭರತ್ ಅವರತ್ತ ತಿರುಗಿ ಒಂದು ರೀತಿಯಲ್ಲಿ ನಗೆ ಬೀರಿದರು. ಈ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಸುನಿಲ್ ಗವಾಸ್ಕರ್, ಇಷ್ಟು ಬೇಗ ನಗು ಬೀರಬೇಡ ಯಂಗ್ ಮ್ಯಾನ್. ಇನ್ನೂ ಎರಡು ಎಸೆತಗಳು ಬಾಕಿ ಇವೆ ಎಂದು ಎಚ್ಚರಿಸಿದ್ದರು.
ಇನ್ನು 5ನೇ ಎಸೆತದಲ್ಲಿ ಭರತ್ 2 ರನ್ ಗಳಿಸಿದರು. ಇನ್ನು ಕೊನೆಯ ಎಸೆತದಲ್ಲಿ ಆರ್ಸಿಬಿ ಗೆಲ್ಲಲು 6 ರನ್ಗಳ ಅಗತ್ಯವಿತ್ತು. ಈ ವೇಳೆ ಆವೇಶ್ ಖಾನ್ ವೈಡ್ ಹಾಕಿದರು. ಹೀಗಾಗಿ ಕೊನೆಯ ಎಸೆತದಲ್ಲಿ ಅರ್ಸಿಬಿ ಗೆಲ್ಲಲು 5 ರನ್ಗಳ ಅಗತ್ಯವಿತ್ತು. ಈ ವೇಳೆ ಭರತ್ ಅಮೋಘ ಸಿಕ್ಸರ್ ಚಚ್ಚುವ ಮೂಲಕ ಆರ್ಸಿಬಿ ತಂಡಕ್ಕೆ 7 ರನ್ಗಳ ರೋಚಕ ಗೆಲುವು ತಂದುಕೊಟ್ಟರು.
ಪಂದ್ಯ ಗೆಲ್ಲುವ ಮುಂಚೆಯೇ ನಗು ಬೀರಿದ್ದ ಆವೇಶ್ ಖಾನ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ.