ಜರ್ಮನ್ ಕ್ರಿಕೆಟ್ ತಂಡದ ನಾಯಕಿ ಈ ಕನ್ನಡತಿ;ಅನುರಾಧ ದೊಡ್ಡಬಳ್ಳಾಪುರ ಸಂದರ್ಶನ!
ಕನ್ನಡಿಗರು ಹಾಗೂ ಕನ್ನಡ ವಿಶ್ವವ್ಯಾಪಿ. ಪ್ರಪಂಚದ ಯಾವುದೇ ಪ್ರದೇಶಕ್ಕೆ ಹೋದರೂ ಅಲ್ಲಿ ನಿಮಗೊಬ್ಬರು ಕನ್ನಡಿಗ ಸಿಗುತ್ತಾರೆ. ಕನ್ನಡ ನಾಡಲ್ಲಿ ಹುಟ್ಟಿ ಬೆಳೆದು, ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋದ ಕನ್ನಡಿಗರು ಅಲ್ಲೇ ವಿಶ್ವ ಗುರುತಿಸುವಂಥ ಸಾಧನೆ ಮಾಡಿದ ಹಲವರಿದ್ದಾರೆ. ಅಂಥವರಲ್ಲಿ ಒಬ್ಬರು ಅನುರಾಧ ದೊಡ್ಡಬಳ್ಳಾಪುರ.
ಬೆಂಗಳೂರಲ್ಲಿ ಹುಟ್ಟಿ ಬೆಳೆದ ಈ ಅಚ್ಚ ಕನ್ನಡತಿ ಈಗ ಜರ್ಮನಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ. ಒಂದೇ ಓವರ್ನಲ್ಲಿ ಸತತ ನಾಲ್ಕು ವಿಕೆಟ್ ಪಡೆದು ದಾಖಲೆ ಮಾಡಿದ್ದಾರೆ. 2013ರಿಂದ ಜರ್ಮನ್ ತಂಡದ ಪರವಾಗಿ ಆಡುತ್ತಿರುವ ಅನುರಾಧ ವೃತ್ತಿಯಲ್ಲಿ ವಿಜ್ಞಾನಿ. ಸದ್ಯ ಕೋವಿಡ್ ವಾರಿಯಾರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕರ್ನಾಟಕ ತಂಡ ಪರವಾಗಿ ಹಲವು ಪಂದ್ಯಗಳನ್ನು ಆಡಿರುವ ಅವರು, ತಮ್ಮ ಬಾಲ್ಯ, ಕ್ರಿಕೆಟ್ ಪಯಣ, ವೃತ್ತಿ ಜೀವನದ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಅವರು ‘ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದ ಪೂರ್ಣ ಪಾಠ ಹೀಗಿದೆ.
ನಿಮ್ಮ ಕ್ರಿಕೆಟ್ ಜೀವನದ ಕುರಿತು ವಿವರಿಸುತ್ತೀರಾ?
ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನ ಬಸವನ ಗುಡಿಯಲ್ಲಿ. ಬಾಲ್ಯದಲ್ಲಿಯೇ ಕ್ರಿಕೆಟ್ ಬಗ್ಗೆ ಒಲವಿತ್ತು. ಸ್ನೇಹಿತರೊಡನೆ ಗಲ್ಲಿ ಕ್ರಿಕೆಟ್ ಆಡಿ ಬೆಳೆದವಳು ನಾನು. 7ನೇ ತರಗತಿಯಲ್ಲಿರುವಾಗ ಅಕಾಡೆಮಿಗೆ ಸೇರಿಕೊಂಡೆ. ಕಾಲೇಜು ಕಲಿಕೆ ವೇಳೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅಭ್ಯಾಸ ಸಾಗಿತ್ತು. ಬಳಿಕ ಉನ್ನತ ಶಿಕ್ಷಣಕ್ಕೆಂದು ಇಂಗ್ಲೆಂಡ್ಗೆ ಹೋದಾಗ ಅಲ್ಲಿ ಕಾಲೇಜು ತಂಡವನ್ನು ಪ್ರತಿನಿಧಿಸಿದೆ. 2 ವರ್ಷ ಅಲ್ಲಿಯೇ ನೌಕರಿ ಮಾಡಿದ್ದರಿಂದ ಕೌಂಟಿ ತಂಡಗಳ ಪರ ಆಡುವ ಅವಕಾಶ ಸಿಕ್ತು. ಉನ್ನತ ಶಿಕ್ಷಣಕ್ಕೆ ಜರ್ಮನಿಗೆ ಬಂದಾಗ ಇಲ್ಲಿಯ ರಾಷ್ಟ್ರೀಯ ತಂಡದಲ್ಲಿ ಆಡುವ ಚಾನ್ಸ್ ಸಿಕ್ತು.
