ICC Test Rankings: ನಂ.1 ಸ್ಥಾನಕ್ಕೆ ಜಿಗಿದ ಅಶ್ವಿನ್, ವಿರಾಟ್ ಕೊಹ್ಲಿ ಶೈನಿಂಗ್..!
* ಐಸಿಸಿ ನೂತನ ಟೆಸ್ಟ್ ಶ್ರೇಯಾಂಕ ಪ್ರಕಟ
* ಬೌಲರ್ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ ರವಿಚಂದ್ರನ್ ಅಶ್ವಿನ್
* ಅಹಮದಾಬಾದ್ ಟೆಸ್ಟ್ನಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ 8 ಸ್ಥಾನ ಜಿಗಿತ
ದುಬೈ(ಮಾ.16): ಆಸ್ಪ್ರೇಲಿಯಾ ವಿರುದ್ಧ 4ನೇ ಟೆಸ್ಟ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಭಾರತದ ಸ್ಪಿನ್ನರ್ ಆರ್.ಅಶ್ವಿನ್ ಐಸಿಸಿ ಟೆಸ್ಟ್ ಬೌಲರ್ಗಳ ಪಟ್ಟಿಯಲ್ಲಿ ನಂ.1 ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಬುಧವಾರ ಪ್ರಕಟಗೊಂಡ ಪರಿಷ್ಕೃತ ಪಟ್ಟಿಯಲ್ಲಿ 869 ರೇಟಿಂಗ್ ಅಂಕ ಪಡೆದಿರುವ ಅಶ್ವಿನ್, ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್(859)ಗಿಂತ 10 ಅಂಕ ಮುಂದಿದ್ದಾರೆ. ಕಳೆದ ವಾರ ಆ್ಯಂಡರ್ಸನ್ ಜೊತೆ ಅಶ್ವಿನ್ ಅಗ್ರಸ್ಥಾನ ಹಂಚಿಕೊಂಡಿದ್ದರು.
ಇನ್ನು ಅಹಮದಾಬಾದ್ ಟೆಸ್ಟ್ನಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ 8 ಸ್ಥಾನ ಜಿಗಿತ ಕಂಡಿದ್ದು, 13ನೇ ಸ್ಥಾನ ಪಡೆದಿದ್ದಾರೆ. ರೋಹಿತ್ ಶರ್ಮಾ ಒಂದು ಸ್ಥಾನ ಮೇಲೇರಿ 10ನೇ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಬೌಲರ್ಗಳ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ ತಲಾ 1 ಸ್ಥಾನ ಕುಸಿದು ಕ್ರಮವಾಗಿ 7 ಮತ್ತು 9ನೇ ಸ್ಥಾನದಲ್ಲಿದ್ದರೆ, ಆಲ್ರೌಂಡರ್ಗಳ ಪಟ್ಟಿಯ ಅಗ್ರ 5ರಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಅಕ್ಷರ್ ಪಟೇಲ್ 4ನೇ ಸ್ಥಾನಕ್ಕೇರಿದ್ದು, ಜಡೇಜಾ ಹಾಗೂ ಅಶ್ವಿನ್ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಇಂದೋರ್ ಪಿಚ್ ತೀರ್ಪು ಬಗ್ಗೆ ಬಿಸಿಸಿಐ ಮೇಲ್ಮನವಿ
ನವದೆಹಲಿ: ಭಾರತ-ಆಸ್ಪ್ರೇಲಿಯಾ ನಡುವಿನ 3 ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಇಂದೋರ್ನ ಹೋಲ್ಕರ್ ಕ್ರೀಡಾಂಗಣದ ಪಿಚ್ಗೆ ರೆಫ್ರಿ ನೀಡಿದ್ದ ಕಳಪೆ ರೇಟಿಂಗ್ ವಿರುದ್ಧ ಐಸಿಸಿಗೆ ಬಿಸಿಸಿಐ ಮೇಲ್ಮನವಿ ಸಲ್ಲಿಸಿದೆ. ಈ ಬಗ್ಗೆ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ತೀರ್ಪು ಮರುಪರಿಶೀಲಿಸುವಂತೆ ಮನವಿ ಸಲ್ಲಿಸಿದೆ ಎಂದು ತಿಳಿದುಬಂದಿದೆ.
