ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಪಿನ್ನರ್ ಆ್ಯಡಂ ಜಂಪಾ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅರ್ಧದಲ್ಲೇ ಕಾಲ್ಕಿತ್ತಿದ್ದೇಕೆ ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್‌(ಏ.28: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಕ್ರಿಕೆಟಿಗರಾದ ಆ್ಯಡಂ ಜಂಪಾ ಹಾಗೂ ಕೇನ್ ರಿಚರ್ಡ್‌ಸನ್ ಅರ್ಧದಲ್ಲೇ ತೊರೆದು ತವರಿನತ್ತ ಮುಖ ಮಾಡಿದ್ದಾರೆ. ಇದು ಹಲವರಲ್ಲಿ ಅಚ್ಚರಿಗೆ ಕಾರಣವಾಗಿತ್ತು. ಇದೀಗ ಆ್ಯಡಂ ಜಂಪಾ ತಾವು ಅರ್ಧದಲ್ಲೇ ಐಪಿಎಲ್‌ನಿಂದ ಕಾಲ್ಕಿತ್ತಿದ್ದೇಕೆ ಎನ್ನುವುದನ್ನು ಬಾಯ್ಬಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

6 ತಿಂಗಳ ಹಿಂದಷ್ಟೇ ಯುಎಇನಲ್ಲಿದ್ದ ವಾತಾವರಣಕ್ಕೆ ಹೋಲಿಸಿದರೆ ಈ ಬಾರಿಯ ಬಯೋ-ಬಬಲ್‌ ಅಷ್ಟೊಂದು ಸುರಕ್ಷಿತವಾಗಿದೆ ಎಂದು ಅನಿಸಲಿಲ್ಲ ಎನ್ನುವ ಅಭಿಪ್ರಾಯವನ್ನು ಆ್ಯಡಂ ಜಂಪಾ ವ್ಯಕ್ತಪಡಿಸಿದ್ದಾರೆ. ವೈಯುಕ್ತಿಕ ಕಾರಣ ನೀಡಿ ಆಸ್ಟ್ರೇಲಿಯಾ ಕ್ರಿಕೆಟಿಗರಾದ ಆ್ಯಡಂ ಜಂಪಾ ಹಾಗೂ ಕೇನ್‌ ರಿಚರ್ಡ್‌ಸನ್‌ ಆರ್‌ಸಿಬಿ ಬಯೋ ಬಬಲ್‌ ತೊರೆದು ಕಾಂಗರೂ ನಾಡಿನತ್ತ ಮುಖ ಮಾಡಿದ್ದರು.

6 ತಿಂಗಳ ಹಿಂದಷ್ಟೇ ದುಬೈನಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿನ ಬಯೋ ಬಬಲ್ ಸಾಕಷ್ಟು ಸುರಕ್ಷಿತವಾಗಿತ್ತು. ಈ ಬಾರಿಯೂ ಅಲ್ಲಿಯೇ ಐಪಿಎಲ್ ಟೂರ್ನಿ ಆಯೋಜಿಸಿದ್ದರೆ ತುಂಬಾ ಚೆನ್ನಾಗಿರೋದು ಎನ್ನುವುದು ನನ್ನ ವೈಯುಕ್ತಿಕ ಅಭಿಪ್ರಾಯ. ಆದರೆ ಸಾಕಷ್ಟು ರಾಜಕೀಯ ಕಾರಣಗಳು ಟೂರ್ನಿ ಅಯೋಜನೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಐಪಿಎಲ್ 2021: ರಿಚರ್ಡ್‌ಸನ್‌ ಬದಲಿಗೆ ಆರ್‌ಸಿಬಿ ಕೂಡಿಕೊಂಡ ಸ್ಕಾಟ್‌ ಕುಗ್ಗಲಯನ್‌

ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಕೈ ಮೀರಿ ಹೋಗಿದೆ. ಅದರಲ್ಲೂ ನಾನು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನವನ್ನು ಪಡೆದಿರಲಿಲ್ಲ. ಈ ಬಯೋ ಬಬಲ್‌ನಲ್ಲಿರುವುದಕ್ಕಿಂತ ತವರಿಗೆ ವಾಪಾಸಾಗುವುದೇ ಒಳಿತು ಎಂದು ತೀರ್ಮಾನಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ಜಂಪಾ ತಿಳಿಸಿದ್ದಾರೆ.

ಐಪಿಎಲ್‌ ಟೂರ್ನಿಯನ್ನು ಅರ್ಧದಲ್ಲೇ ತೊರೆದಿದ್ದರಿಂದ ಆಗುವ ನಷ್ಟದ ಬಗ್ಗೆ ಪ್ರತಿಕ್ರಿಯಿಸಿರುವ ಜಂಪಾ, ಖಂಡಿತಾವಾಗಿಯೂ ಹಣವನ್ನು ತ್ಯಾಗಮಾಡಿದಂತಾಗುತ್ತದೆ. ಆದರೆ ನನಗೆ ಹಣಕ್ಕಿಂತ ಮಾನಸಿಕ ಆರೋಗ್ಯ ಮುಖ್ಯ ಎಂದು ಆಸೀಸ್‌ ಲೆಗ್‌ಸ್ಪಿನ್ನರ್‌ ಸ್ಪಷ್ಟಪಡಿಸಿದ್ದಾರೆ.

ಐಪಿಎಲ್‌ 2021: ಆರ್‌ಸಿಬಿಗೆ ಕೈಕೊಟ್ಟು ದಿಢೀರ್ ತವರಿಗೆ ಮರಳಿದ ಇಬ್ಬರು ಸ್ಟಾರ್ ಕ್ರಿಕೆಟಿಗರು..!

14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆ್ಯಡಂ ಜಂಪಾ ಒಂದೇ ಒಂದು ಪಂದ್ಯವನ್ನಾಡಿರಲಿಲ್ಲ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿ ಈ ಮೊದಲು ಜಂಪಾರನ್ನು 1.5 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಇದಾದ ಬಳಿಕ ಈ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಆ್ಯಡಂ ಜಂಪಾರನ್ನು ಆರ್‌ಸಿಬಿ ರೀಟೈನ್ ಮಾಡಿಕೊಂಡಿತ್ತು.