Duleep Trophy: ದಕ್ಷಿಣ ವಲಯ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಪಶ್ಚಿಮ ವಲಯ
* ಪಶ್ಚಿಮ ವಲಯ ದುಲೀಪ್ ಟ್ರೋಫಿ ಚಾಂಪಿಯನ್
* ದಕ್ಷಿಣ ವಲಯ ಎದುರು ಪಶ್ಚಿಮ ವಲಯಕ್ಕೆ 294 ರನ್ಗಳ ಜಯಭೇರಿ
* ಯಶಸ್ವಿ ಜೈಸ್ವಾಲ್ಗೆ ಪಂದ್ಯಶ್ರೇಷ್ಠ, ಜಯದೇವ್ ಉನಾದ್ಕತ್ಗೆ ಸರಣಿಶ್ರೇಷ್ಠ ಗೌರವ
ಕೊಯಮತ್ತೂರು(ಸೆ.25): ಯಶಸ್ವಿ ಜೈಸ್ವಾಲ್ ಆಕರ್ಷಕ ದ್ವಿಶತಕ, ಸರ್ಫರಾಜ್ ಖಾನ್ ಸಮಯೋಚಿತ ಶತಕ ಹಾಗೂ ಬೌಲರ್ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ದಕ್ಷಿಣ ವಲಯ ಎದುರು ಪಶ್ಚಿಮ ವಲಯ 294 ರನ್ಗಳ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ದುಲೀಪ್ ಟ್ರೋಫಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದುಲೀಪ್ ಟ್ರೋಫಿ ಪ್ರಶಸ್ತಿ ಗೆಲ್ಲಲು 529 ರನ್ಗಳ ಗುರಿ ಪಡೆದ ದಕ್ಷಿಣ ವಲಯ ಕೇವಲ 234 ರನ್ಗಳಿಗೆ ಸರ್ವಪತನ ಕಂಡಿದೆ.
ನಾಲ್ಕನೇ ದಿನದಾಟದಂತ್ಯಕ್ಕೆ ದಕ್ಷಿಣ ವಲಯ ತಂಡವು 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತ್ತು. ಆದರೆ ಕೊನೆಯ ದಿನ ದಕ್ಷಿಣ ವಲಯವು 78 ರನ್ ಸೇರಿಸುವಷ್ಟರಲ್ಲಿ ಉಳಿದ ನಾಲ್ಕು ವಿಕೆಟ್ ಕಳೆದುಕೊಂಡಿತು. ಸವಾಲಿನ ಗುರಿ ಬೆನ್ನತ್ತಿದ ದಕ್ಷಿಣ ವಲಯ ತಂಡಕ್ಕೆ ರೋಹನ್ ಕುನ್ನುಮಾಲ್(93) ದಿಟ್ಟ ಹೋರಾಟ ನಡೆಸಿದರಾದರೂ, ಉಳಿದ ಬ್ಯಾಟರ್ಗಳಿಂದ ಸೂಕ್ತ ಸಹಕಾರ ಸಿಗಲಿಲ್ಲ. ಕೊನೆಯ ದಿನ ಆರ್ ಸಾಯಿ ಕಿಶೋರ್(7 ರನ್, 82 ಎಸೆತ) ಹಾಗೂ ಟಿ ರವಿತೇಜ ರಕ್ಷಣಾತ್ಮಕ ಪ್ರದರ್ಶನ ಆಟವಾಡುವ ಮೂಲಕ ಪಂದ್ಯವನ್ನು ಡ್ರಾ ಮಾಡುವ ಪ್ರಯತ್ನ ನಡೆಸಿದರು. ಆದರೆ ಚಿಂತನ್ ಗಾಜಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು.
ಇನ್ನು ಹೈದರಾಬಾದ್ ಮೂಲದ ಟಿ ರವಿ ತೇಜ 97 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 53 ರನ್ ಬಾರಿಸಿದರು. ಇವರಿಗೆ ಕೃಷ್ಣಪ್ಪ ಗೌತಮ್(17) ಉತ್ತಮ ಸಾಥ್ ನೀಡಿದರು. ಆದರೆ ಶಮ್ಸ್ ಮುಲಾನಿ, ರವಿತೇಜ ವಿಕೆಟ್ ವಿಕೆಟ್ ಕಬಳಿಸುವ ಮೂಲಕ ಪಶ್ಚಿಮ ವಲಯದ ಗೆಲುವನ್ನು ಸುಲಭಗೊಳಿಸಿದರು.
ಹೇಗಿತ್ತು ದುಲೀಪ್ ಟ್ರೋಫಿ ಫೈನಲ್?: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಶ್ಚಿಮ ವಲಯ, ಆರ್. ಸಾಯಿ ಕಿಶೋರ್ ಮಾರಕ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್ನಲ್ಲಿ 270 ರನ್ಗಳಿಗೆ ಸರ್ವಪತನ ಕಂಡಿತು. ಪಶ್ಚಿಮ ವಲಯ ಪರ ವಿಕೆಟ್ ಕೀಪರ್ ಹೀಟ್ ಪಟೇಲ್ 98 ರನ್ ಬಾರಿಸಿದರು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ ಆರಂಭಿಕ ಆಘಾತದ ಹೊರತಾಗಿಯೂ, ಬಾಬಾ ಇಂದ್ರಜಿತ್ ಬಾರಿಸಿದ ಆಕರ್ಷಕ ಶತಕ(118)ದ ನೆರವಿನಿಂದ 327 ರನ್ಗಳಿಗೆ ಸರ್ವಪತನ ಕಂಡಿತು. ಇದರೊಂದಿಗೆ ದಕ್ಷಿಣ ವಲಯ ಮೊದಲ ಇನಿಂಗ್ಸ್ನಲ್ಲಿ 57 ರನ್ಗಳ ಮುನ್ನಡೆ ಗಳಿಸಿತು.
Duleep Trophy Final ಸರ್ಫರಾಜ್ ಖಾನ್ ಭರ್ಜರಿ ಶತಕ, ಜಯದ ಹೊಸ್ತಿಲಲ್ಲಿ ಪಶ್ಚಿಮ ವಲಯ
ಇನ್ನು ಎರಡನೇ ಇನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಪ್ರಿಯಾಂಕ್ ಪಾಂಚಾಲ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಪ್ರಿಯಾಂಕ್ ಪಾಂಚಾಲ್(40) ಹಾಗೂ ಅಜಿಂಕ್ಯ ರಹಾನೆ(15) ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾದರು. ಯಶಸ್ವಿ ಜೈಸ್ವಾಲ್ 323 ಎಸೆತಗಳನ್ನು ಎದುರಿಸಿ 30 ಬೌಂಡರಿ, 4 ಸಿಕ್ಸರ್ ಸಹಿತ 265 ರನ್ ಬಾರಿಸಿದರು. ಇನ್ನು ಇದರ ಜತೆಗೆ ಶ್ರೇಯಸ್ ಅಯ್ಯರ್(71) ಹಾಗೂ ಸರ್ಫರಾಜ್ ಖಾನ್(127*) ಹಾಗೂ ಹೀತ್ ಪಟೇಲ್(51*) ಉಪಯುಕ್ತ ರನ್ ಕಾಣಿಕೆ ನೀಡಿದರು. ಅಂತಿಮವಾಗಿ ಪಶ್ಚಿಮ ವಲಯವು ಎರಡನೇ ಇನಿಂಗ್ಸ್ನಲ್ಲಿ 4 ವಿಕೆಟ್ ಕಳೆದುಕೊಂಡು 585 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.