ಪಂದ್ಯ ಮುಗಿದ ಬಳಿಕ ಡಗೌಟ್ ಸ್ವಚ್ಚಗೊಳಿಸಿದ ಎಲೈಸಿ ಪೆರ್ರಿ..! ನೆಟ್ಟಿಗರ ಮನಗೆದ್ದ ಆರ್ಸಿಬಿ ಆಟಗಾರ್ತಿ
ಈ ಬಗ್ಗೆ ಐಸಿಸಿಯ ಇಬ್ಬರು ಸದಸ್ಯರ ಸಮಿತಿ ಪರಿಶೀಲನೆ ನಡೆಸಲಿದ್ದು, 14 ದಿನಗಳಲ್ಲಿ ವರದಿ ಸಲ್ಲಿಸಲಿದೆ. 3ನೇ ಪಂದ್ಯ 3ನೇ ದಿನದ ಮೊದಲ ಅವಧಿಯಲ್ಲೇ ಕೊನೆಗೊಂಡಿತ್ತು. ಮೊದಲೆರಡು ದಿನ 30 ವಿಕೆಟ್ ಪತನಗೊಂಡಿತ್ತು. ಹೀಗಾಗಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಪಿಚ್ ‘ಕಳಪೆ’ ಎಂದು ರೇಟಿಂಗ್ ನೀಡಿದ್ದರು.
ಚೇತರಿಕೆ ಹಾದಿಯಲ್ಲಿ ಕ್ರಿಕೆಟಿಗ ರಿಷಭ್ ಪಂತ್
ಮುಂಬೈ: ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಚೇತರಿಕೆ ಹಾದಿಯಲ್ಲಿದ್ದು, ಎದ್ದು ಓಡಾಡಲು ಆರಂಭಿಸಿದ್ದಾರೆ. ಹೈಡ್ರೋಥೆರಪಿ ಚಿಕಿತ್ಸೆ ಪಡೆಯುತ್ತಿರುವ ಅವರು ಈಜುಕೊಳದೊಳಗೆ ನಡೆದಾಡುತ್ತಿರುವ ವಿಡಿಯೋವೊಂದನ್ನು ತಮ್ಮ ಟ್ವೀಟರ್, ಇನ್ಸ್ಟಾಂಗ್ರಾಂ ಖಾತೆಗಳ ಮೂಲಕ ಹಂಚಿಕೊಂಡಿದ್ದಾರೆ. ಶೀಘ್ರ ಸಂಪೂರ್ಣ ಚೇತರಿಕೆ ಕಾಣುವಂತೆ ಬಿಸಿಸಿಐ, ಹಾಲಿ ಹಾಗೂ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಪಂತ್ಗೆ ಶುಭ ಕೋರಿದ್ದಾರೆ.
50 ಓವರ್ ಕ್ರಿಕೆಟ್: 10 ವಿಕೆಟ್ ಕಿತ್ತ ಬೆಂಗ್ಳೂರಿನ ಶಹಾನ್ ಶದಾಬ್!
ಬೆಂಗಳೂರು: ಕೆಎಸ್ಸಿಎ ಬಿಟಿಆರ್ ಶೀಲ್ಡ್ ಅಂಡರ್-14 ಟೂರ್ನಿಯಲ್ಲಿ ಬೆಂಗಳೂರಿನ ಶ್ರೀರಾಮ್ ಗ್ಲೋಬ್ಲಲ್ ಶಾಲೆಯ ಶಹಾನ್ ಶದಾಬ್ 10 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ. ಫ್ರೀಡಂ ಇಂಟರ್ನ್ಯಾಷನಲ್ ಶಾಲೆ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀರಾಮ್ ಶಾಲೆ ಶಹಾನ್ರ ಶತಕ (88 ಎಸೆತದಲ್ಲಿ 115 ರನ್)ದ ನೆರವಿನಿಂದ 50 ಓವರಲ್ಲಿ 3 ವಿಕೆಟ್ಗೆ 399 ರನ್ ಕಲೆಹಾಕಿತು. ದೊಡ್ಡ ಗುರಿ ಬೆನ್ನತ್ತಿದ ಫ್ರೀಡಂ ಶಾಲೆ 7 ಓವರಲ್ಲಿ 14 ರನ್ಗೆ ಆಲೌಟ್ ಆಯಿತು. ಶಹಾನ್ 8 ರನ್ಗೆ 10 ವಿಕೆಟ್ ಕಿತ್ತರು. ಶ್ರೀರಾಮ್ ಶಾಲೆ 385 ರನ್ಗಳ ಜಯ ಸಾಧಿಸಿತು.