ಅಹಮದಾಬಾದ್‌ನಲ್ಲಿ ಟೀಮ್‌ ಇಂಡಿಯಾ ವಿಶ್ವಕಪ್‌ ಫೈನಲ್‌ನಲ್ಲಿ ಸೋಲು ಕಂಡ ಬೆನ್ನಲ್ಲಿಯೇ ಕ್ರಿಕೆಟ್‌ ಅಭಿಮಾನಿಗಳು ಫೈನಲ್‌ ಪಂದ್ಯದಲ್ಲಿ ತಂಡ ಎಡವಿದ್ದೆಲ್ಲಿ ಎನ್ನುವ ವಿಚಾರದಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ನ.19): ಈಗಿನ ಜಮಾನದ ಕ್ರಿಕೆಟ್‌ ಅಭಿಮಾನಿಗಳಿಗೆ 90ರ ದಶಕದ ಕ್ರಿಕೆಟ್‌ ಅಭಿಮಾನಿಗಳು 2003ರ ವಿಶ್ವಕಪ್‌ ಫೈನಲ್‌ ಸೋಲಿನ ಬಗ್ಗೆ ಮಾತನಾಡಿದಾಗ ಆ ಬಗ್ಗೆ ಅಷ್ಟೇನೂ ಆಸಕ್ತಿ ತೋರುತ್ತಿರಲಿಲ್ಲ. ಆದರೆ, ಅಂದು ತಂಡ ಎದುರಿಸಿದ ಸೋಲು ಹೇಗಿತ್ತು ಎನ್ನುವುದು ಈಗಿನ ಜಮಾನದ ಕ್ರಿಕೆಟ್‌ ಅಭಿಮಾನಿಗಳಿಗೆ 2023ರ ಕ್ರಿಕೆಟ್‌ ವಿಶ್ವಕಪ್‌ನ ಸೋಲು ತೋರಿಸಿದೆ. ಎರಡೂ ಬಾರಿ ಆಸ್ಟ್ರೇಲಿಯಾವೇ ನಮ್ಮ ಎದುರಾಳಿ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತಂಡ 6 ವಿಕೆಟ್‌ ಸೋಲು ಕಂಡ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಸೋಲಿನ ಪೂರ್ವಾಪರದ ಬಗ್ಗೆ ಚರ್ಚೆಗಳು ಆಗುತ್ತಿದೆ. ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿ ಇರದೇ ಇದ್ದರೂ, ಬ್ಯಾಟಿಂಗ್‌ ಮಾಡಲು ಕಷ್ಟವೇನೂ ಆಗುತ್ತಿರಲಿಲ್ಲ. ಆಸೀಸ್‌ ಬೌಲರ್‌ಗಳನ್ನು ಎದುರಿಸುವ ವೇಳೆಯಲ್ಲೇ ಭಾರತದ ಬ್ಯಾಟ್ಸ್‌ಮನ್‌ಗಳು ಮೆತ್ತಗಾಗಿದ್ದರು. ಸ್ಲಾಗ್‌ ಓವರ್‌ನಲ್ಲಿ ರನ್‌ ಬಾರಿಸಬೇಕಾಗಿದ್ದ ಸೂರ್ಯಕುಮಾರ್‌ ಯಾದವ್‌ ಅವರ ಬ್ಯಾಟಿಂಗ್‌ ಬಗ್ಗೆ ಟೀಕಾಪ್ರಹಾರಗಳು ಕೇಳಿಬಂದಿವೆ. 'ಮತ್ತೊಮ್ಮೆ ಸೂರ್ಯಕುಮಾರ್‌ ಯಾದವ್‌ ಟೀಮ್‌ ಇಂಡಿಯಾ ಜರ್ಸಿ ಧರಿಸಿದರೆ, ಟೀಮ್‌ ಇಂಡಿಯಾ ಜೆರ್ಸಿಗೆ ಘನತೆಯಿಲ್ಲ' ಎಂದೊಬ್ಬರು ಟ್ವೀಟ್‌ ಮಾಡಿದ್ದಾರೆ.

