Asia Cup 2022: ಭಾರತದ ಆಟಗಾರರು ವಿಮಾನದ ವಿಂಡೋಸೀಟ್ಗಾಗಿ ಫೈಟ್ ಮಾಡ್ತಿದ್ದಾರೆ!
ಸದಾಕಾಲ ಭಾರತದ ತಂಡವನ್ನು ಟೀಕೆ ಮಾಡುವ ಮೂಲಕವೇ ಪ್ರಖ್ಯಾತರಾಗಿರುವ ಶ್ರೀಲಂಕಾದ ಕ್ರಿಕೆಟ್ ಪತ್ರಕರ್ತ, ಏಷ್ಯಾಕಪ್ನಲ್ಲಿ ಶ್ರೀಲಂಕಾ ತಂಡದ ವಿರುದ್ಧ ಟೀಮ್ ಇಂಡಿಯಾ ಸೋಲು ಕಂಡಿದ್ದನ್ನು ಸರಣಿ ಟ್ವೀಟ್ ಮಾಡುವ ಮೂಲಕ ಕಿಚಾಯಿಸಿದ್ದಾರೆ. ಬಹುಶಃ, ಐಸಿಸಿ ಕಚೇರಿ ಹಾಗೂ ಭಾರತದ ಕ್ರಿಕೆಟ್ ಅಭಿಮಾನಿಗಳ ಹೊರತಾಗಿ ಮತ್ತೆಲ್ಲರೂ ಶ್ರೀಲಂಕಾ ಗೆಲುವನ್ನು ಸಂಭ್ರಮಿಸಿದ್ದಾರೆ ಎನ್ನುವ ಮೂಲಕ ಟೀಮ್ ಇಂಡಿಯಾವನ್ನು ಲೇವಡಿ ಮಾಡಿದ್ದಾರೆ.
ದುಬೈ (ಸೆ.7): ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಭಾರತದ ವಿರುದ್ಧ ಕಂಡ ಅಪರೂಪದ ಗೆಲುವು ಕ್ರಿಕೆಟ್ ವಲಯದಲ್ಲಿ ಆಘಾತಕ್ಕೆ ಕಾರಣವಾಗಿದೆ. ಹಾಲಿ ಚಾಂಪಿಯನ್ ಆಗಿ ಏಷ್ಯಾಕಪ್ನಲ್ಲಿ ಆಡಲು ಇಳಿದಿದ್ದ ಟೀಮ್ ಇಂಡಿಯಾ, ಸೂಪರ್-4 ಹಂತದಲ್ಲಿಯೇ ನಿರ್ಗಮಿಸುವ ಸಾಧ್ಯತೆ ದಟ್ಟವಾಗಿದೆ. ಏಷ್ಯಾಕಪ್ನ ಸೂಪರ್-4ನಲ್ಲಿ ಕಂಡ ಸತತ ಎರಡು ಸೋಲುಗಳು ಟೀಮ್ ಇಂಡಿಯಾದ ಫೈನಲ್ ಆಸೆಯನ್ನು ಬಹುತೇಕವಾಗಿ ಭಗ್ನ ಮಾಡಿದೆ. ಟೀಮ್ ಇಂಡಿಯಾದ ನಿರ್ವಹಣೆಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿರುವ ನಡುವೆ ಶ್ರೀಲಂಕಾದ ಕ್ರಿಕೆಟ್ ಪತ್ರಕರ್ತ ಟೀಮ್ ಇಂಡಿಯಾವನ್ನು ಲೇವಡಿ ಮಾಡಿ ಟ್ವೀಟ್ ಮಾಡಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಶ್ರೀಲಂಕಾ ತಂಡ ಭಾರತದ ವಿರುದ್ಧ ಗೆಲುವು ಸಾಧಿಸಿದ ಬೆನ್ನಲ್ಲಿಯೇ ಸರಣಿ ಟ್ವೀಟ್ ಮಾಡಿರುವ ಪತ್ರಕರ್ತ, ಪರೋಕ್ಷವಾಗಿ ಭಾರತದ ಆಟವನ್ನು ಲೇವಡಿ ಮಾಡಿದ್ದಾರೆ. ಭಾರತದ ಸೋಲಿನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಪರೀತವಾಗಿ ಚರ್ಚೆ ಆಗುತ್ತಿದೆ. ಇದರ ನಡುವೆ ಶ್ರೀಲಂಕಾದ ಕ್ರಿಕೆಟ್ ಪತ್ರಕರ್ತ ಡೇನಿಯಲ್ ಅಲೆಕ್ಸಾಂಡರ್, ರೋಹಿತ್ ಶರ್ಮ ಟೀಮ್ನ ಆಟವನ್ನು ಅಪಹಾಸ್ಯ ಮಾಡಿ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ಸಾಕಷ್ಟು ಬಾರಿ ಭಾರತ ತಂಡ ಸೋಲು ಕಂಡಾಗ ತಮ್ಮ ಕುಚೋದ್ಯದ ಟ್ವೀಟ್ ಮಾಡಿ ಡೇನಿಯಲ್ ಅಲೆಕ್ಸಾಂಡರ್ (Daniel Alexander) ಸುದ್ದಿಯಾಗಿದ್ದರು. ಈಗ ಸ್ವತಃ ಶ್ರೀಲಂಕಾ (Sri Lanka) ತಂಡವೇ ಭಾರತವನ್ನು ಏಷ್ಯಾಕಪ್ನಂಥ (Asia Cup) ಟೂರ್ನಿಯಲ್ಲಿ ಸೋಲಿಸಿರುವ ಕಾರಣ, ಇದರ ಬಗ್ಗೆ ಆರು ಟ್ವೀಟ್ಗಳನ್ನು ಮಾಡಿದ್ದೂ, ಐದೂ ಟ್ವೀಟ್ಗಳು ಭಾರತದ ಅಭಿಮಾನಿಗಳು (Indian Cricket Fans) ಕೆರಳಿಸುವಂತಿದೆ. ಅವರು ಮಾಡಿರುವ ಟ್ವೀಟ್ನ ಅರ್ಥ ಇಲ್ಲಿದೆ.
ಟ್ವೀಟ್-1: ದುಬೈನಿಂದ ಮುಂಬೈಗೆ ಬರುವ ಏರ್ಇಂಡಿಯಾ ವಿಮಾನ, ಸೋಲ್ಡ್ ಔಟ್..!
ಟ್ವೀಟ್-2: ಅಂಡರೇಟೆಡ್ ಶ್ರೀಲಂಕಾ ಓವರ್ರೇಟೆಡ್ ಭಾರತವನ್ನು 2022 ಏಷ್ಯಾಕಪ್ನಿಂದ ಹೊರಹಾಕಿದೆ
ಟ್ವೀಟ್-3: ಎರಡು ಆಕರ್ಷಕ ಚೇಸಿಂಗ್ ಮೂಲಕ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಭಾರತವನ್ನು ಮನೆಗೆ ಕಳಿಸಿದೆ
ಟ್ವೀಟ್-4: ಭಾರತ ಮತ್ತು ಐಸಿಸಿ ಕಚೇರಿಯಲ್ಲಿರುವ ಜನರನ್ನು ಹೊರತುಪಡಿಸಿ ಇಡೀ ಜಗತ್ತು ಭಾರತದ ವಿರುದ್ಧ ಶ್ರೀಲಂಕಾದ ಗೆಲುವಿನ ಸಂಭ್ರಮ ಆಚರಿಸುತ್ತಿದೆ
ಟ್ವೀಟ್-5: ಬಾಬರ್ ಹಾಗೂ ರಿಜ್ವಾನ್ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕಾಗಿ ಫೈಟ್ ಮಾಡುತ್ತಿದ್ದರೆ, ಭಾರತದ ಪ್ಲೇಯರ್ಗಳು ದುಬೈ-ಮುಂಬೈ ಏರ್ ಇಂಡಿಯಾ ವಿಮಾನದ ವಿಂಡೋಸೀಟ್ಗಾಗಿ ಫೈಟ್ ಮಾಡುತ್ತಿದ್ದಾರೆ.
