ಆರ್ಸಿಬಿ ಕೆಕೆಆರ್ ನಡುವಿನ ಬೆಂಗಳೂರಿನ ಪಂದ್ಯದಲ್ಲಿ ಕ್ರೀಡಾಂಗಣಕ್ಕೆ ನುಗ್ಗಿ ವಿರಾಟ್ ಕೊಹ್ಲಿ ಅಪ್ಪಿಕೊಳ್ಳುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್ ಮಾಡಿದ ಅಭಿಮಾನಿ ಇದೀಗ ಯಾಕಾದ್ರೂ ವಿಡಿಯೋ ಹಾಕ್ದೆ ಎಂದು ಪರಿತಪಿಸುವಂತಾಗಿದೆ. ಮೈದಾನಕ್ಕೆ ನುಗ್ಗೋದು ಬಿಡಿ, ಚಿನ್ನಸ್ವಾಮಿ ಸುತ್ತ ಮುತ್ತ ತಿರುಗಾಡಲು ಪೊಲೀಸರು ಅವಕಾಶ ಕೊಟ್ಟಿಲ್ಲ.
ಬೆಂಗಳೂರು(ಮೇ.17) ಮಳೆ ಭೀತಿ ಇದ್ದರೂ ಚಿನ್ನಸ್ವಾಮಿ ಕ್ರೀಡಾಂಗಣ ಭರ್ತಿಯಾಗಿದೆ. ಆರ್ಸಿಬಿ ಹಾಗೂ ಕೆಕೆಆರ್ ನಡುವಿನ ರೋಚಕ ಹೋರಾಟಕ್ಕೆ ವೇದಿಕೆ ರೆಡಿಯಾಗಿದೆ. ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಕಾಣಿಸಿಕೊಳ್ಳುತ್ತಿರುವ ಮೊದಲ ಐಪಿಎಲ್ ಪಂದ್ಯ ಇದು. ಹೀಗಾಗಿ ಅಭಿಮಾನಿಗಳು ಕೂಡ ಕೊಹ್ಲಿಗೆ ಟ್ರಿಬ್ಯೂಟ್ ನೀಡಲು ಸಜ್ಜಾಗಿದ್ದಾರೆ. ಇಂದು ಕ್ರೀಡಾಂಗಣ ಸಂಪೂರ್ಣ ಕೊಹ್ಲಿಮಯ. ಇದರ ನಡುವೆ ಅಭಿಮಾನಿಯೊಬ್ಬ ಪಂದ್ಯದ ನಡುವೆ ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ನುಗ್ಗುತ್ತೇನೆ. ಕೊಹ್ಲಿಯನ್ನು ಹಗ್ ಮಾಡುತ್ತೇನೆ ಎಂದು ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಹಾಕಿದ್ದ. ಭಾರಿ ಬಿಲ್ಡಪ್ ಪಡೆದುಕೊಂಡಿದ್ದ ಈ ಅಭಿಮಾನಿ ಪರಿಸ್ಥಿತಿ ಯಾರಿಗೂ ಬೇಡ. ಕಾರಣ ಆರ್ಸಿಬಿ ಕೆಕೆಆರ್ ಪಂದ್ಯದ ಟಿಕೆಟ್ ಕೈಯಲ್ಲಿದ್ದರೂ ಇದೀಗ ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಕಾರಣ ಇಂದು ಪಂದ್ಯ ಮುಗಿಯುವವ ವರೆಗೂ ಈ ಅಭಿಮಾನಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಿದೆ.
ಸ್ಟೇಡಿಯಂ ನುಗ್ತೀನಿ ಅಂದವನಿಗೆ ಮ್ಯಾಚ್ ನೋಡೋ ಭಾಗ್ಯವೂ ಇಲ್ಲ
ಆರ್ಸಿಬಿ ಅಭಿಮಾನಿ ಶರಣ್ ಈ ಹುಚ್ಚಾಟ ಮಾಡಿದ್ದಾನೆ. ಆರ್ಸಿಬಿ -ಕೆಕೆಆರ್ ನಡುವಿನ ಪಂದ್ಯದಲ್ಲಿ ವೀಕ್ಷಕರ ಗ್ಯಾಲರಿಯಿಂದ ಹೇಗಾದರೂ ಮಾಡಿ ಮೈದಾನಕ್ಕೆ ನುಗ್ಗುತ್ತೇನೆ. ಬಳಿಕ ಕೊಹ್ಲಿಯನ್ನು ಅಪ್ಪಿಕೊಳ್ಳುತ್ತೇನೆ ಎಂದು ಶರಣ್ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾನೆ. Kabzza sharan ಅನ್ನೋ ಇನ್ಸ್ಟಾ ಅಕೌಂಟ್ನಿಂದ ಈ ವಿಡಿಯೋ ಪೋಸ್ಟ್ ಮಾಡಿದ್ದ. ಸೋಶಿಯಲ್ ಮೀಡಿಯಾದಲ್ಲಿ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರಿಗೆ ಈ ವಿಡಿಯೋ ಕಣ್ಣಿಗೆ ಬಿದ್ದಿದೆ. ವಿಡಿಯೋ, ಸೋಶಿಯಲ್ ಮೀಡಿಯಾ ಖಾತೆ ಪರಿಶೀಲಿಸಿದ ಪೊಲೀಸರು ನೇರವಾಗಿ ಯುವಕನ ಸಂಪರ್ಕಿಸಿದ್ದಾರೆ.