ಜರ್ಮನಿ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?
ಪಿಎಚ್ಡಿಗೆಂದು ಜರ್ಮನ್ಗೆ ಹೋಗಿದ್ದೆ. ಅಲ್ಲಿ ರಾಷ್ಟ್ರೀಯ ತಂಡಕ್ಕೆ ಆಟಗಾರರ ಆಯ್ಕೆ ನಡೆಯುತ್ತಿತ್ತು. ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡೆ. ಅವರೇ ತರಬೇತಿ ನೀಡಿ, ನನ್ನ ಪ್ರದರ್ಶನ ಕಂಡು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದರು. 2013ರಲ್ಲಿ ಪಾದಾರ್ಪಣೆಯಾಯ್ತು. 2017ರಿಂದ ನಾಯಕಿಯಾಗಿದ್ದೇನೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬೇಕಾದರೆ 18 ತಿಂಗಳು ಜರ್ಮನಿಯಲ್ಲಿ ನೆಲೆಸಿರಬೇಕು ಎನ್ನುವ ನಿಯಮ ಇತ್ತು. ಈಗ ಅದು 3 ವರ್ಷಕ್ಕೆ ಏರಿಕೆಯಾಗಿದೆ.
ವೃತ್ತಿ ಹಾಗೂ ಕ್ರಿಕೆಟ್ ಹೇಗೆ ನಿಭಾಯಿಸುತ್ತೀರಿ?
ಜರ್ಮನಿಯಲ್ಲಿ ಕ್ರಿಕೆಟ್ ವೃತ್ತಿ ಪರ ಆಟ ಅಲ್ಲ. ನಮ್ಮ ಆಟಕ್ಕೆ ಸಂಭಾವನೆಯೂ ಇಲ್ಲ. ಹೀಗಾಗಿ ಕ್ರಿಕೆಟ್ ಅನ್ನೇ ನಂಬಿಕೊಂಡರೆ ಬದುಕು ಕಷ್ಟ. ಹಾಗಾಗಿ ಪೂರ್ಣ ಪ್ರಮಾಣದಲ್ಲಿ ಕ್ರಿಕೆಟ್ ಸಾಧ್ಯವಿಲ್ಲ. ನಾನು ವೃತ್ತಿಯಲ್ಲಿ ವಿಜ್ಞಾನಿ. ನನ್ನ ವೃತ್ತಿಗೆ ನಿರಂತರ ಅಧ್ಯಯನ ಬೇಕು. ರಜೆ ವೇಳೆ ಕ್ರಿಕೆಟ್ಗೆ ಸಮಯ. ಟೂರ್ನಮೆಂಟ್ ಇರುವ 4 ತಿಂಗಳು ಮೊದಲು ಮಾಹಿತಿ ಸಿಗುತ್ತದೆ. ಆ ದಿನಗಳಿಗೆ ರಜೆ ಹೊಂದಿಸಿಕೊಳ್ಳಬೇಕು. ಇದಕ್ಕಾಗಿ ಕೆಲ ಖುಷಿಗಳನ್ನು ತ್ಯಾಗ ಮಾಡಬೇಕು.
