Asianet Suvarna News Asianet Suvarna News

ಟಿ20 ಸರಣಿಗಾಗಿ ಭಾರತಕ್ಕೆ ತಂಡದ ಆಯ್ಕೆಯೇ ಸವಾಲು..!

ಇಂಗ್ಲೆಂಡ್‌ ವಿರುದ್ದದ ಟಿ20 ಸರಣಿಗೆ ಆಡುವ ಹನ್ನೊಂದರ ಬಳಗದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎನ್ನುವ ಗೊಂದಲದಲಕ್ಕೆ ಸಿಲುಕಿದ್ದಾರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ಇಂಗ್ಲೆಂಡ್‌ ವಿರುದ್ದದ 5 ಪಂದ್ಯಗಳ ಟಿ20 ಸರಣಿ ಮಾರ್ಚ್ 12ರಿಂದ ಆರಂಭವಾಗಲಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Ind vs Eng T20 Series Selection Dilemma for Team India Captain Virat Kohli kvn
Author
Ahmedabad, First Published Mar 10, 2021, 1:18 PM IST

ಅಹಮದಾಬಾದ್(ಮಾ.10)‌: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟಿ 20 ಸರಣಿ ಶುಕ್ರವಾರದಿಂದ ಆರಂಭಗೊಳ್ಳಲಿದ್ದು, ಮುಂಬರುವ ಟಿ20 ವಿಶ್ವಕಪ್‌ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇಂಗ್ಲೆಂಡ್‌ ವಿರುದ್ಧ ಟಿ20 ಸರಣಿಗೆ ಈಗಾಗಲೇ 19 ಆಟಗಾರರನ್ನು ಒಳಗೊಂಡ ಬಲಿಷ್ಠ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಿದ್ದು, ಆಡುವ ಅಂತಿಮ 11ರ ಬಳಗಕ್ಕೆ ಯಾರನ್ನು ಆಯ್ಕೆ ಮಾಡಬೇಕೆಂಬ ಜಿಜ್ಞಾಸೆ ಉಂಟಾಗಿದೆ. ಏಕೆಂದರೆ ಈ ಬಾರಿಯ ಟಿ20 ವಿಶ್ವಕಪ್‌ ಭಾರತದಲ್ಲೇ ನಡೆಯಲಿದ್ದು, ಇನ್ನೇನು ಕೆಲವೇ ತಿಂಗಳು ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್‌ ದೃಷ್ಟಿಯಿಂದ ತಂಡದ ಸಂಯೋಜನೆಗೆ ಸಹಕಾರಿಯಾಗಲಿದೆ.

ರೋಹಿತ್‌ ಶರ್ಮಾ ಜತೆ ಓಪನಿಂಗ್‌ ಯಾರು?:

ರೋಹಿತ್‌ ಶರ್ಮಾಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದ್ದು, ಇದೀಗ ರೋಹಿತ್‌ ಜತೆ ಯಾರನ್ನು ಆರಂಭಿಕರಾಗಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಚಿಂತೆ ಆಯ್ಕೆಗಾರರಿಗೆ ಶುರುವಾಗಿದೆ. ಏಕೆಂದರೆ ಶಿಖರ್‌ ಧವನ್‌ ತಂಡಕ್ಕೆ ಮರಳಿದ್ದು, ಮೊದಲಿನಂತೆ ರೋಹಿತ್‌ ಜೊತೆಗೂಡಿ ಇನ್ನಿಂಗ್ಸ್‌ ಆರಂಭಿಸಿದರೆ ಕೆ.ಎಲ್‌.ರಾಹುಲ್‌ ಬೆಂಚ್‌ ಕಾಯಬೇಕಾಗುವ ಸಾಧ್ಯತೆಗಳಿವೆ.

