India vs South Africa 2nd T20: SA Wins by 51 Runs ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ 51 ರನ್ಗಳ ಸೋಲು ಕಂಡಿದೆ. ಕ್ವಿಂಟನ್ ಡಿ ಕಾಕ್ ಅವರ 90 ರನ್ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ 213 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಚಂಡೀಗಢ (ಡಿ.11): ಪ್ರವಾಸಿ ದಕ್ಷಿಣ ಆಫ್ರಿಕಾ (South Africa) ತಂಡದ ಅಬ್ಬರದ ಬ್ಯಾಟಿಂಗ್ ಎದುರು ಟೀಮ್ ಇಂಡಿಯಾ (Team India) 2ನೇ ಟಿ20 ಪಂದ್ಯದಲ್ಲಿ ಥಂಡಾ ಹೊಡೆದಿದೆ. ಅನುಭವಿ ಕ್ವಿಂಟನ್ ಡಿ ಕಾಕ್ (Quinton de Kock) ಸ್ಫೋಟಕ ಇನ್ನಿಂಗ್ಸ್ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಸೂಪರ್ ಇನ್ನಿಂಗ್ಸ್ ನೆರವಿನಿಂದ ಭಾರೀ ಮೊತ್ತ ಕಲೆಹಾಕಿದ್ದ ದಕ್ಷಿಣ ಆಫ್ರಿಕಾ, ಭಾರತ ತಂಡವನ್ನು 162 ರನ್ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಆ ಮೂಲಕ 2ನೇ ಟಿ20 ಪಂದ್ಯದಲ್ಲಿ 51 ರನ್ಗಳ ಗೆಲುವು ಕಂಡಿದೆ. ಅದರೊಂದಿಗೆ ದಕ್ಷಿಣ ಆಫ್ರಿಕಾ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಗುರುವಾರ ಮಹಾರಾಜಾ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 4 ವಿಕೆಟ್ಗೆ 213 ರನ್ಗಳ ಭರ್ಜರಿ ಮೊತ್ತ ಪೇರಿಸಿತು. ಇದಕ್ಕೆ ಕಾರಣರಾದವರು ಅನುಭವಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್. 46 ಎಸೆತಗಳ ಇನ್ನಿಂಗ್ಸ್ ಆಡಿದ ಮಾಜಿ ಕ್ಯಾಪ್ಟನ್ 5 ಬೌಂಡರಿ, 7 ಸಿಕ್ಸರ್ಗಳೊಂದಿಗೆ 90 ರನ್ ಬಾರಿಸಿದರು. ಅವರಿಗೆ ಸಾಥ್ ನೀಡಿದ ಏಡೆನ್ ಮಾರ್ಕ್ರಮ್ (29 ರನ್, 26 ಎಸೆತ, 1 ಬೌಂಡರಿ, 2 ಸಿಕ್ಸರ್) ತಾಳ್ಮೆಯ ಆಟವಾಡಿದರೆ, ಡವಾಲ್ಡ್ ಬ್ರೇವಿಸ್ (14 ರನ್, 10 ಎಸೆತ, 1 ಬೌಂಡರಿ, 1 ಸಿಕ್ಸರ್), ಡೊನೊವನ್ ಫೆರಿರಾ (30 ರನ್, 16 ಎಸೆತ, 1 ಬೌಂಡರಿ, 3 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (20 ರನ್, 12 ಎಸೆತ, 2 ಬೌಂಡರಿ, 1 ಸಿಕ್ಸರ್) ನೆರವಿನಿಂದ ತಂಡ ದೊಡ್ಡ ಮೊತ್ತ ಪೇರಿಸಿತು.
ತಿಲಕ್ ವರ್ಮ ಅರ್ಧಶತಕ
ನಾಯಕ ಶುಭ್ಮನ್ ಗಿಲ್ ಗೋಲ್ಡನ್ ಡಕ್ನೊಂದಿಗೆ ಟೀಮ್ ಇಂಡಿಯಾ ಚೇಸಿಂಗ್ ಆರಂಭಿಸಿತು. ಅಭಿಷೇಕ್ ಶರ್ಮ (17), ಉಪನಾಯಕ ಸೂರ್ಯಕುಮಾರ್ ಯಾದವ್ (5) ತಂಡದ ಮೊತ್ತ 32 ರನ್ ಆಗುವುದರ ಒಳಗಾಗಿ ಡಗ್ಔಟ್ ಸೇರಿದ್ದರು. ಕೆಲ ಹೊತ್ತು ತಿಲಕ್ ವರ್ಮಗೆ ಆಸರೆಯಾದ ಅಕ್ಷರ್ ಪಟೇಲ್ 21 ಎಸೆತಗಳಲ್ಲಿ 21 ರನ್ಬಾರಿಸಿದರು. ಸೂಪರ್ ಇನ್ನಿಂಗ್ಸ್ ಆಡಿದ ತಿಲಕ್ ವರ್ಮ 34 ಎಸೆತಗಳಲ್ಲಿ 5 ಸಿಕ್ಸರ್, 2 ಬೌಂಡರಿ ಇದ್ದ 62 ರನ್ ಬಾರಿಸಿ ಗೆಲುವಿಗೆ ತೀವ್ರ ಹೋರಾಟ ಮಾಡಿದರು. ಆದರೆ, ಅವರಿಗೆ ಸೂಕ್ತ ಜೊತೆಯಾಟದ ಕೊರತೆ ಎದುರಾಯಿತು. ಅನುಭವಿ ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 20 ರನ್ ಬಾರಿಸಿದರೆ, ವಿಕೆಟ್ ಕೀಪರ್ ಜಿತೇಶ್ ಶರ್ಮ 17 ಎಸೆತಗಳಲ್ಲಿ 27 ರನ್ ಬಾರಿಸಿದರು. ನಂತರ ಯಾರೊಬ್ಬರಿಂದಲೂ ತಿಲಕ್ ವರ್ಮಗೆ ಸಾಥ್ ಸಿಗಲಿಲ್ಲ. ಇದರಿಂದಾಗಿ 19.1 ಓವರ್ಗಳಲ್ಲಿ ಭಾರತ 162 ರನ್ಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಒಟ್ಟಾನೆಲ್ ಬಾರ್ಟ್ಮನ್ 4 ವಿಕೆಟ್ ಉರುಳಿಸಿದರು.
ಭಾನುವಾರ ಮೂರನೇ ಟಿ20
ಉಭಯ ದೇಶಗಳ ನಡುವಿನ ಮೂರನೇ ಟಿ20 ಪಂದ್ಯ ಭಾನುವಾರ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಟೆಸ್ಟ್ ಸರಣಿಯಲ್ಲಿ ಸೋಲು ಕಂಡಿದ್ದ ಭಾರತ ಬಳಿಕ ಏಕದಿನ ಸರಣಿ ಗೆದ್ದು ದಕ್ಷಿಣ ಆಫ್ರಿಕಾ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಈಗ ಐದು ಪಂದ್ಯಗಳ ಟಿ20 ಸರಣಿ ಗೆದ್ದು, ಆಫ್ರಿಕಾ ಸಿರೀಸ್ ಮುಗಿಸುವ ವಿಶ್ವಾಸದಲ್ಲಿದೆ.


