Asianet Suvarna News Asianet Suvarna News

India Tour of South Africa: ಬಯೋ ಬಬಲ್‌ ಪ್ರವೇಶಿಸಿದ ಟೀಂ ಇಂಡಿಯಾ ಕ್ರಿಕೆಟಿಗರು

* ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜಾದ ಟೀಂ ಇಂಡಿಯಾ ಕ್ರಿಕೆಟಿಗರು

* ಮುಂಬೈನಲ್ಲಿ ಬಯೋ ಬಬಲ್ ಪ್ರವೇಶಿಸಿದ ಭಾರತ ತಂಡದ ಕ್ರಿಕೆಟಿಗರು

* ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 3 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿಯನ್ನಾಡಲಿರುವ ಭಾರತ

Indian Cricket Team Players enter Mumbai bio bubble Team India will leave for South Africa on December 16 kvn
Author
Bengaluru, First Published Dec 13, 2021, 11:22 AM IST

ಮುಂಬೈ(ಡಿ.13): ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಗೆ ಆಯ್ಕೆಯಾಗಿರುವ ಟೀಂ ಇಂಡಿಯಾ (Team India) ಆಟಗಾರರು ಭಾನುವಾರ ಮುಂಬೈನಲ್ಲಿ ಬಿಸಿಸಿಐ (BCCI) ವ್ಯವಸ್ಥೆ ಮಾಡಿರುವ ಬಯೋಬಬಲ್‌ (Bio-Bubble) ಪ್ರವೇಶಿಸಿದರು. ನಾಯಕ ವಿರಾಟ್‌ ಕೊಹ್ಲಿ (Virat Kohli) ಹಾಗೂ ಉಪನಾಯಕ ರೋಹಿತ್‌ ಶರ್ಮಾ (Rohit Sharma) ಸೋಮವಾರ ತಂಡ ಕೂಡಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಬಯೋ ಬಬಲ್‌ನೊಳಕ್ಕೆ ತೆರಳುವ ಮುನ್ನ ಎಲ್ಲಾ ಆಟಗಾರರು ಕೋವಿಡ್‌ ಪರೀಕ್ಷೆಗೆ (COVID Test) ಒಳಗಾಗಿದ್ದು, ಎಲ್ಲರ ವರದಿ ನೆಗೆಟಿವ್‌ ಬಂದಿದೆ ಎಂದು ಮೂಲಗಳು ತಿಳಿಸಿವೆ. 

ಭಾರತ ತಂಡ ಡಿಸೆಂಬರ್ 16ರಂದು ವಿಶೇಷ ವಿಮಾನದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣಿಸಲಿದ್ದು, (India Tour of South Africa) ಡಿಸೆಂಬರ್ 26ರಿಂದ ಆರಂಭಗೊಳ್ಳಲಿರುವ ಮೊದಲ ಟೆಸ್ಟ್‌ಗೂ ಮುನ್ನ 3 ದಿನಗಳ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ ಎನ್ನಲಾಗಿದೆ. ಮೂರು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಸೆಂಚುರಿಯನ್ ಮೈದಾನ ಆತಿಥ್ಯವನ್ನು ವಹಿಸಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಮುಕ್ತಾಯದ ಬಳಿಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಹರಿಣಗಳ ಪಡೆ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಮೊದಲ ಏಕದಿನ ಪಂದ್ಯವು ಜನವರಿ 19ರಂದು ಆರಂಭವಾಗಲಿದೆ.

ಭಾರತ ಕ್ರಿಕೆಟ್ ತಂಡವು (Indian Cricket Team) ಇದುವರೆಗೂ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿಲ್ಲ. ಆದರೆ ಇದೀಗ ಮೇಲ್ನೋಟಕ್ಕೆ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದ ಟೆಸ್ಟ್ ಟೀಂ ಇಂಡಿಯಾ ಸರಣಿ ಗೆದ್ದು ಇತಿಹಾಸ ನಿರ್ಮಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಇಂದು ಪಾಕ್‌-ವಿಂಡೀಸ್‌ ಮೊದಲ ಟಿ20 ಪಂದ್ಯ

ಕರಾಚಿ: ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್‌ ತಂಡಗಳು ಪ್ರವಾಸ ರದ್ದುಗೊಳಿಸದ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) (Pakistan Cricket Board), ಸೋಮವಾರದಿಂದ ಆರಂಭಗೊಳ್ಳಲಿರುವ ವೆಸ್ಟ್‌ಇಂಡೀಸ್‌ ವಿರುದ್ಧದ 3 ಟಿ20, 3 ಏಕದಿನ ಪಂದ್ಯಗಳ ಸರಣಿಗಳಿಂದ ಸ್ವಲ್ಪ ಮಟ್ಟಿಗಿನ ಚೇತರಿಕೆ ಕಾಣಲು ಎದುರು ನೋಡುತ್ತಿದೆ. 

India Tour Of South Africa: ಪ್ರವಾಸಕ್ಕೆ ವೆಂಕಟೇಶ್ ಅಯ್ಯರ್, ಋತುರಾಜ್ ಗಾಯಕ್ವಾಡ್ ಆಯ್ಕೆ ಖಚಿತ..?

