ಶಾಲೆ ಹೋಗುತ್ತಿದ್ದಾಗ ಒಲಿದಿತ್ತು ಐಪಿಎಲ್ ಅದೃಷ್ಠ, ಸಂಜು ಸ್ಯಾಮ್ಸನ್ ಮೊದಲ ಸಂದರ್ಶನ ಈಗ ವೈರಲ್, ಬಾಲಕ ಸಂಜು ಸ್ಯಾಮ್ಸನ್ ಐಪಿಎಲ್‌ ಹರಾಜಿನ ಬಳಿಕ ಏಷ್ಯಾನೆಟ್ ನ್ಯೂಸ್‌ಗೆ ನೀಡಿದ ಮೊದಲ ಸಂದರ್ಶನ ಇದೀಗ ಭಾರಿ ಸದ್ದು ಮಾಡುತ್ತಿದೆ.

ತಿರುವನಂತಪುರಂ (ಮಾ.10) ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ 2ನೇ ಬಾರಿಗೆ ಟ್ರೋಫಿ ಗೆದ್ದು ಸಂಭ್ರಮಿಸಿದೆ. ಇದಕ್ಕೆ ಮುಖ್ಯ ಕಾರಣ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್. ಆರಂಭಿಕ ಪಂದ್ಯಗಳಲ್ಲಿ ಅವಕಾಶ ಸಿಗದಿದ್ದರೂ ಸಿಕ್ಕ ಅವಕಾಶದಲ್ಲಿ ತಂಡಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್‌ಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸೂಪರ್ 8 , ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ನಿಂದ ಭಾರತ ಭರ್ಜರಿ ಗೆಲುವು ದಾಖಲಿಸಿ ಇತಿಹಾಸ ರಚಿಸಿದೆ. ಇದೀಗ ಸಂಜು ಸ್ಯಾಮ್ಸನ್ ಕುರಿತು ಹಲವು ಮಾಹಿತಿಗಳು ಮತ್ತೆ ಸದ್ದು ಮಾಡಿದೆ. ಇದರ ನಡುವೆ ಸಂಜು ಸ್ಯಾಮ್ಸನ್ ಮೊತ್ತ ಮೊದಲ ಬಾರಿಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನ ವಿಡಿಯೋ ಭಾರಿ ವೈರಲ್ ಆಗಿದೆ. ಶಾಲೆಗೆ ಹೋಗುತ್ತಿದ್ದ ಸಂಜು ಸ್ಯಾಮ್ಸನ್ ತನ್ನ ಪ್ರತಭೆಯಿಂದ ಐಪಿಎಲ್ ಹರಾಜಿನಲ್ಲಿ ಬಿಡ್ ಆಗಿದ್ದರು. ಇದರ ಬೆನ್ನಲ್ಲೇ ಏಷ್ಯಾನೆಟ್ ನ್ಯೂಸ್‌ಗೆ ಬಾಲಕ ಸಂಜು ಸ್ಯಾಮ್ಸನ್ ನೀಡಿದ ಸಂದರ್ಶನ ಇಲ್ಲಿದೆ.

Add Asianetnews Kannada as a Preferred SourcegooglePreferred

2012ರಲ್ಲಿ ಸಂಜು ಸ್ಯಾಮ್ಸನ್ ಶಾಲೆಗೆ ತೆರಳಿ ಸಂಜೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ಸಮಯ. ಕೇರಳ ಕ್ರಿಕೆಟ್ ತಂಡದಲ್ಲಿ ಅಂಡರ್ 14, ಅಂಡರ್ 16, ಅಂಡರ್ 19 ತಂಡಗಳಲ್ಲಿ ಸ್ಥಾನ ಪಡೆದಿದ್ದ ಸಂಜು ಸ್ಯಾಮ್ಸನ್ ತನ್ನ ಸ್ಫೋಟಕ ಬ್ಯಾಟಿಂಗ್ ಹಾಗೂ ಕೀಪಿಂಗ್‌ನಿಂದ ಗಮನಸಳೆದಿದ್ದರು. ಹೀಗಾಗಿ 2012ರಲ್ಲಿ ಕೆಕೆಆರ್ ತಂಡ ಸಂಜು ಸ್ಯಾಮ್ಸನ್‌ ಖರೀದಿ ಮಾಡಿತ್ತು. ಈ ವೇಳೆ ಸಂಜು ವಯಸ್ಸು ಕೇವಲ 17. ಸಂಜು ಅಲ್ಲೀವರೆಗೆ ಕೇರಳ ತಂಡದಲ್ಲಿ ಮಾತ್ರ ಸ್ಥಾನ ಪಡೆದಿದ್ದರು, ಭಾರತದ ಯಾವುದೇ ಅಂಡರ್ 14 ಅಥವಾ ಇತರ ತಂಡಗಳಲ್ಲಿ ಸ್ಥಾನ ಪಡೆದಿರಲಿಲ್ಲ. ಕೆಕೆಆರ್ ತಂಡಕ್ಕೆ ಬಿಡ್ ಆದ ಬೆನ್ನಲ್ಲೇ ಸಂಜು ಸ್ಯಾಮ್ಸನ್ ಏಷ್ಯಾನೆಟ್ ನ್ಯೂಸ್‌ ಜೊತೆ ಮಾತನಾಡಿದ್ದರು.