ಏಕೆಂದರೆ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ತಂಡದಲ್ಲಿ ಅವಕಾಶ ಪಡೆದಿದ್ದ ರಾಹುಲ್‌ಗೆ ಪ್ರಬಲ ಸ್ಪರ್ಧಿಯಾಗಿ ರಿಷಭ್‌ ಪಂತ್‌ ಉದಯಿಸಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ತಮಗೆ ಸಿಕ್ಕ ಅವಕಾಶವನ್ನು ರಿಷಭ್‌ ಎರಡೂ ಕೈಯಲ್ಲಿ ಬಾಚಿಕೊಂಡಿದ್ದು, ಬ್ಯಾಟಿಂಗ್‌ ಹಾಗೂ ಕೀಪಿಂಗ್‌ನಲ್ಲೂ ಗಮನ ಸೆಳೆದಿದ್ದಾರೆ. ಅಲ್ಲದೇ ಮತ್ತೊಬ್ಬ ಯುವ ಆಟಗಾರ ಇಶಾನ್‌ ಕಿಶಾನ್‌ ಸಹ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ವಿಜಯ್‌ ಹಜಾರೆ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಕೆಟ್‌ ಕೀಪರ್‌- ಬ್ಯಾಟ್ಸ್‌ಮನ್‌ ಸ್ಥಾನಕ್ಕಾಗಿ ರಾಹುಲ್‌, ಪಂತ್‌ ಹಾಗೂ ಇಶಾನ್‌ ನಡುವೆ ಪೈಪೋಟಿ ಉಂಟಾಗಿದೆ.

ಐಪಿಎಲ್‌ ನಡೆವ ಸ್ಥಳದಲ್ಲೇ ಟಿ20 ವಿಶ್ವಕಪ್ ಪಂದ್ಯಗಳು..?

ಇನ್ನು 3ನೇ ಸ್ಥಾನದಲ್ಲಿ ವಿರಾಟ್‌ ಬ್ಯಾಟಿಂಗ್‌ಗೆ ಬರಲಿದ್ದು, 4ನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಮಿಂಚುತ್ತಿದ್ದಾರೆ. ಆದರೆ, ಐಪಿಎಲ್‌ ಹಾಗೂ ವಿಜಯ್‌ ಹಜಾರೆ ಟೂರ್ನಿಯಲ್ಲಿ ಮಧ್ಯಮ ಕ್ರಮಾಂಕದಲ್ಲಿ ಲೀಲಾಜಾಲವಾಗಿ ಬ್ಯಾಟ್‌ ಬೀಸುತ್ತಿರುವ ಸೂರ್ಯ ಕುಮಾರ್‌ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಹೀಗಾಗಿ 4ನೇ ಕ್ರಮಾಂಕದಲ್ಲಿ ಅಯ್ಯರ್‌ರನ್ನು ಆಡಿಸಬೇಕೋ, ಅಥವಾ ಸೂರ್ಯಕುಮಾರ್‌ಗೆ ಅವಕಾಶ ನೀಡಬೇಕೋ? ಎಂಬ ಲೆಕ್ಕಾಚಾರ ಶುರುವಾಗಿದೆ.

ಸದ್ಯಕ್ಕೆ 5ನೇ ಸ್ಥಾನವನ್ನು ಹಾರ್ದಿಕ್‌ ಪಾಂಡ್ಯ ಗಟ್ಟಿಯಾಗಿಸಿಕೊಂಡಿದ್ದಾರೆ. 6ನೇ ಕ್ರಮಾಂಕದಲ್ಲಿ ಆಡಲು ಇಶಾನ್‌ ಹಾಗೂ ಪಂತ್‌ ನಡುವೆ ಪೈಪೋಟಿ ಆರಂಭಗೊಂಡಿದ್ದು, ಒಂದೊಮ್ಮೆ ಇವರಿಬ್ಬರಲ್ಲಿ ಒಬ್ಬರಿಗೆ ಅವಕಾಶ ನೀಡಿದರೆ ರಾಹುಲ್‌ ಅವಕಾಶವಂಚಿತರಾಗಲಿದ್ದಾರೆ.

