ಮಾಧ್ಯಮದ ಜೊತೆ ಮಾತನಾಡಿದರೆ ಅಮಾನತು; ನೌಕರರಿಗೆ BCCI ಎಚ್ಚರಿಕೆ!
ಕೊರೋನಾ ವೈರಸ್ ಹಾಗೂ ಲಾಕ್ಡೌನ್ ಕಾರಣ ಐಪಿಎಲ್ ಟೂರ್ನಿ ಆಯೋಜನೆ, ಕ್ರಿಕೆಟ್ ಸರಣಿ ಪುನರ್ ಆರಂಭ ಸೇರಿದಂತೆ ಹಲವು ಮಾಹಿತಿಗಳ ಕುರಿತು ಕುತೂಹಲ ಹೆಚ್ಚಾಗಿದೆ. ಇದರ ನಡುವೆ ಬಿಸಿಸಿಐ ಉದ್ಯೋಗಿಗಳು ಮಾಧ್ಯಮಕ್ಕೆ ಕದ್ದು ಮುಚ್ಚಿ ಹೇಳಿಕೆ ನೀಡುತ್ತಿರುವುದು ಬಿಸಿಸಿಐಗ ಗಮನಕ್ಕೆ ಬಂದಿದೆ. ಇದೀಗ ಈ ರೀತಿ ಮಾಧ್ಯಮಕ್ಕೆ ಹೇಳಿಕೆ ನೀಡುವವರನ್ನು ಅಮಾನತು ಮಾಡಲು ಬಿಸಿಸಿಐ ನಿರ್ಧರಿಸಿದೆ.
ಮುಂಬೈ(ಜೂ.13): ಐಪಿಎಲ್ ಟೂರ್ನಿ ಆಯೋಜಿಸಲು ಬಿಸಿಸಿಐ ಇನ್ನಿಲ್ಲದ ಕಸರತ್ತು ನಡೆಸಿದೆ. ಪ್ರತಿ ದಿನ ಸಭೆಗಳನ್ನು ನಡೆಸಿ ಆಯೋಜನೆ ಹಾಗೂ ಸವಾಲುಗಳ ಕುರಿತು ಚರ್ಚೆ ನಡೆಸುತ್ತಿದೆ. ಇದರ ನಡುವೆ ಬಿಸಿಸಿಐ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ಮಾಧ್ಯಮಕ್ಕೆ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆ. ಕೆಲ ಉದ್ಯೋಗಿಗಳು ಮಾಧ್ಯಮದ ಜೊತೆ ಸಂದರ್ಶನ ನೀಡಿರುವುದು ಬಿಸಿಸಿಐ ಗಮನಕ್ಕೆ ಬಂದಿದೆ. ಉದ್ಯೋಗಿಗಳ ವಿರುದ್ಧ ಗರಂ ಆಗಿರುವ ಬಿಸಿಸಿಐ ಅಮಾನತು ಮಾಡುವುದಾಗಿ ಎಚ್ಚರಿಸಿದೆ.
ಈ ವರ್ಷ ಖಾಲಿ ಮೈದಾನದಲ್ಲಾದರೂ ಐಪಿಎಲ್ ನಡೆಸಿಯೇ ಸಿದ್ಧ: ಗಂಗೂಲಿ...
ಮುಂಬೈನಲ್ಲಿರುವ ಬಿಸಿಸಿಐ ಮುಖ್ಯ ಕಚೇರಿ, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಸೇರಿದಂತೆ ಬಿಸಿಸಿಐ ಕಚೇರಿಗಳಲ್ಲಿ 100ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಹಲವರು ಮಾಧ್ಯಮಕ್ಕೆ ಹೇಳಿಕೆ ನೀಡುತ್ತಿದ್ದಾರೆ. ಐಪಿಎಲ್ ಆಯೋಜನೆ, ಬಿಸಿಸಿಐ ನಿರ್ಧಾರ, ಬಿಸಿಸಿಐ ಸಭೆ ಕುರಿತು ಮಾಹಿತಿ ನೀಡುತ್ತಿದ್ದಾರೆ. ಹಲವರು ಸುದೀರ್ಘ ಸಂದರ್ಶನ ನೀಡುತ್ತಿದ್ದಾರೆ. ಇದು ಉದ್ಯೋಗಿ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಬಿಸಿಸಿಐ ಹೇಳಿದೆ.
ಟಿ20 ವಿಶ್ವಕಪ್ ನಡೆಸುವ ಬಗ್ಗೆ ಆಸೀಸ್ಗಿನ್ನೂ ವಿಶ್ವಾಸ
ಹೀಗೆ ಮಾಧ್ಯಮಕ್ಕೆ ಹೇಳಿಕೆ, ಸಂದರ್ಶನ ಹಾಗೂ ಮಾಹಿತಿ ಸೋರಿಕೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಎಚ್ಚರಿಸಿದ್ದಾರೆ. ಮಾಧ್ಯದ ಜೊತೆ ಮಾತನಾಡಲು ಬಿಸಿಸಿಐ ಅನುಮತಿ ಪಡೆಯಬೇಕು. ಯಾವ ನಿಯಮ ಉಲ್ಲಂಘನೆಯಾದರೂ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.