* ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ವರುಣ ಅಡ್ಡಿ* ನಾಲ್ಕು ದಿನದಾಟಗಳ ಪೈಕಿ ಎರಡು ದಿನ ಒಂದೂ ಎಸೆತ ಕಾಣದೇ ರದ್ದು.* ಮಹತ್ವದ ಪಂದ್ಯಗಳನ್ನು ಇಂಗ್ಲೆಂಡ್‌ ನಡೆಸಬಾರದೆಂದ ಮಾಜಿ ಕ್ರಿಕೆಟಿಗ ಪೀಟರ್‌ಸನ್

ಸೌಥಾಂಪ್ಟನ್‌(ಜೂ.22): ಅತ್ಯಂತ ಮಹತ್ವವಿರುವ, ಚಾಂಪಿಯನ್ನರನ್ನು ನಿರ್ಧರಿಸಿರುವ ‘ಏಕೈಕ ಪಂದ್ಯ’ಗಳನ್ನು ಇಂಗ್ಲೆಂಡ್‌ನಲ್ಲಿ ಮಾತ್ರ ನಡೆಸಬಾರದು ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್‌ ಪೀಟರ್‌ಸನ್‌ ಅಭಿಪ್ರಾಯಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಅಡ್ಡಿ ಪಡಿಸಿತ್ತು. ಟೆಸ್ಟ್‌ ವಿಶ್ವಕಪ್ ಎಂದೇ ಬಿಂಬಿಸಲ್ಪಟ್ಟಿರುವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಆದರೆ ಮಳೆರಾಯ ಪದೇ ಪದೇ ಈ ಪಂದ್ಯಕ್ಕೆ ಅಡ್ಡಿಯಾಗಿದ್ದಾನೆ. ಸದ್ಯ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗಿ 4 ದಿನಗಳು ಕಳೆದಿದ್ದು, ಈ ಪೈಕಿ ಎರಡು ದಿನ ಒಂದೂ ಎಸೆತ ಕಾಣದೇ ದಿನದಾಟ ರದ್ದಾಗಿದೆ. ಕ್ರಿಕೆಟ್‌ ಅಭಿಮಾನಿಗಳು ಸಹಾ ಇಂಗ್ಲೆಂಡ್‌ನಲ್ಲಿ ಈ ಟೂರ್ನಿ ಆಯೋಜಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮಳೆ ಆಟಕ್ಕೆ ಭಾರತ-ನ್ಯೂಜಿಲೆಂಡ್ ಸುಸ್ತು, ನಾಲ್ಕನೇ ದಿನದಾಟ ಅಂತ್ಯ!

Scroll to load tweet…

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ಅತ್ಯಂತ ಮಹತ್ವ ಎನಿಸಿರುವ ಪಂದ್ಯವನ್ನು ಇಂಗ್ಲೆಂಡ್‌ನಲ್ಲಿ ನಡೆಸಬಾರದು ಎಂದು ಹೇಳಲು ನೋವಾಗುತ್ತದೆ. ನನ್ನನ್ನು ಕೇಳಿದ್ದರೆ ದುಬೈನಲ್ಲಿ ನಡೆಸಿದ್ದರೆ ಪಂದ್ಯಕ್ಕೆ ಯಾವುದೇ ಅಡ್ಡಿಯಾಗುತ್ತಿರಲಿಲ್ಲ. ತಟಸ್ಥ ತಾಣ, ಅತ್ಯುತ್ತಮ ಕ್ರೀಡಾಂಗಣ, ಮಳೆ ಸಮಸ್ಯೆಯಿಲ್ಲ, ಅಭ್ಯಾಸಕ್ಕೆ ಉತ್ಕೃಷ್ಟ ಸೌಲಭ್ಯದ ಜೊತೆಗೆ ಐಸಿಸಿ ಪ್ರಧಾನ ಕಚೇರಿಯು ಕ್ರೀಡಾಂಗಣದ ಪಕ್ಕದಲ್ಲೇ ಇದೆ’ ಎಂದಿದ್ದಾರೆ.

ಐಸಿಸಿಯಿಂದ 6ನೇ ದಿನದ ಟಿಕೆಟ್‌ ಮಾರಾಟ ಆರಂಭ

ಪಂದ್ಯಕ್ಕೆ ಮಳೆ ಅಡ್ಡಿಯಾಗಿರುವ ಕಾರಣ, ಮೀಸಲು ದಿನ ಬಳಕೆ ಮಾಡುವುದು ಅನಿವಾರ್ಯವಾಗಬಹುದು ಎನ್ನುವ ಲೆಕ್ಕಾಚಾರದ ಮೇಲೆ 6ನೇ ದಿನದಾಟದ ಟಿಕೆಟ್‌ ಮಾರಾಟವನ್ನು ಐಸಿಸಿ ಆರಂಭಿಸಿದೆ ಎಂದು ತಿಳಿದುಬಂದಿದೆ. ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿದ್ದ ಕಾರಣ, ಆ ದಿನದ ಟಿಕೆಟ್‌ಗಳನ್ನು ಖರೀದಿಸಿದ್ದವರಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ನಿತ್ಯ 4000 ಪ್ರೇಕ್ಷಕರಿಗೆ ಮಾತ್ರ ಅವಕಾಶವಿರುವ ಕಾರಣ, ಐಸಿಸಿ ಲಾಟರಿ ಎತ್ತುವ ಮೂಲಕ ಪಂದ್ಯದ ಟಿಕೆಟ್‌ ಮಾರಾಟ ನಡೆಸಿತ್ತು.