ತನ್ನ ಪರಿಚಯ ಮಾಡಿಕೊಂಡು ಮಾತನಾಡಿದ್ದ ಸಂಜು

ತನ್ನ ಹೆಸರು ಸಂಜು ಎಂದು ಪರಿಚಯ ಮಾಡಿಕೊಂಡು ಮಾತನಾಡಿದ ಬಾಲಕ ಸಂಜು ಸ್ಯಾಮ್ಸನ್, ತಂದೆ ದೆಹಲಿ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಮನೆಯಲ್ಲಿದ್ದಾರೆ ಎಂದು ವಿವರಿಸಿದ್ದಾರೆ. ಇದೇ ವೇಳೆ ಈ ಐಪಿಎಲ್ ಆಯ್ಕೆಯನ್ನು ನಾನು ಒಂದು ಅವಕಾಶವಾಗಿ ನೋಡುತ್ತಿದ್ದೇನೆ. ಈ ಸಣ್ಣ ವಯಸ್ಸಿಗೆ ದೊಡ್ಡ ದೊಡ್ಡ ಆಟಗಾರರು, ಸ್ಟಾರ್ ಪ್ಲೇಯರ್ಸ್ ಜೊತೆ ಮಾತನಾಡುವ, ತಿಳಿದುಕೊಳ್ಳುವ ಅವಕಾಶ ಸಿಗಲಿದೆ. ಅವರ ಜೊತೆ ಆಡುವ ಅವಕಾಶವೂ ಸಿಗಲಿದೆ. ಈ ಅವಕಾಶವನ್ನು ನಾನು ಬಳಸಿಕೊಳ್ಳುತ್ತೇನೆ ಎಂದು ಸಂಜು ಸ್ಯಾಮ್ಸನ್ ಹೇಳಿದ್ದರು.

View post on Instagram

ನನಗೆ ಉತ್ತಮವಾಗಿ ಆಡಬೇಕು. ಸದ್ಯ ಅದು ಮಾತ್ರ ನನ್ನ ಮುಂದಿರುವ ಗುರಿ ಎಂದ ಸಂಜು ಸ್ಯಾಮ್ಸನ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ಆಯ್ಕೆ ನನಗೆ ಒದಗಿದ ಅವಕಾಶ ಎಂದಿದ್ದರು. ಇದೇ ವೇಳೆ ಹಿಂದಿ ಹಾಗೂ ಇಂಗ್ಲೀಷ್ ಗೊತ್ತಿರುವ ಕಾರಣ ಕೆಕೆಆರ್ ತಂಡದಲ್ಲಿ ಹೊಂದಿಕೊಳ್ಳುವುದು ಕಷ್ಟವಾಗಲ್ಲ ಎಂದಿದ್ದರು. ಶಾಲೆ ತರಗತಿ ಮುಗಿಸಿ ಮಧ್ಯಾಹ್ನ 3.30ರ ವೇಳೆ ಅಭ್ಯಾಸಕ್ಕಾಗಿ ಬರುತ್ತೇನೆ. 6.30ಗೆ ಇಲ್ಲಿಂದ ಹೊರಡುತ್ತೇನೆ. ರಾತ್ರಿ 9ಗಂಟೆಗೆ ಮನಗೆ ಮರಳುತ್ತೇನೆ ಎಂದು ಸಂಜು ತನ್ನ ಅಭ್ಯಾಸದ ರೀತಿ ಹೇಳಿದ್ದರು.

ಸಂಜು ಬಾಲಕನಾಗಿ ಅತ್ಯಂತ ನಯ ವಿನಯದಿಂದ ಮಾತನಾಡಿದ ಮೊದಲ ಸಂದರ್ಶನ ಇದೀಗ ವೈರಲ್ ಆಗಿದೆ. ಈಗಲೂ ಅದೇ ನಯ ವಿನಯ ಸಂಜು ಸ್ಯಾಮ್ಸನ್ ಮಾತಿನಲ್ಲಿದೆ. ಅಂದು ಪರಿಚಯ ಮಾಡಿಕೊಂಡು ಸಂಜು ಸ್ಯಾಮ್ಸನ್ ಮಾತನಾಡಿದ್ದರು, ಈಗ ಸಂಜು ಸ್ಯಾಮ್ಸನ್ ಪರಿಚಯ ಮಾಡಿಕೊಳ್ಳುವ ಅಗತ್ಯವಿಲ್ಲ. ಸಂಜು ಸ್ಯಾಮ್ಸನ್ ಟೀಂ ಇಂಡಿಯಾ ಟಿ20 ತಂಡದ ಹೀರೋ ಆಗಿ ಬೆಳೆದು ನಿಂತಿದ್ದಾರೆ. ಭಾರತ ಮಾತ್ರವಲ್ಲ ಕ್ರಿಕೆಟ್ ಜಗತ್ತು ಸಂಜು ಸ್ಯಾಮ್ಸನ್ ಆಟಕ್ಕೆ ಮಾರು ಹೋಗಿದೆ.