* ಕೋವಿಡ್‌ ಎರಡನೇ ಅಲೆಯಿಂದಾಗಿ ಭಾರತದಲ್ಲಿ ನಡೆಯಬೇಕಿದ್ದ ಎಲ್ಲಾ ಕ್ರಿಕೆಟ್‌ ಚಟುವಟಿಕೆ ತಾತ್ಕಾಲಿಕವಾಗಿ ರದ್ದಾಗಿವೆ* ದೇಶಿ ಆಟಗಾರರಿಗೆ ಹಾಗೂ ಅಂಪೈರ್‌ಗಳಿಗೆ ನೆರವು ನೀಡಲು ಸಿದ್ದತೆ ನಡೆಸುತ್ತಿದೆ ಬಿಸಿಸಿಐ* ಜೂನ್‌ ಜುಲೈ ವೇಳೆಗೆ ಬಿಸಿಸಿಐ ಆರ್ಥಿಕ ನೆರವು ನೀಡಲು ಚಿಂತನೆ.

ನವದೆಹಲಿ(ಮೇ.11): ಕೊರೋನಾ 2ನೇ ಅಲೆಯಿಂದಾಗಿ ಭಾರತದಲ್ಲಿ ಎಲ್ಲಾ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇದಕ್ಕೆ ಐಪಿಎಲ್‌ ಕೂಡ ಸೇರ್ಪಡೆಗೊಂಡಿದೆ. 

ಈಗಾಗಲೇ ಎಲ್ಲಾ ವಯೋ ವರ್ಗದ ಕ್ರಿಕೆಟ್‌ ಟೂರ್ನಿಗಳು ಮುಂದೂಡಿಕೆಗೊಂಡಿವೆ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಕ್ರಿಕೆಟಿಗರು, ಅಂಪೈರ್‌ಗಳು, ಸ್ಕೋರರ್‌ಗಳಿಗೆ ಜೂನ್‌-ಜುಲೈನಲ್ಲಿ ಪರಿಹಾರ ನೀಡುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ತಿಳಿಸಿದ್ದಾರೆ. 

‘ಅಕ್ಟೋಬರ್‌ ವೇಳೆಗೆ ದೇಶದಲ್ಲಿ ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದೆ. ಕೊರೋನಾದಿಂದ ಕ್ರೀಡಾಪಟುಗಳಿಗೆ ಬಹಳ ತೊಂದರೆಯಾಗಿದೆ. ಜೂನ್‌-ಜುಲೈನಲ್ಲಿ ಕಿರಿಯ ಕ್ರಿಕೆಟಿಗರು, ಅಂಪೈರ್‌ ಹಾಗೂ ಸ್ಕೋರರ್‌ಗಳಿಗೆ ವೇತನ ಸಿಗಲಿದೆ’ ಎಂದು ಗಂಗೂಲಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಜೂನಿಯರ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುವುದು ತುಂಬಾ ಅಪಾಯಕಾರಿಯಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿಯ ಕೋವಿಡ್‌ ಭೀತಿ ಇರುವ ವಾತಾವರಣದಲ್ಲಿ ಯುವ ಕ್ರಿಕೆಟಿಗರನ್ನು ಕಣಕ್ಕಿಳಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಐಪಿಎಲ್ ಭಾಗ 2 ಭಾರತದಲ್ಲಿ ಡೌಟ್‌: ಸೌರವ್‌ ಗಂಗೂಲಿ

ಇದೇವೇಳೆ ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಹತೋಟಿಗೆ ಬಂದರೆ ವರ್ಷಾಂತ್ಯದಲ್ಲಿ ಭಾರತದಲ್ಲೇ ಐಸಿಸಿ ಟಿ20 ವಿಶ್ವಕಪ್‌ ಆಯೋಜಿಸುವ ಆಲೋಚನೆ ಇದೆ ಎಂದು ಬಿಸಿಸಿಐ ಅಧ್ಯಕ್ಷ ಗಂಗೂಲಿ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona