ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿರುವ ಟೀಂ ಇಂಡಿಯಾ ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಇದೀಗ ಏಕದಿನ ಮಾತ್ರವಲ್ಲ, ಐಪಿಎಲ್ ಟೂರ್ನಿಯಿಂದಲೂ ಹೊರಬಿದ್ದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನ ಅಲಭ್ಯತೆಯಿಂದ ಇದೀಗ ಫ್ರಾಂಚೈಸಿ ಹೊಸ ನಾಯಕನ ಆಯ್ಕೆಗೆ ಮುಂದಾಗಿದೆ. ಈ ರೇಸ್‌ನಲ್ಲಿ ಐವರು ಕಾಣಿಸಿಕೊಂಡಿದ್ದಾರೆ.

ನವದೆಹಲಿ(ಮಾ.26): ಐಪಿಎಲ್ ಟೂರ್ನಿಗೆ 8 ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸುತ್ತಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆರಂಭದಲ್ಲೇ ಅತೀ ದೊಡ್ಡ ಹಿನ್ನಡೆಯಾಗಿದೆ. ಇದಕ್ಕೆ ಕಾರಣ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅಲಭ್ಯತೆ. ಇಂಜುರಿಯಿಂದ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್ ಬದಲು ಡೆಲ್ಲಿ ತಂಡದ ನಾಯಕತ್ವ ಯಾರಿಗೆ ನೀಡಬೇಕು ಅನ್ನೋ ತೀವ್ರ ಚರ್ಚೆ ಡೆಲ್ಲಿ ಕ್ಯಾಪಿಟಲ್ಸ್ ಆಡಳಿತ ಮಂಡಳಿಯಲ್ಲಿ ನಡೆಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

IPL 2021 ಟೂರ್ನಿ ಆರಂಭಕ್ಕೂ ಮುನ್ನವೇ ಡೆಲ್ಲಿಗೆ ಆಘಾತ; ನಾಯಕ ಸರಣಿಯಿಂದ ಔಟ್!.

ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಲೀಡರ್‌ಶಿಪ್ ಆಟಗಾರರಿಗೆ ಕೊರತೆಯೇನು ಇಲ್ಲ. ಆದರೆ ಇವರ ಪೈಕಿ ಯಾರಿಗೆ ನಾಯಕತ್ವ ನೀಡಬೇಕು ಅನ್ನೋ ಚರ್ಚೆ ಜೋರಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ರೇಸ್‌ನಲ್ಲಿ ರಿಷಬ್ ಪಂತ್, ಆರ್ ಅಶ್ವಿನ್, ಶಿಖರ್ ಧವನ್, ಅಜಿಂಕ್ಯ ರಹಾನೆ ಹಾಗೂ ಇತ್ತೀಚೆಗೆ ಹರಾಜಿನಲ್ಲಿ ತಂಡ ಸೇರಿಕೊಂಡಿರುವ ಸ್ಟೀವ್ ಸ್ಮಿತ್ ರೇಸ್‌ನಲ್ಲಿದ್ದಾರೆ.

ರಿಷಬ್ ಪಂತ್‌ಗೆ ನಾಯಕತ್ವ ನೀಡುವಲ್ಲಿ ಡೆಲ್ಲಿ ಮ್ಯಾನೇಜ್ಮೆಂಟ್ ಹೆಚ್ಚು ಉತ್ಸಾಹ ತೋರಿಲ್ಲ. ಬ್ಯಾಟ್ಸ್‌ಮನ್ ಹಾಗೂ ವಿಕೆಟ್ ಕೀಪರ್ ಆಗಿ ಗಮನ ಸೆಳೆದಿರುವ ಪಂತ್‌ಗೆ ನಾಯಕತ್ವ ಜವಾಬ್ದಾರಿ ನಿರ್ವಹಿಸುವುದು ಕಷ್ಟವಾಗುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವಿದೆ. ಇನ್ನುಳಿದಂತೆ ಆರ್ ಅಶ್ವಿನ್, ಶಿಖರ್ ಧವನ್, ಅಜಿಂಕ್ಯ ರಹಾನೆ ಹಾಗೂ ಸ್ಟೀವ್ ಸ್ಮಿತ್ ಐಪಿಎಲ್ ಟೂರ್ನಿಯಲ್ಲಿ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇವರನ್ನು ಹೊರತು ಪಡಿಸಿ ಪೃಥ್ವಿ ಶಾಗೆ ನಾಯಕತ್ವ ಪಟ್ಟ ಕಟ್ಟಿದರೂ ಆಶ್ಚರ್ಯವಿಲ್ಲ.

ಕೋಚ್ ರಿಕಿ ಪಾಂಟಿಂಗ್ ಈ ಕುರಿತು ತಮ್ಮ ನಿರ್ಧಾರವನ್ನು ಮ್ಯಾನೇಜ್ಮೆಂಟ್‌ಗೆ ತಿಳಿಸಲಿದ್ದಾರೆ. ಮೂಲಗಳ ಪ್ರಕಾರ ಸ್ಟೀವ್ ಸ್ಮಿತ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಯಕನಾಗುವ ಸಾಧ್ಯತೆ ಹೆಚ್ಚಿದೆ.

ಈ ನಾಲ್ವರ ಪೈಕಿ ಡೆಲ್ಲಿ ಕ್ಯಾಪಿಟಲ್ಸ್ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇತ್ತ ಅಭಿಮಾನಿಗಳು ಕೂಡ ಡೆಲ್ಲಿ ತಂಡಕ್ಕೆ ಮುಂದಿನ ನಾಯಕ ಯಾರಾಗಬೇಕು ಅನ್ನೋದನ್ನು ಸೂಚಿಸಿದ್ದಾರೆ. ಲೀಡರ್‌ಶಿಪ್ ಕ್ವಾಲಿಟಿ, ಡೆಲ್ಲಿ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆಲ್ಲಿಸಿಕೊಡಬಲ್ಲ ನಾಯಕನಿಗಾಗಿ ಮ್ಯಾನೇಜ್ಮೆಂಟ್ ಚರ್ಚೆ ನಡೆಸುತ್ತಿದೆ.