ಸ್ಪಿನ್ನರ್‌ಗಳ ಪಡೆ: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಭಾರತ ಪಾಲಾಗುವಲ್ಲಿ ಸ್ಪಿನ್ನರ್‌ಗಳ ಪಾತ್ರ ಹಿರಿದಾಗಿದ್ದು, ಇದೇ ಕಾರಣಕ್ಕೆ ಸ್ಪಿನ್ನರ್‌ಗಳಿಗೆ ಭಾರೀ ಬೇಡಿಕೆ ಬಂದಿದೆ. ಅದರಲ್ಲೂ ಟೆಸ್ಟ್‌ ಸರಣಿಯಲ್ಲಿ ಅಕ್ಷರ್‌ ಪಟೇಲ್‌ ಹಾಗೂ ವಾಷಿಂಗ್‌ ಟನ್‌ ಸುಂದರ್‌ ಮಿಂಚು ಹರಿಸಿದ್ದು, ಇವರೊಂದಿಗೆ ಅನುಭವಿ ಯಜುವೇಂದ್ರ ಚಹಲ್‌ ತಂಡದಲ್ಲಿದ್ದಾರೆ. ಇನ್ನು ಯುವ ಸ್ಪಿನ್ನರ್‌ ವರಣ್‌ ಚಕ್ರವರ್ತಿ ಸಹ ಅವಕಾಶಕ್ಕಾಗಿ ಕಾಯುತ್ತಿದ್ದು, ನಾಲ್ವರಲ್ಲಿ ಇಬ್ಬರನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ.

ನಟರಾಜನ್‌, ದೀಪಕ್‌ ಚಹರ್‌, ನವದೀಪ್‌ ಸೈನಿ ಹಾಗೂ ಶಾರ್ದೂಲ್‌ ಠಾಕೂರ್‌ ವೇಗದ ಬೌಲಿಂಗ್‌ ಪಡೆಯಲಿದ್ದು, ಬಹಳ ಸಮಯದ ನಂತರ ಭುವನೇಶ್ವರ್‌ ತಂಡವನ್ನು ಕೂಡಿಕೊಂಡಿದ್ದಾರೆ. ಆಸ್ಪ್ರೇಲಿಯಾ ಸರಣಿಯಲ್ಲಿ ನಟರಾಜನ್‌, ಠಾಕೂರ್‌ ತಮ್ಮ ಸಾಮರ್ಥ್ಯ ಸಾಬೀತು ಪಡೆಸಿದ್ದಾರೆ. ಅನುಭವಿ ಭುವನೇಶ್ವರ್‌ ಬೌಲಿಂಗ್‌ ವಿಭಾಗವನ್ನು ಮುನ್ನಡೆಸುವುದು ಬಹುತೇಕ ಖಚಿತವಾಗಿದ್ದು, ಇನ್ನುಳಿದ ಇಬ್ಬರು ಅಥವಾ ಒಬ್ಬ ವೇಗಿಗಾಗಿ ಹುಡುಕಾಟ ಆರಂಭವಾಗಿದೆ.

ಇನ್ನು ಗಾಯದ ಸಮಸ್ಯೆಯಿಂದ ಜಡೇಜಾ, ಶಮಿ ತಂಡದಿಂದ ದೂರ ಉಳಿದಿದ್ದರೆ, ವೈಯಕ್ತಿಕ ಕಾರಣಕ್ಕಾಗಿ ಬೂಮ್ರಾ ರಜೆಯ ಮೇಲೆ ತೆರಳಿದ್ದಾರೆ. ಇವರೆಲ್ಲ ಮತ್ತೆ ತಂಡವನ್ನು ಕೂಡಿಕೊಂಡರೆ ಆಯ್ಕೆ ದೊಡ್ಡ ತಲೆನೋವಾಗಲಿದೆ.
 

Follow Us:
Download App:
  • android
  • ios