'2003ರ ವಿಶ್ವಕಪ್‌ನಲ್ಲಿ ಭಾರತ ತಂಡ ಅನಿಲ್‌ ಕುಂಬ್ಳೆ ಅವರನ್ನು ಆಡಿಸದೇ ಸೋಲು ಕಂಡಿತ್ತು. 2023ರಲ್ಲಿ ಭಾರತ ತಂಡ ಅಶ್ವಿನ್‌ರನ್ನು ಆಡಿಸದೇ ಸೋಲು ಕಂಡಿದೆ. ನಾವು ಆಕ್ರಮಣಕಾರಿ ಬೌಲಿಂಗ್‌ ದಾಳಿ ಹೊಂದಿದ್ದೇವೆ ಎಂದು ಮೇಲ್ನೋಟಕ್ಕೆ ತೋರಿಸಿಕೊಂಡರೆ ಸಾಲದು. ಟ್ರಾವಿಸ್ ಹೆಡ್‌ನಂಥ ಪ್ಲೇಯರ್‌ಗೆ ಇಂದು ಆಫ್‌ ಸ್ಪಿನ್‌ ಬೌಲರ್‌ನ ಅಗತ್ಯ ಬಹಳ ಮುಖ್ಯವಾಗಿತ್ತು. ಸೂರ್ಯ ಕುಮಾರ್‌ ಯಾದವ್‌ಗಿಂತ ಅಶ್ವಿನ್‌ ಫೈನಲ್‌ ಪಂದ್ಯದಲ್ಲಿ ಸ್ಥಾನ ಪಡೆಯಬೇಕಿತ್ತು' ಎಂದು ಗೌತಮ್‌ ಕಶ್ಯಪ್‌ ಬರೆದಿದ್ದಾರೆ.

ಇದಕ್ಕೆ ಕಾಮೆಂಟ್‌ ಮಾಡಿರುವ ಹಲವು ಅಭಿಮಾನಿಗಳು, ರವೀಂದ್ರ ಜಡೇಜಾ, ಕುಲದೀಪ್‌ ಯಾದವ್‌ ಹಾಗೂ ಮೊಹಮದ್‌ ಸಿರಾಜ್‌ ಕಳೆದ ಎರಡು ಪಂದ್ಯಗಳಿಂದ ವಿಕೆಟ್‌ ಪಡೆದಿರಲಿಲ್ಲ. ಹಾಗಾಗಿ ಫೈನಲ್‌ ಪಂದ್ಯದಲ್ಲಿ ವಿಕೆಟ್‌ ಕೀಳುವ ಜವಾಬ್ದಾರಿ ಶಮಿ ಹಾಗೂ ಬುಮ್ರಾ ಮೇಲೆ ಮಾತ್ರವೇ ಇತ್ತು ಎಂದು ಅನೀಶ್‌ ಎನ್ನುವವರು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಶ್ಯಪ್‌, 'ಭಾರತೀಯರು ಭಾವೋದ್ವೇಗವನ್ನು ಆಕ್ರಮಣಕಾರಿಯಾಗಿ ತೋರಿಸುತ್ತಾರೆ. 50 ಓವರ್‌ಗಳ ಪಂದ್ಯದಲ್ಲಿ ನೀವು 7 ಬ್ಯಾಟ್ಸ್‌ಮನ್‌ಗಳನ್ನು ಆಡುತ್ತಿದ್ದೀರಿ ಎಂದಾದಲ್ಲಿ ನೀವು ಅಲ್ಟ್ರಾ ಡಿಫೆನ್ಸಿವ್‌ ಆಗಿದ್ದೀರಿ ಎಂದರ್ಥ. ಸೆಮಿಫೈನಲ್‌ ಮತ್ತು ಫೈನಲ್‌ನಲ್ಲಿ ಸೂರ್ಯಕುಮಾರ್‌ರನ್ನು ಆಡಿಸಿದ್ದು ನಿಷ್ಪ್ರಯೋಜಕವಾಗಿತ್ತು. ಸೂರ್ಯಕುಮಾರ್‌ರಂಥ ಆಟಗಾರ ಇಂಥ ಪಂದ್ಯದಲ್ಲಿ ನಿಮ್ಮ ಪ್ಲೇಯಿಂಗ್‌ ಇಲೆವೆನ್‌ ಇದ್ದಾರೆ ಎಂದರೆ ನೀವು ಸಮಸ್ಯೆಯಲ್ಲಿ ಇದ್ದೀರಿ ಎಂದರ್ಥ' ಎಂದು ಬರೆದಿದ್ದಾರೆ.