IPL 2025: ಬೆಂಗಳೂರಿನಲ್ಲಿ ಇವತ್ತಿನ ಆರ್ಸಿಬಿ-ಕೆಕೆಅರ್ ಮ್ಯಾಚ್ ನಡಿಯೋದೇ ಡೌಟ್!
ವಿಡಿಯೋ ಡಿಲೀಟ್ ಮಾಡಿಸಿದ ಪೊಲೀಸರು
ಯುವಕ ಹಾಕಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು. ಹಲವರು ಕೊಹ್ಲಿಯನ್ನು ಭೇಟಿ ಮಾಡುವ ಅವಕಾಶ, ಹಗ್ ಮಾಡುವ ಅವಕಾಶ ಪೆಡೆಯುತ್ತಿರುವ ನೀವೇ ಧನ್ಯರು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಪೊಲೀಸರು ಇಲ್ಲೊಬ್ಬ ನಿಯಮ ಉಲ್ಲಂಘಿಸಲು ಸಜ್ಜಾಗಿದ್ದಾನೆ ಎಂದು ಕಮೆಂಟ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇತ್ತ ಪೊಲೀಸರು ಯುವಕ ಶರಣ್ನನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕರೆಯಿಸಿದ್ದಾರೆ. ಪೊಲೀಸರ ಸೂಚನೆಯಂತೆ ವಿಡಿಯೋವನ್ನು ಅಭಿಮಾನಿ ಶರಣ್ ಡಿಲೀಟ್ ಮಾಡಿದ್ದಾನೆ.
ಪೊಲೀಸ್ ವಶದಲ್ಲಿ ಶರಣ್ಗೆ ಪಂದ್ಯ ನೋಡಲು ಸಾಧ್ಯವಿಲ್ಲ
ಕಬ್ಬನ್ ಪಾರ್ಕ್ ಪೊಲೀಸರು ಮುನ್ನಚ್ಚೆರಿಕಾ ಕ್ರಮವಾಗಿ ಅಭಿಮಾನಿ ಶರಣ್ನನ್ನು ವಶಕ್ಕೆ ಪಡೆದಿದ್ದಾರೆ. ಆರ್ಸಿಬಿ ಕೆಕೆಆರ್ ಪಂದ್ಯ ಮುಗಿಯು ವರೆಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲೇ ಇರಬೇಕಾಗಿದೆ. ಪಂದ್ಯ ನೋಡಲು ಅವಕಾಶವಿಲ್ಲ.
ತಪ್ಪಾಯ್ತು ಎಂದು ವಿಡಿಯೋ ಮಾಡಿದ ಶರಣ್
ಪೊಲೀಸರ ಕರೆಯಿಸಿ ಕಬ್ಬನ್ ಪಾರ್ಟ್ ಪೊಲೀಸ್ ಠಾಣೆಯಲ್ಲೇ ಕೂರಿಸಿದ ಕಾರಣ ಈತನ ಎಲ್ಲಾ ಪ್ಲಾನ್ ಉಲ್ಟಾ ಆಗಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ತಪ್ಪಾಯ್ತು ಎಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾನೆ. ದಯವಿಟ್ಟು ಕ್ಷಮಿಸಿ, ನಾನು ಹಾಕಿದ ಚಾಲೆಂಜ್ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಇವತ್ತು ಮ್ಯಾಚ್ ಇದೆ ಎಂದು ಪೊಲೀಸರು ಕಬ್ಬನ್ ಪಾರ್ಕ್ ಠಾಣೆಗೆ ಕರೆಯಿಸಿ ಕೂರಿಸಿದ್ದಾರೆ. ಮ್ಯಾಚ್ ಮುಗಿಯುವ ವರೆಗೂ ಬಿಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಹೀಗಾಗಿ ದಯವಿಟ್ಟು ಕ್ಷಮಿಸಿ ಎಂದು ಶರಣ್ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಬಿಲ್ಡಪ್ ತೆಗೆದುಕೊಂಡು ಫಾಲೋವರ್ಸ್ ಸಂಖ್ಯೆ ಹೆಚ್ಚಿಸಲು, ತಾನು ಜನಪ್ರಿಯವಾಗಲು ಈ ಶರಣ್ ಕೊಹ್ಲಿ ಹಗ್ ಪ್ಲಾನ್ ಮಾಡಿದ್ದಾನೆ. ಆದರೆ ಈತನ ಶೋಕಿಗೆ ಪೊಲೀಸರು ಸರಿಯಾದ ಉತ್ತರ ಕೊಟ್ಟಿದ್ದಾರೆ.


