ಬಾರ್ಡರ್-ಗವಾಸ್ಕರ್ ಟ್ರೋಫಿ ಸೋಲಿನ ನಂತರ ಭಾರತೀಯ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್‌ನಿಂದ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪಗಳ ನಡುವೆ ಬಿಸಿಸಿಐ ತಂಡದ ಸಹಾಯಕ ಸಿಬ್ಬಂದಿಯನ್ನು ವಜಾಗೊಳಿಸುವ ಸಾಧ್ಯತೆಯಿದೆ. 

ಮುಂಬೈ: ಕ್ರಿಕೆಟ್‌ ಡ್ರೆಸ್ಸಿಂಗ್ ರೂಮ್‌ನಲ್ಲಿನ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ಗೌತಮ್ ಗಂಭೀರ್ ಸಪೋರ್ಟ್ ಸ್ಟಾಪ್‌ ತಂಡದಿಂದ ಮೂವರನ್ನು ಬಿಸಿಸಿಐ ವಜಾ ಮಾಡುವ ಸಾಧ್ಯತೆ ದಟ್ಟವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತನಾಡಿದ ವಿಚಾರಗಳು ಸಾಕಷ್ಟು ಹೊರಗಡೆ ಸೋರಿಕೆಯಾಗಿದ್ದವು. ಈ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು 3-1 ಅಂತರದಿಂದ ಸೋಲು ಕಂಡಿತ್ತು. ಸರಣಿ ಸೋಲುಗಳು ಆಟದಲ್ಲಿ ಸಾಮಾನ್ಯ ಆದರೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಕ್ರಿಕೆಟಿಗರು ಹಾಗೂ ಕೋಚ್ ಮಾತನಾಡಿದ ವಿಚಾರಗಳು ಹೊರಗಡೆ ಸೋರಿಕೆಯಾಗಿ ವರದಿಯಾಗುತ್ತಿತ್ತು ಇದು ಅಚ್ಚರಿಗೆ ಕಾರಣವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗ ಕಠಿಣ ಕ್ರಮಕ್ಕೆ ಬಿಸಿಸಿಐ ಮುಂದಾಗಿದೆ. 

Add Asianetnews Kannada as a Preferred SourcegooglePreferred

 ಬಾರ್ಡರ್ ಗವಾಸ್ಕರ್ ಟ್ರೋಫಿಯ ಸೋಲಿನ ನಂತರ ತಂಡದಲ್ಲಿ ಮಧ್ಯಂತರ ನಾಯಕನಾಗಲು ಬಯಸುವ ನಿರ್ದಿಷ್ಟ ಆಟಗಾರನಿದ್ದಾರೆ ಎಂಬ ಸುದ್ದಿಯೊಂದು ಹಬ್ಬಿತ್ತು. ಹೀಗೆ ಸೋರಿಕೆಯಾದ ಸುದ್ದಿಗೆ ಕ್ರಿಕೆಟಿಗ ಸರ್ಫ್‌ರಾಜ್ ಕಾರಣ ಎಂದು ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಆರೋಪಿಸಿದ್ದಾರೆ ಎಂದು ಕೂಡ ವರದಿಯಾಗಿತ್ತು. ಇದೆಲ್ಲವೂ ಭಾರತ ಕ್ರಿಕೆಟ್ ತಂಡವನ್ನು ಆತಂಕಕ್ಕೆ ಸೃಷ್ಟಿಸಿತ್ತು. 

ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂ ಸೀಕ್ರೇಟ್ ಲೀಕ್ ಮಾಡಿದ್ದೇ ಮುಂಬೈನ ಈ ಕ್ರಿಕೆಟರ್: ಗಂಭೀರ್ ಆರೋಪ!