ಟ್ವೀಟ್-6: ಏರ್ ಇಂಡಿಯಾ ಈ ವಾರ ದುಬೈನಿಂದ ಮುಂಬೈಗೆ ತಮ್ಮ ಎಲ್ಲಾ ವಿಮಾನಗಳಿಗೆ 'ದಿನಾಂಕ ಬದಲಾವಣೆಯ ದಂಡ'ಕ್ಕೆ ಅದ್ಭುತವಾದ 36% ರಿಯಾಯಿತಿಯನ್ನು ಘೋಷಿಸಿದೆ. (ಡಿಸ್ಕೌಂಟ್ ಕೋಡ್ - ಕೊಹ್ಲಿ)
ಇನ್ನೊಂದೆಡೆ ಸತತ ಎರಡು ಸೋಲಿನ ಬಳಿಕವೂ ಟೀಮ್ ಇಂಡಿಯಾಗೆ (Team India) ಏಷ್ಯಾಕಪ್ನ ಫೈನಲ್ಗೇರವ ಅವಕಾಶ ಇದೆ ಎಂದು ನಾಯಕ ರೋಹಿತ್ ಶರ್ಮ (Rohit Sharma) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು 2 ಸೋಲಿನಿಂದ ತಂಡದಲ್ಲಿ ಏನೂ ಬದಲಾಗಿಲ್ಲ ಎಂದು ರೋಹಿತ್ ಹೇಳಿದ್ದಾರೆ. ಆದರೆ, ಈ ಎರಡು ಸೋಲುಗಳ ಬೆನ್ನಲ್ಲಿಯೇ ಆಟಗಾರರು ತಮ್ಮಲ್ಲೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ ಎಂದರು. "ನಾವು ಐವರು ಬೌಲರ್ಗಳೊಂದಿಗೆ ಎಲ್ಲಿದ್ದೇವೆ ಎಂಬಂತಹ ಉತ್ತರಗಳನ್ನು ಒಂದು ತಂಡವಾಗಿ ಹುಡುಕಬೇಕಾಗಿದೆ ಎಂದಿದ್ದಾರೆ.
ASIA CUP 2022: ಸುಮ್ನೆ ಟೆನ್ಶನ್ ತಗೋಬೇಡಿ, ಫೈನಲ್ಗೆ ಹೋಗ್ತೇವೆ: ರೋಹಿತ್ ಶರ್ಮ
ಈ ಸಂಯೋಜನೆಯೊಂದಿಗೆ ನಾವು ಎಲ್ಲಿ ನಿಲ್ಲುತ್ತೇವೆ ಎಂಬುದು ನಮಗೆ ಈಗ ತಿಳಿದಿದೆ. ದೀರ್ಘಾವಧಿಯ ಬಗ್ಗೆ ಚಿಂತೆ ಮಾಡುತ್ತಿಲ್ಲ. ನಾವು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸೋತಿದ್ದೇವೆ. ಕಳೆದ ವಿಶ್ವಕಪ್ನಿಂದ, ನಾವು ಹಲವಾರು ಪಂದ್ಯಗಳನ್ನು ಗೆದ್ದಿದ್ದೇವೆ. ಇಂಥ ಸೋಲುಗಳು ನಮಗೆ ಪಾಠ ಕಲಿಸುತ್ತವೆ. ನಾವು ಏಷ್ಯಾಕಪ್ನಲ್ಲಿ ನಮ್ಮನ್ನು ಒತ್ತಡದ ಪರಿಸ್ಥಿತಿ ತಂದುಕೊಂಡು ಅದರಿಂದ ಎದ್ದು ಬರಲು ಬಯಸ್ದಿದ್ದೇವೆ' ಎಂದು ರೋಹಿತ್ ಸೋಲಿನ ನಂತರ ಹೇಳಿದರು.