IND vs AUS T20 ಪಾಂಡ್ಯ, ರಾಹುಲ್ ಸ್ಫೋಟಕ ಇನ್ನಿಂಗ್ಸ್, ಆಸ್ಟ್ರೇಲಿಯಾಗೆ 209 ರನ್ ಟಾರ್ಗೆಟ್
ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಹಾಫ್ ಸೆಂಚುರಿ, ಸೂರ್ಯಕುಮಾರ್ ಯಾದವ್ ಸ್ಫೋಟಕ ಇನ್ನಿಂಗ್ಸ್ನಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 208 ರನ್ ಸಿಡಿಸಿದೆ.
ಮೊಹಾಲಿ(ಸೆ.20): ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್, ಕೆಎಲ್ ರಾಹುಲ್ ಹಾಫ್ ಸೆಂಚುರಿ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿದೆ. ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಸತತ ಸಿಕ್ಸರ್ನಿಂದ ಟೀಂ ಇಂಡಿಯಾ 200ರ ಗಡಿ ದಾಟಿತು. ಟಾಸ್ ಸೋತ ಟೀಂ ಇಂಡಿಯಾ ಮೊಹಾಲಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಇಳಿಯಿತು. ಕೆಎಲ್ ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ಸ್ಫೋಟಕ ಆರಂಭ ಕೇವಲ 21 ರನ್ಗಳಿಗೆ ಅಂತ್ಯವಾಯ್ತು. ರೋಹಿತ್ ಶರ್ಮಾ 11 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಏಷ್ಯಾಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ವಿರುದ್ಧ ಸೆಂಚುರಿ ಸಿಡಿಸಿ ಕಳಪೆ ಫಾರ್ಮ್ನಿಂದ ಹೊರಬಂದ ವಿರಾಟ್ ಕೊಹ್ಲಿ ಮತ್ತೆ ನಿರಾಸೆ ಅನುಭವಿಸಿದರು. ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 2 ರನ್ ಸಿಡಿಸಿ ಔಟಾದರು. 35 ರನ್ಗಳಿಗೆ ಭಾರತ ಪ್ರಮುಖ 2 ವಿಕೆಟ್ ಕಳೆದುಕೊಂಡಿತು.
ಕೆಎಲ್ ರಾಹುಲ್(KL Rahul) ಹಾಗೂ ಸೂರ್ಯಕುಮಾರ್ ಯಾದವ್(Suryakumar Yadav) ಜೊತೆಯಾಟದಿಂದ ಟೀಂ ಇಂಡಿಯಾ(Team India) ಅಷ್ಟೇ ವೇಗದಲ್ಲಿ ಹಳಿಗೆ ಮರಳಿತು. ರಾಹುಲ್ ಹಾಗೂ ಸೂರ್ಯಕುಮಾರ್ ಸ್ಫೋಟಕ ಇನ್ನಿಂಗ್ಸನಿಂದ ಬಹುಬೇಗ ಭಾರತ 100 ರನ್ ಗಡಿ ದಾಟಿತು. ಅಬ್ಬರಿಸಿದ ರಾಹುಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಇತ್ತ ಸೂರ್ಯಕುಮಾರ್ ಯಾದವ್ ಉತ್ತಮ ಸಾಥ್ ನೀಡಿದರು.
ಅಕ್ಟೋಬರ್ 01ರಿಂದ ICC ಹೊಸ ಕ್ರಿಕೆಟ್ ನಿಯಮಗಳು ಜಾರಿ; ಫ್ಯಾನ್ಸ್ ತಿಳಿದಿರಬೇಕಾದ ಸಂಗತಿಗಳಿವು..!
ಕೆಎಲ್ ರಾಹುಲ್ 35 ಎಸೆತದಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 55 ರನ್ ಸಿಡಿಸಿ ಔಟಾದರು. ಇತ್ತ ಸೂರ್ಯಕುಮಾರ್ ಯಾದವ್ ವಿಕೆಟ್ ಪತನಗೊಂಡಿತು. 25 ಎಸೆತದಲ್ಲಿ 2 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ ಸೂರ್ಯಕುಮಾರ್ ಯಾದವ್ 46 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 4 ರನ್ಗಳಿಂದ ಅರ್ಧಶತಕ ವಂಚಿತರಾದರು.
ಹಾರ್ಧಿಕ್ ಪಾಂಡ್ಯ(Hardik Pandya) ಅಬ್ಬರಿಸಲು ಆರಂಭಿಸಿದರೆ, ಇತ್ತ ಅಕ್ಸರ್ ಪಟೇಲ್ ವಿಕೆಟ್ ಕೈಚೆಲ್ಲಿದರು. ಪಟೇಲ್ 6 ರನ್ ಸಿಡಿಸಿ ಔಟಾದರು. ಇತ್ತ ದಿನೇಶ್ ಕಾರ್ತಿಕ್ ಕೂಡ 6 ರನ್ ಸಿಡಿಸಿ ಔಟಾದರು. ಆದರೆ ಹಾರ್ದಿಕ್ ಪಾಂಡ್ಯ ಸ್ಫೋಟಕ ಇನ್ನಿಂಗ್ಸ್ನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಅಬ್ಬರಿಸಿದ ಪಾಂಡ್ಯ ಹಾಫ್ ಸೆಂಚುರಿ ಸಿಡಿಸಿದರು. ಹಾರ್ದಿಕ್ ಪಾಂಡ್ಯ 30 ಎಸೆತದಲ್ಲಿ 7 ಬೌಂಡರಿ 5 ಸಿಕ್ಸರ್ ಮೂಲಕ ಅಜೇಯ 71 ರನ್ ಸಿಡಿಸಿದರು. ಇದರೊಂದಿಗೆ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 208 ರನ್ ಸಿಡಿಸಿತು.
ವಿರಾಟ್ ಕೊಹ್ಲಿ(Virat Kohli), ರೋಹಿತ್ ಶರ್ಮಾ(Rohit sharma) ಹಾಗೂ ದಿನೇಶ್ ಕಾರ್ತಿಕ್ ಈ ಪಂದ್ಯದಲ್ಲಿ ಅಬ್ಬರಿಸಲು ವಿಫಲರಾದರು. ಏಷ್ಯಾಕಪ್ ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಟೀಂ ಇಂಡಿಯಾ ಇದೀಗ ತವರಿನಲ್ಲಿ ಅಬ್ಬರಿಸಿದೆ.