4 ಎಸೆತದಲ್ಲಿ 4 ವಿಕೆಟ್: ಮಾಜಿ ಕರ್ನಾಟಕ ಆಟಗಾರ್ತಿ ಅನುರಾಧ ಜರ್ಮನಿ ನಾಯಕಿಯಾಗಿ ವಿಶ್ವದಾಖಲೆ..!
ಫಿಟ್ನೆಸ್, ಅಭ್ಯಾಸಕ್ಕೆ ಸಮಯ ಹೊಂದಿಸಿಕೊಳ್ಳುವುದು ಹೇಗೆ?
ಕೆಲಸ ಮುಗಿಸಿದ ಬಳಿಕ ಫಿಟ್ನೆಸ್ಗೆ ಸಮಯ ಮೀಸಲಿಡುತ್ತೇನೆ. ರಜಾ ದಿನಗಳಲ್ಲಿ ಹೆಚ್ಚಿನ ವರ್ಕೌಟ್ ಹಾಗೂ ಅಭ್ಯಾಸ ಮಾಡುತ್ತೇನೆ. ವಾರಾಂತ್ಯದಲ್ಲಿ ಕ್ಲಬ್ನಲ್ಲಿ ಅಭ್ಯಾಸ ಶಿಬಿರಗಳು ಇರುತ್ತವೆ. ಈಗ ಕೋವಿಡ್ ಇರುವುದರಿಂದ ಮನೆಯಲ್ಲಿಯೇ ಎಲ್ಲ.
ನಿಮ್ಮ ಕ್ರಿಕೆಟ್ ಬೋರ್ಡ್ ಬೆಂಬಲ ಹೇಗಿದೆ?
ನಮ್ಮ ಕ್ರಿಕೆಟ್ ಬೋರ್ಡ್ ‘ಡಾಯ್ಚರ್ ಕ್ರಿಕೆಟ್ ಬಂಡ್’ ನಮ್ಮೆಲ್ಲಾ ವೆಚ್ಚಗಳನ್ನು ಭರಿಸುತ್ತದೆ. ಬುಂಡೆಸ್ಲೀಗಾ, ಕ್ಲಬ್ ದೇಶೀ ಸರಣಿ ಆಯೋಜಿಲಾಗುತ್ತದೆ. ಅದರಲ್ಲಿ ಉತ್ತಮ ಪ್ರದರ್ಶನ ತೋರುವವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಪುರುಷರ ಕ್ರಿಕೆಟ್ನಷ್ಟೇ ಮಹಿಳಾ ಕ್ರಿಕೆಟ್ಗೂ ಹಣ ಮೀಸಲಿಡುತ್ತದೆ. ನಮಗೆ ಐಸಿಸಿ ಟಿ-20 ಮಾನ್ಯತೆ ಮಾತ್ರ ಇರುವುದರಿಂದ ಸದ್ಯಕ್ಕೆ ಆ ಮಾದರಿಯ ಕ್ರಿಕೆಟ್ ಮಾತ್ರ ನಡೆಯುತ್ತಿದೆ. ಇತ್ತೀಚೆಗೆ ಟಿ-10 ಕೂಡ ಆರಂಭವಾಗಿದೆ.
ನಿಮ್ಮ ತಂಡದ ಪ್ರಗತಿ ಹೇಗಿದೆ?
ಕಳೆದ ವರ್ಷ ಯೂರೋಪ್ ವಿಭಾಗದ ಐಸಿಸಿ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಆಡಿದ್ದೆವು. ಕೆಲ ತಿಂಗಳ ಹಿಂದೆ ಆಸ್ಟ್ರೀಯಾ ವಿರುದ್ದ ನಡೆದ ಟಿ-20 ಸರಣಿಯಲ್ಲಿ ನಮ್ಮ ತಂಡ ಕ್ಲೀನ್ ಸ್ವೀಪ್ ಮಾಡಿದೆ. ಇನ್ನು ಕೆಲವೇ ವರ್ಷದಲ್ಲಿ ವಿಶ್ವಕಪ್ನಲ್ಲೂ ಆಡುವ ಭರವಸೆ ಇದೆ.