ಕೀರಾನ್ ಪೊಲ್ಲಾರ್ಡ್‌, ಆಂಡ್ರೆ ರಸೆಲ್‌ ಸೇರಿ ಹಲವು ತಾರಾ ಆಟಗಾರರ ಅನುಪಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ತೆರಳಿರುವ ವಿಂಡೀಸ್‌ಗೆ ಕೊರೋನಾ ಸೋಂಕಿನ (Coronavirus) ಸಮಸ್ಯೆಯೂ ಎದುರಾಗಿದ್ದು, ವೇಗಿ ಶೆಲ್ಡನ್‌ ಕಾಟ್ರೆಲ್‌, ಆಲ್ರೌಂಡರ್‌ಗಳಾದ ರೋಸ್ಟನ್‌ ಚೇಸ್‌ ಹಾಗೂ ಕೈಲ್‌ ಮೇಯ​ರ್ಸ್‌ ಕೋವಿಡ್‌ ಪರೀಕ್ಷಾ ವರದಿ ಪಾಸಿಟಿವ್‌ ಬಂದ ಕಾರಣ ಸರಣಿಯಿಂದ ಹೊರಬಿದ್ದಿದ್ದಾರೆ. ಕೋವಿಡ್‌ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಶೇ.100ರಷ್ಟು ಆಸನವನ್ನು ಭರ್ತಿ ಮಾಡಲು ಪಾಕಿಸ್ತಾನ ಸರ್ಕಾರ ಅನುಮತಿ ನೀಡಿದ್ದು, ಪಂದ್ಯಗಳಿಗೆ ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುವ ನಿರೀಕ್ಷೆಯಲ್ಲಿ ಪಿಸಿಬಿ ಇದೆ.

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕಕ್ಕಿದೆ ಅಗ್ರಸ್ಥಾನ ಪಡೆಯುವ ಅವಕಾಶ!

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ (Vijay Hazare Trophy) ಟೂರ್ನಿಯಲ್ಲಿ ಸತತ 3 ಗೆಲುವು ಕಂಡು ಅಜೇಯವಾಗಿ ಉಳಿದಿದ್ದ ತಮಿಳುನಾಡು ಭಾನುವಾರ ಪುದುಚೇರಿ ವಿರುದ್ಧ 1 ರನ್‌ ಸೋಲು ಕಂಡಿತು. ಆದರೂ ಉತ್ತಮ ನೆಟ್‌ ರನ್‌ರೇಟ್‌ (+1.632)ನೊಂದಿಗೆ ‘ಬಿ’ ಗುಂಪಿನಲ್ಲಿ ಮೊದಲ ಸ್ಥಾನದಲ್ಲಿದೆ. 

ಇನ್ನು ಮನೀಶ್ ಪಾಂಡೆ (Manish Pandey) ನೇತೃತ್ವದ ಕರ್ನಾಟಕ ಕ್ರಿಕೆಟ್ ತಂಡ (Karnataka Cricket Team) +1.074 ನೆಟ್‌ ರನ್‌ರೇಟ್‌ನೊಂದಿಗೆ 2ನೇ ಸ್ಥಾನದಲ್ಲಿ ಮುಂದುವರಿದಿದೆ. ಎರಡೂ ತಂಡಗಳು ತಲಾ 12 ಅಂಕ ಹೊಂದಿವೆ. ಪುದುಚೇರಿ (-1.916), ಬೆಂಗಾಲ್‌ (-0.351) ತಲಾ 8 ಅಂಕಗಳೊಂದಿಗೆ ಕ್ರಮವಾಗಿ 3 ಹಾಗೂ 4ನೇ ಸ್ಥಾನದಲ್ಲಿವೆ. 5, 6ನೇ ಸ್ಥಾನದಲ್ಲಿರುವ ಮುಂಬೈ ಹಾಗೂ ಬರೋಡಾ ಈಗಾಗಲೇ ನಾಕೌಟ್‌ ರೇಸ್‌ನಿಂದ ಹೊರಬಿದ್ದಿವೆ.

IPL Auction 2022: ಈ ಐವರು ವಿದೇಶಿ ಆಲ್ರೌಂಡರ್‌ ಮೇಲೆ ಹದ್ದಿನ ಕಣ್ಣಿಟ್ಟಿವೆ ಫ್ರಾಂಚೈಸಿಗಳು..!

ಮಂಗಳವಾರ ನಡೆಯುವ ಅಂತಿಮ ಪಂದ್ಯದಲ್ಲಿ ಕರ್ನಾಟಕ, ಬೆಂಗಾಲ್‌ ವಿರುದ್ಧ ಗೆದ್ದು, ಬರೋಡ ವಿರುದ್ಧ ತಮಿಳುನಾಡು ಸೋತರೆ ಗುಂಪಿನಲ್ಲಿ ಮೊದಲ ಸ್ಥಾನ ಕರ್ನಾಟಕದ ಪಾಲಾಗಲಿದೆ. ಒಂದೊಮ್ಮೆ ಕರ್ನಾಟಕ, ತಮಿಳುನಾಡು ಎರಡೂ ತಂಡಗಳು ಗೆದ್ದರೆ ಉತ್ತಮ ನೆಟ್‌ ರನ್‌ರೇಟ್‌ ಹೊಂದಿರುವ ತಂಡ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿದ್ದು, 2ನೇ ಸ್ಥಾನ ಪಡೆಯುವ ತಂಡ ಪ್ರಿ ಕ್ವಾರ್ಟರ್‌ಗೆ ಅರ್ಹತೆ ಪಡೆಯಲಿದೆ. ಕರ್ನಾಟಕ ಹಾಗೂ ತಮಿಳುನಾಡು ದೊಡ್ಡ ಅಂತರದಲ್ಲಿ ಸೋತರಷ್ಟೇ ಗುಂಪು ಹಂತದಲ್ಲೇ ಹೊರಬೀಳಲಿವೆ.

Follow Us:
Download App:
  • android
  • ios