Asianet Suvarna News Asianet Suvarna News

ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್‌ ವಿರುದ್ದವೇ ತಿರುಗಿ ಬಿದ್ದ ಟೀಂ ಇಂಡಿಯಾ ವಿಶ್ವಕಪ್‌ ಹೀರೋ..!

* ಬಾಂಗ್ಲಾದೇಶ ವಿರುದ್ದದ ಪಂದ್ಯದ ವೇಳೆ ಆಕ್ರೋಶ ಹೊರಹಾಕಿದ್ದ ಹರ್ಮನ್‌ಪ್ರೀತ್ ಕೌರ್
* ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಹೊಡೆದು, ಅಂಪೈರ್‌ಗಳನ್ನು ಬಹಿರಂಗವಾಗಿ ಟೀಕಿಸಿದ್ದ ಕೌರ್
*  ಕೌರ್ ವಿರುದ್ದ ಅಸಮಾಧಾನ ಹೊರಹಾಕಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ

Former cricketer Madan Lal calls for BCCI take disciplinary action after Harmanpreet Kaur angry outburst kvn
Author
First Published Jul 26, 2023, 1:56 PM IST

ನವದೆಹಲಿ(ಜು.26): ಬಾಂಗ್ಲಾದೇಶ ಎದುರಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪಿಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದೂ ಅಲ್ಲದೇ ಸ್ಟಂಪ್ಸ್‌ಗೆ ಬ್ಯಾಟಿಂದ ಹೊಡೆದ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಅವರ ನಡೆಯ ಕುರಿತಂತೆ ಸಾಕಷ್ಟು ಪರ-ವಿರೋಧಗಳ ಚರ್ಚೆ ಆರಂಭವಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಹೀರೋ ಮದನ್ ಲಾಲ್‌, ಹರ್ಮನ್‌ಪ್ರೀತ್ ಕೌರ್ ಅವರ ಈ ಆಕ್ರೋಶದ ನಡೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಅವರ ಮೇಲೆ ಬಿಸಿಸಿಐ ಶಿಸ್ತುಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. 

ಭಾರತ ಹಾಗೂ ಬಾಂಗ್ಲದೇಶ (India vs Bangladesh) ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯವು ಟೈನಲ್ಲಿ ಅಂತ್ಯವಾಗಿತ್ತು. ಈ ಪಂದ್ಯದಲ್ಲಿ ಅಂಪೈರ್ ನೀಡಿದ ಕೆಲವೊಂದು ಕೆಟ್ಟ ತೀರ್ಪುಗಳು ಭಾರತ ಪಂದ್ಯವನ್ನು ಗೆಲ್ಲುವ ಅವಕಾಶದಿಂದ ವಂಚಿರನ್ನಾಗಿಸಿತು. ಪಂದ್ಯದ ವೇಳೆ ಬ್ಯಾಟಿಂಗ್ ನಡೆಸುತ್ತಿದ್ದ ಹರ್ಮನ್‌ಪ್ರೀತ್ ಕೌರ್ ಅವರನ್ನು ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ನೀಡಿದರು. ಆಗ ತಾಳ್ಮೆ ಕಳೆದುಕೊಂಡ ಹರ್ಮನ್‌ಪ್ರೀತ್ ಕೌರ್(Harmanpreet Kaur), ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಹೊಡೆದು, ಪೆವಿಲಿಯನ್‌ನತ್ತ ಹೋಗುವಾಗ ಅಂಪೈರ್ ವಿರುದ್ದ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಇಷ್ಟಕ್ಕೇ ಸುಮ್ಮನಾಗದ ಹರ್ಮನ್‌ಪ್ರೀತ್, ಪ್ರಶಸ್ತಿ ಸ್ವೀಕಾರ ಸಮಾರಂಭದ ವೇಳೆಯಲ್ಲೂ, ಅಂಪೈರ್ ಅವರ ಏಕಪಕ್ಷೀಯ ತೀರ್ಪಿನ ವಿರುದ್ದ ಅಸಮಾಧಾನ ಹೊರಹಾಕಿದ್ದರು. 

World Cup 2023: ಇಂಡೋ-ಪಾಕ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಹೊಸ ದಿನಾಂಕ ನಿಗದಿ?

ಭಾರತ ಹಾಗೂ ಬಾಂಗ್ಲಾದೇಶ ಮಹಿಳಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಉಭಯ ತಂಡಗಳು ತಲಾ ಒಂದೊಂದು ಪಂದ್ಯ ಜಯಿಸಿದ್ದವು. ಇನ್ನು ಮೂರನೇ ಪಂದ್ಯ ಟೈನಲ್ಲಿ ಅಂತ್ಯವಾಗಿತ್ತು. ಹೀಗಾಗಿ ಉಭಯ ತಂಡಗಳು ಜಂಟಿ ಚಾಂಪಿಯನ್ ಆಗಿದ್ದವು. ಫೋಟೋ ಸೆಷನ್ ವೇಳೆಯಲ್ಲಿ ಹರ್ಮನ್‌ಪ್ರೀತ್ ಕೌರ್, ಅಂಪೈರ್‌ಗಳನ್ನು ಉದ್ದೇಶಿಸಿ, ನೀವು ನಮ್ಮ ಜತೆ ಕೂಡಿಕೊಳ್ಳಿ, ಹೇಗಿದ್ದರೂ ನೀವು ಬಾಂಗ್ಲಾದೇಶ ತಂಡದ ಪರವಾಗಿದ್ದೀರಲ್ಲ ಎಂದು ವ್ಯಂಗ್ಯವಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.  ಇದರ ಬೆನ್ನಲ್ಲೇ ಬಾಂಗ್ಲಾದೇಶ ತಂಡದ ನಾಯಕಿ ನಿಗರ್ ಸುಲ್ತಾನಾ ಹಾಗೂ ಮತ್ತವರ ಬಾಂಗ್ಲಾದೇಶ ತಂಡ ಪೋಟೋಗ್ರಾಫ್‌ ಸೆಷನ್‌ ಬಹಿಷ್ಕರಿಸಿ ಹೊರನಡೆದಿತ್ತು.

ಮದನ್‌ ಲಾಲ್ ಅಸಮಾಧಾನ:

ಇನ್ನು ಹರ್ಮನ್‌ಪ್ರೀತ್ ಕೌರ್ ಅವರ ಈ ಆಕ್ರಮಣಕಾರಿ ಮನೋಭಾವದ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ವಿಶ್ವಕಪ್ ಹೀರೋ ಮದನ್‌ ಲಾಲ್(Madan Lal) ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, "ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ವಿರುದ್ದ ಹರ್ಮನ್‌ಪ್ರೀತ್ ಕೌರ್ ನಡೆದುಕೊಂಡ ರೀತಿ ದಯಾನೀಯವಾಗಿತ್ತು. ಆಕೆ ಕ್ರೀಡೆಗಿಂತ ದೊಡ್ಡವಳೇನಲ್ಲ. ಇದರಿಂದ ಅವರು ಭಾರತ ಕ್ರಿಕೆಟ್ ತಂಡಕ್ಕೆ ಕೆಟ್ಟ ಹೆಸರು ಬಂದಂತೆ ಆಗಿದೆ. ಈ ಸಂಬಂಧ ಬಿಸಿಸಿಐ ಹರ್ಮನ್‌ಪ್ರೀತ್ ಕೌರ್ ಮೇಲೆ ಕಠಿಣ ಶಿಸ್ತುಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.

ಹರ್ಮನ್‌ಪ್ರೀತ್‌ ಕೌರ್‌ಗೆ ಐಸಿಸಿ 2 ಪಂದ್ಯ ನಿಷೇಧ

ದುಬೈ: ಬಾಂಗ್ಲಾದೇಶ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಸ್ಟಂಪ್ಸ್‌ಗೆ ಬ್ಯಾಟ್‌ನಿಂದ ಹೊಡೆದು, ಅಂಪೈರ್‌ಗಳನ್ನು ಬಹಿರಂಗವಾಗಿ ಟೀಕಿಸಿದಕ್ಕೆ ಭಾರತದ ನಾಯಕಿ ಹರ್ಮನ್‌ಪ್ರೀತ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ) 2 ಪಂದ್ಯ ನಿಷೇಧ ಹೇರಿದೆ. ಮಂಗಳವಾರ ಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪಂದ್ಯದ ಸಂಭಾವನೆಯ 50% ದಂಡ ವಿಧಿಸಲಾಗಿದೆ.

ಬ್ಯಾಟ್‌ನಿಂದ ವಿಕೆಟ್‌ ಚೆಲ್ಲಾಪಿಲ್ಲಿ ಮಾಡಿದ ಹರ್ಮನ್‌ಪ್ರೀತ್ ಕೌರ್‌ಗೆ ಐಸಿಸಿಯಿಂದ ಬ್ಯಾನ್ ಶಿಕ್ಷೆ..!

ಹರ್ಮನ್‌ಪ್ರೀತ್‌ 4 ಋಣಾತ್ಮಕ ಅಂಕಗಳಿಗೆ ಗುರಿಯಾಗಿದ್ದಾರೆ. ನಿಯಮದ ಪ್ರಕಾರ 24 ತಿಂಗಳ ಅವಧಿಯಲ್ಲಿ 4ರಿಂದ 7 ಋಣಾತ್ಮಕ ಅಂಕ ಪಡೆದರೆ, ಅದು 2 ನಿಷೇಧ ಅಂಕಗಳಾಗಿ ಪರಿಗಣಿಸಲ್ಪಡುತ್ತದೆ. 2 ನಿಷೇಧ ಅಂಕಕ್ಕೆ ಗುರಿಯಾದರೆ ಆ ಆಟಗಾರ/ಆಟಗಾರ್ತಿಯನ್ನು 1 ಟೆಸ್ಟ್‌ ಅಥವಾ 2 ಏಕದಿನ ಅಥವಾ 2 ಟಿ20 ಪಂದ್ಯಗಳಿಗೆ(ಯಾವುದು ಮೊದಲೋ ಅದು) ನಿಷೇಧಿಸಲಾಗುತ್ತದೆ.

Follow Us:
Download App:
  • android
  • ios