ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಸೋತ ನಂತರ, ಹೆಡ್ ಕೋಚ್ ಗೌತಮ್ ಗಂಭೀರ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ತಂಡದ ಆಯ್ಕೆ ಮತ್ತು ಅವರ 'ಆಲ್ರೌಂಡರ್' ನೀತಿಯ ಬಗ್ಗೆ ಸಂಜಯ್ ಮಂಜ್ರೇಕರ್ ಅವರಂತಹ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಐಸ್ಲ್ಯಾಂಡ್ ಕ್ರಿಕೆಟ್ ಕೂಡ ಗಂಭೀರ್ ಅವರನ್ನು ಅಣಕಿಸಿದೆ.
ಬೆಲ್ಫಾಸ್ಟ್: ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತಿದೆ. ಈ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಮಾಜಿ ಆಟಗಾರರು ಹಾಗೂ ಕ್ರಿಕೆಟ್ ಜಗತ್ತು ತೀವ್ರ ಟೀಕೆ ವ್ಯಕ್ತಪಡಿಸಿದೆ. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡ ಈ ಸರಣಿಯಲ್ಲಿ ಗೆಲ್ಲುವ ಫೇವರಿಟ್ ಆಗಿತ್ತು. ಆದರೆ, ಐರ್ಲೆಂಡ್ ಎರಡೂ ಪಂದ್ಯಗಳನ್ನು ಗೆದ್ದು ಐತಿಹಾಸಿಕ ಸರಣಿ ಜಯ ಸಾಧಿಸಿದೆ. ಸೂರ್ಯಕುಮಾರ್ ಯಾದವ್ ಬದಲು ಶ್ರೇಯಸ್ ಅಯ್ಯರ್ಗೆ ಕ್ಯಾಪ್ಟನ್ಸಿ ಕೊಟ್ಟಿದ್ದು ಮತ್ತು ತಂಡದ ಆಯ್ಕೆಯಲ್ಲಿ ಗಂಭೀರ್ ಮಾಡಿದ ತಪ್ಪುಗಳೇ ಈಗ ಟೀಕಾಕಾರರ ಪ್ರಮುಖ ಅಸ್ತ್ರವಾಗಿದೆ.
ಹಾಲಿ ಟಿ20 ವಿಶ್ವ ಚಾಂಪಿಯನ್ ಆಗಿರುವ ಭಾರತ, ಐರ್ಲೆಂಡ್ ವಿರುದ್ಧ ಸರಣಿ ಸೋತಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಗಂಭೀರ್ ವಿರುದ್ಧ ಸಿಕ್ಕಾಪಟ್ಟೆ ಟ್ರೋಲ್ಗಳು ಹರಿದಾಡುತ್ತಿವೆ. ಇದರ ನಡುವೆ, ಐಸ್ಲ್ಯಾಂಡ್ ಕ್ರಿಕೆಟ್ ಕೂಡ ಗಂಭೀರ್ ಅವರನ್ನು ಬಹಿರಂಗವಾಗಿ ಅಣಕಿಸಿದೆ. ತಮ್ಮ ಕೋಚಿಂಗ್ ಸಿಬ್ಬಂದಿಗೆ ಗಂಭೀರ್ ಕನಸಿನಲ್ಲೂ ಬೇಡ ಎಂದು 'X' (ಹಿಂದಿನ ಟ್ವಿಟ್ಟರ್) ನಲ್ಲಿ ಪೋಸ್ಟ್ ಮಾಡಿದೆ. 'ಗೌತಮ್ ಗಂಭೀರ್ ಅವರನ್ನು ನಮ್ಮ ಕೋಚಿಂಗ್ ಬಳಗಕ್ಕೆ ಸೇರಿಸಿಕೊಳ್ಳಲು ನಾವು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸುತ್ತೇವೆ. ಆದರೆ ಅವರಲ್ಲಿ ವಿಶೇಷ ಪ್ರತಿಭೆ ಇದೆ. ಇಂತಹ ಅದ್ಭುತ ಭಾರತೀಯ ಆಟಗಾರರನ್ನು ಇಟ್ಟುಕೊಂಡು ಐರ್ಲೆಂಡ್ನಲ್ಲಿ ಈ ರೀತಿ ಫಲಿತಾಂಶ ತರಲು ನಿಜಕ್ಕೂ ಅಸಾಧಾರಣ ಕೌಶಲ್ಯ ಬೇಕು' ಎಂದು ಐಸ್ಲ್ಯಾಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ.