ಆಸ್ಟ್ರೇಲಿಯಾ ತಂಡ ಕೂಡ ಆರಂಭದಲ್ಲಿಯೇ ಮೂರು ವಿಕೆಟ್‌ ಕಳೆದುಕೊಂಡಿತ್ತು. ಆದರೆ, ಬೌಂಡರಿ ಬಾರಿಸಲು ಆಸೀಸ್‌ ಬ್ಯಾಟ್ಸ್‌ಮನ್‌ಗಳು 20-30 ಓವರ್‌ ಆಡಿರಲಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ. ಇನ್ನು ಕೆಎಲ್‌ ರಾಹುಲ್‌ ಅವರ ವಿಕೆಟ್‌ ಕೀಪಿಂಗ್‌, ಬೌಲಿಂಗ್‌ ವೇಳೆ ಆರಂಭದಲ್ಲಿಯೇ ಬಿಟ್ಟುಕೊಟ್ಟ ಸಾಕಷ್ಟು ರನ್‌ಗಳ ಬಗ್ಗೆಯೂ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಭಾರತದ ತನ್ನ ಬೌಲಿಂಗ್‌ನಲ್ಲಿ ಇತರೆಯಾಗಿ 18 ರನ್‌ಗಳನ್ನು ನೀಡಿದರೆ, ಅದೇ ಆಸ್ಟ್ರೇಲಿಯಾ ತಂಡ 12 ರನ್‌ ನೀಡಿತು.

ಅನುಷ್ಕಾ ಶರ್ಮ, ಆಥಿಯಾ ಶೆಟ್ಟಿ ಕುರಿತು 'ಸೆಕ್ಸಿಸ್ಟ್‌' ಟೀಕೆ ಮಾಡಿದ ಹರ್ಭಜನ್‌ ಸಿಂಗ್‌!

ಇನ್ನು ಐಪಿಎಲ್‌ನಲ್ಲಿ ಆರ್‌ಸಿಬಿ ಅಭಿಮಾನಿಗಳಾಗಿರುವ ನಮಗೆ ಇಂಥ ಸೋಲು ತಟ್ಟೋದೇ ಇಲ್ಲ. 15 ವರ್ಷಗಳಿಂದ ಆರ್‌ಸಿಬಿ ಟೀಮ್‌ ಇಂಥಾ ಸೋಲು ಎದುರಿಸೋಕೆ ನಮ್ಮನ್ನು ಬಹಳ ಉತ್ತಮವಾಗಿ ಸಿದ್ಧ ಮಾಡಿದೆ ಎಂದು ಸೋಲಿನ ನೋವಲ್ಲೂ ಆರ್‌ಸಿಬಿ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ವಿಶ್ವಕಪ್‌ನಲ್ಲಿ ಭಾರತದ ಸೋಲಿನ ಬೆನ್ನಲ್ಲೇ 'ತಂಡದಲ್ಲಿ ಮೀಸಲಾತಿ ಬೇಕು..' ಎಂದ ಚೇತನ್‌ ಅಹಿಂಸಾ!