ಹೀಗಾಗಿ ಈಗ ಮೂಲಗಳ ಪ್ರಕಾರ, ಬಿಸಿಸಿಐ ಈ ಡ್ರೆಸ್ಸಿಂಗ್ ರೂಮ್ ಸೋರಿಕೆ ವಿಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದೆ ಎಂದು ವರದಿಯಾಗಿದೆ. ಕಠಿಣ ಕ್ರಮಕ್ಕೆ ಮುಂದಾಗಿರುವ ಬಿಸಿಸಿಐ, ಕೋಚ್‌ ಆಗಿ ಕೇವಲ 8 ತಿಂಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿರುವ ಸಹಾಯಕ ಕೋಚ್‌ ಅಭಿಷೇಕ್ ನಾಯರ್ ಅರನ್ನು ವಜಾ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಧೃಢೀಕರಣ ಬಿಸಿಬಿಸಿಐ ಕಡೆಯಿಂದ ಬಂದಿಲ್ಲ. ಒಂದು ವೇಳೆ ಬಿಸಿಸಿಐ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿದರೆ ಈ ವಿಚಾರ ಖಚಿತವಾಗಲಿದೆ. 

ಹಿಂದಿ ಮಾಧ್ಯಮ 'ದೈನಿಕ್ ಜಾಗರಣ್' ವರದಿಯ ಪ್ರಕಾರ, ಬಿಸಿಸಿಐ ಇತ್ತೀಚೆಗೆ ತಂಡದೊಂದಿಗೆ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವ ಯಾವುದೇ ಸಹಾಯಕ ಸಿಬ್ಬಂದಿಯನ್ನು ಸೇವೆಯಿಂದ ತೆಗೆದು ಹಾಕಬಹುದು ಎಂದು ನೋಟಿಸ್ ಕಳುಹಿಸಿದೆ. ಇದು ನಿಜವೇ ಆಗಿದ್ದರೆ, ಮೂಲಗಳ ಪ್ರಕಾರ, ಮೂರು ವರ್ಷಗಳಿಗೂ ಹೆಚ್ಚು ಕಾಲ ಭಾರತ ಕ್ರಿಕೆಟ್ ತಂಡದೊಂದಿಗೆ ಸೇವೆ ಸಲ್ಲಿಸುತ್ತಿರುವ ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಮತ್ತು ತರಬೇತುದಾರ ಸೋಹಮ್ ದೇಸಾಯಿ ಅವರನ್ನು ಸಹ ಸೇವೆಯಿಂದ ತೆಗೆದು ಹಾಕಬಹುದು ಎಂದು ಮೂಲಗಳಿಂದ ತಿಳಿದು ಬಂದಿದೆ. 

ನಾನು ಟೆಸ್ಟ್‌ನಿಂದ ನಿವೃತ್ತಿಯಾಗಲ್ಲ; ಗಾಳಿ ಸುದ್ದಿಗೆ ತೆರೆ ಎಳೆದ ರೋಹಿತ್ ಶರ್ಮಾ!

ಒಂದು ವೇಳೆ ಅಭಿಷೇಕ್ ನಾಯರ್ ಮತ್ತು ದಿಲೀಪ್ ಅವರು ವಜಾ ಆದರೆ ಅವರ ಸ್ಥಾನದಲ್ಲಿ ಯಾವುದೇ ಹೊಸ ನೇಮಕಾತಿಗಳನ್ನು ಮಾಡಲಾಗುವುದಿಲ್ಲ ಎಂದು ವರದಿ ತಿಳಿಸಿದೆ. ದೇಶೀಯ ಕ್ರಿಕೆಟ್ ದಿಗ್ಗಜ ಸೀತಾಂಶು ಕೊಟಕ್ ಈಗಾಗಲೇ ತಂಡದೊಂದಿಗೆ ಸಂಬಂಧ ಹೊಂದಿದ್ದರೆ, ದಿಲೀಪ್ ನಿರ್ವಹಿಸಿದ ಪಾತ್ರವನ್ನು ರಯಾನ್ ಟೆನ್ ಡೋಸ್ಚೇಟ್ ನೋಡಿಕೊಳ್ಳಲಿದ್ದಾರೆ. ಸೋಹಮ್ ದೇಸಾಯಿ ಅವರ ಪಾತ್ರವನ್ನು ಆಡ್ರಿಯನ್ ಲೆ ರೌಕ್ಸ್ ವಹಿಸಿಕೊಳ್ಳಲಿದ್ದಾರೆ. ಆಡ್ರಿಯನ್ ಲೆ ರೌಕ್ಸ್ ಅವರು ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಜೊತೆ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಅವರು 2008 ರಿಂದ 2019 ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್‌ ಜೊತೆ ಕೆಲಸ ಮಾಡಿದ್ದರು. ಅಲ್ಲದೇ 2002 ರಿಂದ 2003 ರವರೆಗೆ, ಅವರು ಭಾರತೀಯ ತಂಡದೊಂದಿಗೆ ಸಹ ಕೆಲಸ ಮಾಡಿದರು. ಆದರೆ ಈಗ ನಡೆಯುತ್ತಿರುವ ಐಪಿಎಲ್ ಮುಗಿದ ನಂತರ ಆಡ್ರಿಯನ್ ಭಾರತೀಯ ತಂಡವನ್ನು ಸೇರಲಿದ್ದಾರೆ.