ಆಸ್ಟ್ರಿಯಾ ವಿರುದ್ಧ ಸತತ 4 ವಿಕೆಟ್ ಪಡೆದು ದಾಖಲೆ ಮಾಡಿದ್ದೀರಿ. ಇದರ ಬಗ್ಗೆ ಹೇಳಿ.
ಇದೊಂದು ಮರೆಯಲಾಗದ ಕ್ಷಣ. ಅಗಸ್ಟ್ನಲ್ಲಿ ದ್ವಿಪಕ್ಷೀಯ ಸರಣಿಗೆ ಆಸ್ಟ್ರಿಯಾಗೆ ಹೋಗಿದ್ದೆವು. ಸರಣಿಯ ನಾಲ್ಕನೇ ಪಂದ್ಯದಲ್ಲಿ ಓವರ್ ಒಂದರ 2,3,4 ಹಾಗೂ 5ನೇ ಎಸೆತದಲ್ಲಿ ಸತತ ವಿಕೆಟ್ ಪಡೆದೆ. ಮಾಧ್ಯಮ ವೇಗದ ಬೌಲರ್ ಆಗಿರುವ ನಾನು, ನಮ್ಮ ತಂಡದಲ್ಲಿ ವೇಗಿಗಳ ಸಂಖ್ಯೆ ಹೆಚ್ಚಿದ್ದರಿಂದ ಆ ಸರಣಿಯಲ್ಲಿ ಸ್ಪಿನ್ ಬೌಲಿಂಗ್ ಮಾಡಿದ್ದೆ. ಸ್ಪಿನ್ಗೆ 4 ವಿಕೆಟ್ ಪಡೆದಿದ್ದು ಖುಷಿ ಕೊಟ್ಟಿದೆ. ಆವರೆಗೆ ಲಸಿತ್ ಮಾಲಿಂಗ ಹಾಗೂ ರಶೀದ್ ಖಾನ್ ಮಾತ್ರ ಈ ಸಾಧನೆ ಮಾಡಿದ್ದರು.
ಧೋನಿ - ಪಾಂಡ್ಯ: ತಮ್ಮ ಮುದ್ದು ಮಕ್ಕಳ ಜೊತೆ ಟೀಮ್ ಇಂಡಿಯಾದ ಕ್ರಿಕೆಟರ್ಸ್!
ಕರ್ನಾಟಕದ ಪರ ಎಷ್ಟು ವರ್ಷ ಆಡಿದ್ದೀರಿ?
ಸುಮಾರು 10 ವರ್ಷ. ಅಂಡರ್-16, ಅಂಡರ್-19, ಸೌತ್ ರೆನ್ ಪರವಾಗಿ ಆಡಿದ್ದೇನೆ.
ಮಾಜಿ ಸಹ ಆಟಗಾರರೊಂದಿಗೆ ಸಂಪರ್ಕ ಇದೆಯಾ?
ಈಗ ವ್ಯಾಟ್ಸಪ್ ಇರುವುದರಿಂದ ಎಲ್ಲವೂ ಸುಲಭ. ವೇದಾ ಕೃಷ್ಣಮೂರ್ತಿ, ಕರುಣಾ ಜೈನ್, ವನಿತಾ, ದೀಪಿಕಾ ಬಾಬು ಅವರ ಜತೆ ಸಂಪರ್ಕ ಇದೆ. ಬೆಂಗಳೂರಿಗೆ ಬಂದಾಗ ಭೇಟಿ ಆಗಿ ಸಲಹೆಯೂ ಪಡೆಯುತ್ತೇನೆ.
ಅಲ್ಲಿನ ಜನ ಕ್ರಿಕೆಟ್ ಅನ್ನು ಹೇಗೆ ಸ್ವೀಕರಿಸುತ್ತಾರೆ?
ಇಲ್ಲಿನ ಜನರಿಗೆ ಫುಟ್ಬಾಲ್ ಜೀವಾಳ. ಹಾಕಿಗೂ ಅಪಾರ ಅಭಿಮಾನಿಗಳಿದ್ದಾರೆ. ಆದರೆ ಕ್ರಿಕೆಟ್…