ಗಂಭೀರ್ 'ಆಲ್ರೌಂಡರ್' ನೀತಿಗೆ ಮಂಜ್ರೇಕರ್ ಕಿಡಿ
ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಕೂಡ ತಂಡದ ಆಯ್ಕೆಯಲ್ಲಿನ ತಪ್ಪುಗಳನ್ನು ಎತ್ತಿ ತೋರಿಸಿದ್ದಾರೆ. ತಂಡದಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಪಾರ್ಟ್-ಟೈಮ್ ಆಲ್ರೌಂಡರ್ಗಳನ್ನು ತುಂಬುವ ಗಂಭೀರ್ ಶೈಲಿಯನ್ನು ಮಂಜ್ರೇಕರ್ ಕಟುವಾಗಿ ಟೀಕಿಸಿದ್ದಾರೆ. 'ಹಿಂದೆ ಆಲ್ರೌಂಡರ್ಗಳು ತುಂಬಾ ಕಡಿಮೆ ಇದ್ದರು. ಆದರೆ ಈಗ ಗಂಭೀರ್ ಅಡಿಯಲ್ಲಿ ಅದು ಮಿತಿ ಮೀರಿದೆ. ಭಾರತಕ್ಕೆ ಈಗ ಬೇಕಾಗಿರುವುದು ಒಬ್ಬ 'ಪಕ್ಕಾ ಮಿಡಲ್ ಆರ್ಡರ್' ಬ್ಯಾಟರ್. ಅದು ಆದಷ್ಟು ಬೇಗ ಆಗಬೇಕು' ಎಂದು ಮಂಜ್ರೇಕರ್ ಬರೆದುಕೊಂಡಿದ್ದಾರೆ.
ವಿದೇಶಿ ಪಿಚ್ಗಳಲ್ಲಿ ಚೆಂಡು ಸ್ವಿಂಗ್ ಆದಾಗ ಭಾರತದ ಬ್ಯಾಟರ್ಗಳು ತಡಬಡಾಯಿಸುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಕ್ರೀಸ್ನಲ್ಲಿ ನೆಲೆಯೂರಿ ಆಡಲು ಶುಭ್ಮನ್ ಗಿಲ್ ಅವರಂತಹ ತಾಂತ್ರಿಕವಾಗಿ ಬಲಿಷ್ಠ ಆಟಗಾರರನ್ನು ನಿಧಾನವಾಗಿ ಟಿ20 ಮಾದರಿಗೆ ಮರಳಿ ಕರೆತರಬೇಕು ಎಂದು ಮಂಜ್ರೇಕರ್ ಹೇಳಿದ್ದಾರೆ. ಐರ್ಲೆಂಡ್ ಪ್ರವಾಸದ ಈ ಆಘಾತದ ನಂತರ, ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಭಾರತದ ಮುಂದಿದೆ. ಇಂಗ್ಲೆಂಡ್ನಲ್ಲೂ ಸೋಲು ಮುಂದುವರಿದರೆ ಗಂಭೀರ್ ಮೇಲಿನ ಒತ್ತಡ ದುಪ್ಪಟ್ಟಾಗಲಿದೆ.
ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೆ ಭಾರತ ತಂಡ:
ಶುಭ್ಮನ್ ಗಿಲ್(ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್(ಉಪನಾಯಕ), ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಸೂರ್ಯಾನ್ಶ್ ಶೆಡ್ಗೆ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ದ್ ಕೃಷ್ಣ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ, ಗುರ್ನೂರ್ ಬ್ರಾರ್.
ಭಾರತ ತಂಡವು ಇಂಗ್ಲೆಂಡ್ ಪ್ರವಾಸದ ವೇಳಾಪಟ್ಟಿ
ಜುಲೈ-1: ಮೊದಲ ಟಿ20 ಮ್ಯಾಚ್: ರಾತ್ರಿ 10 ಗಂಟೆ: ಚೆಸ್ಟರ್ ಲೀ ಸ್ಟ್ರೀಟ್
ಜುಲೈ-4: ಎರಡನೇ ಟಿ20 ಮ್ಯಾಚ್: ಸಂಜೆ 7 ಗಂಟೆ: ಮ್ಯಾಂಚೆಸ್ಟರ್
ಜುಲೈ-7: ಮೂರನೇ ಟಿ20 ಮ್ಯಾಚ್: ರಾತ್ರಿ 10 ಗಂಟೆ: ನಾಟಿಂಗ್ಹ್ಯಾಮ್
ಜುಲೈ-9: ನಾಲ್ಕನೇ ಟಿ20 ಮ್ಯಾಚ್: ರಾತ್ರಿ 10 ಗಂಟೆ: ಬ್ರಿಸ್ಟಾಲ್
ಜುಲೈ-11: ಐದನೇ ಟಿ20 ಮ್ಯಾಚ್: ಸಂಜೆ 7 ಗಂಟೆ: ಸೌಥಾಂಪ್ಟನ್
ಜುಲೈ-14: ಮೊದಲ ಏಕದಿನ ಮ್ಯಾಚ್: ಮಧ್ಯಾಹ್ನ 3.30: ಸೌಥಾಂಪ್ಟನ್
ಜುಲೈ-16: ಎರಡನೇ ಏಕದಿನ ಮ್ಯಾಚ್: ಸಂಜೆ 5.30: ಕಾರ್ಡಿಫ್
ಜುಲೈ-19: ಮೂರನೇ ಏಕದಿನ ಮ್ಯಾಚ್: ಮಧ್ಯಾಹ್ನ 3.30: ಲಾರ್ಡ್ಸ್


