- Home
- Sports
- Cricket
- ಸಚಿನ್ ತೆಂಡೂಲ್ಕರ್ ಮಾಡಿದ ಆ ಒಂದು ಫೋನ್ ಕಾಲ್ ಸಂಜು ಬದುಕನ್ನೇ ಬದಲಿಸಿತು! ಅಷ್ಟಕ್ಕೂ ಆಗಿದ್ದೇನು?
ಸಚಿನ್ ತೆಂಡೂಲ್ಕರ್ ಮಾಡಿದ ಆ ಒಂದು ಫೋನ್ ಕಾಲ್ ಸಂಜು ಬದುಕನ್ನೇ ಬದಲಿಸಿತು! ಅಷ್ಟಕ್ಕೂ ಆಗಿದ್ದೇನು?
2026ರ ಟಿ20 ವಿಶ್ವಕಪ್ನಲ್ಲಿ ಅದ್ಭುತ ಆಟವಾಡಿ 'ಟೂರ್ನಿ ಶ್ರೇಷ್ಠ' ಪ್ರಶಸ್ತಿ ಗೆದ್ದ ಸಂಜು ಸ್ಯಾಮ್ಸನ್, ತಮ್ಮ ಕಷ್ಟದ ದಿನಗಳಲ್ಲಿ ಸಚಿನ್ ತೆಂಡೂಲ್ಕರ್ ನೀಡಿದ ಬೆಂಬಲದ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.

ಟಿ20 ವಿಶ್ವಕಪ್ ಇತಿಹಾಸದಲ್ಲೇ ದೊಡ್ಡ ದಾಖಲೆ
2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್ಗಳಿಂದ ಸೋಲಿಸಿ ಭಾರತ ಮೂರನೇ ಬಾರಿಗೆ ಚಾಂಪಿಯನ್ ಆಯಿತು. ಈ ಗೆಲುವಿನಲ್ಲಿ ಕೇರಳದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸಿದರು. ಟೂರ್ನಿಯ ಆರಂಭದಲ್ಲಿ ಬೆಂಚ್ ಕಾದಿದ್ದ ಸಂಜು, ನಂತರ ಅದ್ಭುತ ಪ್ರದರ್ಶನ ನೀಡಿ 'ಸರಣಿ ಶ್ರೇಷ್ಠ' ಪ್ರಶಸ್ತಿ ಪಡೆದರು. ಈ ವೇಳೆ ಅವರು ತಮ್ಮ ವೃತ್ತಿಜೀವನದ ಕರಾಳ ದಿನಗಳನ್ನು ಮತ್ತು ಸಚಿನ್ ತೆಂಡೂಲ್ಕರ್ ಹೇಗೆ ಬೆಂಬಲವಾಗಿ ನಿಂತರು ಎಂಬುದನ್ನು ನೆನೆದು ಭಾವುಕರಾದರು.
ಕಿವೀಸ್ ಎದುರು ನೀರಸ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್
ಟಿ20 ವಿಶ್ವಕಪ್ಗೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ನೀರಸ ಪ್ರದರ್ಶನ ತೋರಿದ್ದರು. ಐದು ಇನ್ನಿಂಗ್ಸ್ಗಳಲ್ಲಿ ಕೇವಲ 46 ರನ್ ಗಳಿಸಿದ್ದರಿಂದ ಅವರು ತಂಡದಲ್ಲಿ ಸ್ಥಾನ ಕಳೆದುಕೊಂಡರು. ಅವರ ಜಾಗಕ್ಕೆ ಇಶಾನ್ ಕಿಶನ್ ಅವರನ್ನು ಆರಂಭಿಕರಾಗಿ ತಂಡಕ್ಕೆ ಸೇರಿಸಿಕೊಳ್ಳಲಾಯಿತು. 'ನ್ಯೂಜಿಲೆಂಡ್ ಸರಣಿಯ ನಂತರ ನಾನು ಸಂಪೂರ್ಣವಾಗಿ ಕುಸಿದು ಹೋಗಿದ್ದೆ. ನನ್ನ ಕನಸುಗಳು ಮುರಿದುಬಿದ್ದವು ಎಂದು ಭಾವಿಸಿದ್ದೆ. ಆದರೆ ದೇವರ ಪ್ಲಾನ್ ಬೇರೆಯೇ ಇತ್ತು. ಕಠಿಣ ಸಮಯದಲ್ಲಿ ನನಗೆ ಅವಕಾಶ ಸಿಕ್ಕಿತು, ದೇಶಕ್ಕಾಗಿ ನನ್ನ ಕೈಲಾದಷ್ಟು ಪ್ರಯತ್ನ ಮಾಡಿದೆ' ಎಂದು ಸಂಜು ತಮ್ಮ ಮನದ ಮಾತು ಹಂಚಿಕೊಂಡರು.
ಸಚಿನ್ ತೆಂಡೂಲ್ಕರ್ ಮಾರ್ಗದರ್ಶನದಲ್ಲಿ ಸಂಜು ಶೈನಿಂಗ್
ಕಷ್ಟದ ಸಮಯದಲ್ಲಿ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ತಮಗೆ ಹೇಗೆ ಬೆನ್ನೆಲುಬಾಗಿ ನಿಂತಿದ್ದರು ಎಂದು ಸಂಜು ಬಹಿರಂಗಪಡಿಸಿದರು. ಕಳೆದ ಎರಡು ತಿಂಗಳಿಂದ ತಾನು ಸಚಿನ್ ಸರ್ ಜೊತೆ ನಿರಂತರ ಸಂಪರ್ಕದಲ್ಲಿದ್ದೆ ಎಂದು ತಿಳಿಸಿದರು. 'ಆಸ್ಟ್ರೇಲಿಯಾದಲ್ಲಿ ತಂಡದಿಂದ ಹೊರಗಿದ್ದಾಗ, ನನ್ನ ಮನಸ್ಥಿತಿ ಹೇಗಿರಬೇಕು ಎಂದು ಸಚಿನ್ ಸರ್ ಬಳಿ ಕೇಳಿ ತಿಳಿದುಕೊಂಡೆ. ಅವರೊಂದಿಗೆ ಸುದೀರ್ಘವಾಗಿ ಮಾತನಾಡಿದೆ. ನಿನ್ನೆ ರಾತ್ರಿ (ಫೈನಲ್ಗೂ ಮುನ್ನ) ಕೂಡ ಅವರು ನನಗೆ ಫೋನ್ ಮಾಡಿ ಹೇಗಿದ್ದೀಯಾ ಎಂದು ವಿಚಾರಿಸಿದರು. ಅವರಂತಹ ದಿಗ್ಗಜರಿಂದ ಸ್ಪಷ್ಟತೆ ಮತ್ತು ಆಟದ ಬಗ್ಗೆ ತಿಳುವಳಿಕೆ ಸಿಕ್ಕಿದ್ದು ನನ್ನ ಅದೃಷ್ಟ' ಎಂದು ಸಂಜು ಹೇಳಿದರು.
ದಾಖಲೆಗಳ ಬೇಟೆಯಲ್ಲಿ ಸಂಜು ಪಯಣ
ಈ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಕೇವಲ 5 ಪಂದ್ಯಗಳಲ್ಲಿ 321 ರನ್ ಗಳಿಸಿದರು. ಇದರಲ್ಲಿ 199.37 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದು ವಿಶೇಷ. ವೆಸ್ಟ್ ಇಂಡೀಸ್ ವಿರುದ್ಧ 97*, ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 89 ಮತ್ತು ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 89 ರನ್ ಗಳಿಸಿ, ಸತತ ಮೂರು ಪ್ರಮುಖ ಪಂದ್ಯಗಳಲ್ಲಿ ಭಾರತವನ್ನು ಗೆಲ್ಲಿಸಿದರು. ಫೈನಲ್ನಲ್ಲಿ ಸಂಜು ಗಳಿಸಿದ 89 ರನ್ಗಳು, ಟಿ20 ವಿಶ್ವಕಪ್ ಫೈನಲ್ನಲ್ಲಿ ಬ್ಯಾಟರ್ ಒಬ್ಬರು ಗಳಿಸಿದ ಅತಿ ಹೆಚ್ಚು ವೈಯುಕ್ತಿಕ ಸ್ಕೋರ್ ಎಂಬ ದಾಖಲೆ ಬರೆಯಿತು. ಈ ಹಿಂದೆ ಮರ್ಲಾನ್ ಸ್ಯಾಮ್ಯುಯೆಲ್ಸ್ (85*) ಮತ್ತು ಕೇನ್ ವಿಲಿಯಮ್ಸನ್ (85) ಹೆಸರಿನಲ್ಲಿದ್ದ ದಾಖಲೆಗಳನ್ನು ಅವರು ಮುರಿದರು.
ಸಂಜು ಎರಡು ವರ್ಷಗಳ ನಿರೀಕ್ಷೆಗೆ ಸಿಕ್ಕ ಫಲ
ಸಂಜುಗಾಗಿ ದೇವರೇ ಬರೆದಿದ್ದ ಸ್ಕ್ರಿಪ್ಟ್!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