ಇದಕ್ಕೂ ಮೊದಲು, ಡ್ರೆಸ್ಸಿಂಗ್ ಕೋಣೆಯಲ್ಲಿ ನಡೆಯುವ ಚರ್ಚೆಗಳು ಸಾರ್ವಜನಿಕವಾಗಿ ಹೊರಬರಬಾರದು ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದರು. ಕೇವಲ ಅವರ ಉತ್ತಮ ಪ್ರದರ್ಶನ ಮಾತ್ರ ಅವರನ್ನು ಸದಾ ಫಾರ್ಮ್‌ನಲ್ಲಿ ಉಳಿಯುವಂತೆ ಮಾಡುವುದರಿಂದ ತನ್ನ ತಂಡದ ಆಟಗಾರರ ಜೊತೆ ಪ್ರಮಾಣಿಕವಾದ ಮಾತುಕತೆ ನಡೆಸುತ್ತೇನೆ. ಕೋಚ್ ಮತ್ತು ಆಟಗಾರನ ನಡುವಿನ ಚರ್ಚೆಗಳು ಡ್ರೆಸ್ಸಿಂಗ್ ಕೋಣೆಯಲ್ಲಿಯೇ ಇರಬೇಕು ಎಂದು ಗಂಭೀರ್ ಹೇಳಿದ್ದರು. ಆದರೆ ಡ್ರೆಸ್ಸಿಂಗ್ ಕೋಣೆಯಲ್ಲಿನ ಸೋರಿಕೆಯ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ ಅವರು ಆ ವರದಿಗಳು ಸತ್ಯವಲ್ಲ ಎಂದು ಹೇಳುವ ಮೂಲಕ ತೇಪೆ ಹಚ್ಚುವ ಯತ್ನ ಮಾಡಿದ್ದರು. ಪ್ರಾಮಾಣಿಕ ವ್ಯಕ್ತಿಗಳು ಡ್ರೆಸ್ಸಿಂಗ್ ರೂಮ್‌ನಲ್ಲಿ ಇರುವವರೆಗೆ ಭಾರತೀಯ ಕ್ರಿಕೆಟ್ ತಂಡ ಸುರಕ್ಷಿತ ಕೈಗಳಲ್ಲಿ ಇರುತ್ತದೆ. ನಿಮ್ಮ ಪ್ರದರ್ಶನ ಮಾತ್ರವೇ ನಿಮ್ಮನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿ ಇರುವಂತೆ ಮಾಡುತ್ತದೆ. ಪ್ರಮಾಣಿಕತೆ ಹಾಗೂ ಪ್ರಮಾಣಿಕತೆ ಎಂಬ ಪದ ತುಂಬಾ ಮಹತ್ವದ್ದು ಎಂದು ಗೌತಮ್ ಗಂಭೀರ್ ಹೇಳಿದ್ದರು.