ಹೊಸ ಪೋನ್ ಕಳೆದುಕೊಂಡ ವಿರಾಟ್ ಕೊಹ್ಲಿ..! ಮಾಜಿ ನಾಯಕನ ಕಾಲೆಳೆದ ನೆಟ್ಟಿಗರು..!
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಫೆಬ್ರವರಿ 09ರಿಂದ ಆರಂಭ
ತಮ್ಮ ಹೊಸ ಫೋನ್ ಕಳೆದುಕೊಂಡ ಮಾಜಿ ನಾಯಕ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಟ್ವೀಟ್ ಈಗ ವೈರಲ್
ನಾಗ್ಪುರ(ಫೆ.07): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ತಾವು ಹೊಸದಾಗಿ ತೆಗೆದುಕೊಂಡ ಫೋನ್ ಕಳೆದುಕೊಂಡಿರುವುದಾಗಿ ಟ್ವೀಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ, ಸದ್ಯ ನಾಗ್ಪುರದಲ್ಲಿ ಅಭ್ಯಾಸ ನಡೆಸುತ್ತಿದ್ದು, ಇದೇ ಫೆಬ್ರವರಿ 09ರಿಂದ ಆಸ್ಟ್ರೇಲಿಯಾ ಎದುರು ಆರಂಭವಾಗಲಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದಾರೆ.
ತಮ್ಮ ಫೋನ್ ಕಳೆದುಕೊಂಡಿರುವ ಬಗ್ಗೆ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, "ಇನ್ನೂ ಅನ್ಬಾಕ್ಸ್ ಕೂಡಾ ಮಾಡದ ಹೊಸ ಫೋನ್ ಕಳೆದುಕೊಂಡಿದ್ದು, ಸಾಕಷ್ಟು ಬೇಸರವನ್ನುಂಟು ಮಾಡಿತು. ನೀವ್ಯಾರಾದರೂ ನೋಡಿದ್ರಾ?" ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಈ ಟ್ವೀಟ್ ವೈರಲ್ ಆಗಿದ್ದು, ಆನ್ಲೈನ್ನಲ್ಲಿ ಫುಡ್ ಡೆಲಿವರಿ ಮಾಡುವ ಜೊಮ್ಯಾಟೋ, "ನಿಮಗೆ ಅನುಕೂಲವಾಗುವುದಿದ್ದರೇ, ನಿಮ್ಮ ಪತ್ನಿಯ ಫೋನಿಂದ ಯಾವುದೇ ಹಿಂಜರಿಕೆಯಿಲ್ಲದೇ ಐಸ್ಕ್ರೀಂ ಆರ್ಡರ್ ಮಾಡಿ " ಎಂದು ಟ್ವೀಟ್ ಮಾಡಿ ಕೊಹ್ಲಿ ಕಾಲೆಳೆದಿದೆ.
Border-Gavaskar Trophy: ವಿರಾಟ್ ಕೊಹ್ಲಿಯೇ ನಮ್ಮ ಪಾಲಿಗೆ ಅತಿದೊಡ್ಡ ಭೀತಿ ಎಂದ ಆಸೀಸ್ ಸ್ಟಾರ್ ಆಲ್ರೌಂಡರ್..!
ಅನಿಕೇತ್ ಪಂಡಿತ್ ಎನ್ನುವ ನೆಟ್ಟಿಗನೊಬ್ಬ, ನಾನು 2006ರಲ್ಲಿ ನೋಕಿಯಾ 1110 ಫೋನ್ ಕಳೆದುಕೊಂಡಿದ್ದೆ. ನಾನಾಗ ಸಾಕಷ್ಟು ಬೇಜಾರು ಅನುಭವಿಸಿದ್ದೆ. ನಿಮ್ಮ ಫೀಲಿಂಗ್ ನನಗೆ ಅರ್ಥವಾಗುತ್ತದೆ ಸಹೋದರ ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ನಾಯಕ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಗೆ ಸಜ್ಜಾಗಿದ್ದಾರೆ. ಭಾರತ ಕ್ರಿಕೆಟ್ ತಂಡವು ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಬೇಕಿದ್ದರೇ, ಆಸೀಸ್ ಎದುರು 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಕನಿಷ್ಠ 3-1, ಅಥವಾ 2-1 ಅಂತರದಲ್ಲಿ ಜಯಿಸಬೇಕಿದೆ. ಒಂದಕ್ಕಿಂತ ಹೆಚ್ಚು ಟೆಸ್ಟ್ ಪಂದ್ಯವನ್ನು ಸೋತರೇ, ಟೀಂ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ ಮತ್ತಷ್ಟು ದುರ್ಗಮವಾಗಲಿದೆ.
ಸದ್ಯ ವಿರಾಟ್ ಕೊಹ್ಲಿ, ಭರ್ಜರಿ ಲಯದಲ್ಲಿದ್ದು, ಆಸ್ಟ್ರೇಲಿಯಾ ಬೌಲರ್ಗಳ ಮೇಲೆ ಸವಾರಿ ಮಾಡುವ ವಿಶ್ವಾಸದಲ್ಲಿದ್ದಾರೆ. ಆಸ್ಟ್ರೇಲಿಯಾ ತಂಡವು ವಿರಾಟ್ ಕೊಹ್ಲಿಯ ಭೀತಿಯಲ್ಲಿಯೇ ಭಾರತಕ್ಕೆ ಬಂದಿಳಿದಿದೆ. ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿಯೇ ನಮ್ಮ ಪಾಲಿನ ಅತಿದೊಡ್ಡ ಭೀತಿ ಎನ್ನುವುದನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ಒಪ್ಪಿಕೊಂಡಿದ್ದಾರೆ.
"ವಿರಾಟ್ ಕೊಹ್ಲಿ ಅವರೊಬ್ಬ ವಿಶ್ವದರ್ಜೆಯ ಬ್ಯಾಟರ್. ಅವರೀಗ ಫಾರ್ಮ್ಗೆ ಮರಳಿದ್ದು, ಸದ್ಯ ಅವರೊಬ್ಬ ಅತ್ಯುತ್ತಮ ಟೆಸ್ಟ್ ಬ್ಯಾಟರ್ ಆಗಿದ್ದಾರೆ. ಹೀಗಾಗಿ ಅವರು ನಮಗೆ ದೊಡ್ಡ ಭೀತಿಯಾಗಿ ಪರಿಣಮಿಸಿದ್ದಾರೆ. ಆದರೆ ಈ ಬಾರಿ ರಿಷಭ್ ಪಂತ್ ಅವರ ಸೇವೆಯನ್ನು ಭಾರತ ಮಿಸ್ ಮಾಡಿಕೊಳ್ಳಲಿದೆ. ದುರಾದೃಷ್ಟವಶಾತ್ ಅವರು ತಂಡದಲ್ಲಿ ಈ ಬಾರಿ ಇಲ್ಲ. ಅವರು ಆದಷ್ಟು ಬೇಗ ಚೇತರಿಸಿಕೊಂಡು, ಮೈದಾನಕ್ಕೆ ಮರಳಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಮಾರ್ಕಸ್ ಸ್ಟೋನಿಸ್ ಹೇಳಿದ್ದರು.