* ಐಪಿಎಲ್ 2022 ಟೂರ್ನಿಯ ಆಯೋಜನೆಗೆ ಸಿದ್ದತೆ ಆರಂಭಿಸಿದ ಬಿಸಿಸಿಐ* ಲೀಗ್ ಹಂತಗಳ ಪಂದ್ಯಗಳ ಆಯೋಜನೆಯ ಬಗ್ಗೆ ಗುಟ್ಟು ಬಿಟ್ಟುಕೊಟ್ಟ ಸೌರವ್ ಗಂಗೂಲಿ* ಮಾರ್ಚ್ ಕೊನೆಯ ವಾರದಿಂದ ಐಪಿಎಲ್ 2022 ಟೂರ್ನಿ ಆರಂಭವಾಗುವ ಸಾಧ್ಯತೆ
ನವದೆಹಲಿ(ಫೆ.04): ಪ್ರಸಕ್ತ ಸಾಲಿನ ಐಪಿಎಲ್ (IPL 2022) ಟೂರ್ನಿ ಭಾರತದಲ್ಲೇ ಆಯೋಜನೆಗೊಳ್ಳಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಗುರುವಾರ ಖಚಿತ ಪಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಕೋವಿಡ್ ಪ್ರಕರಣಗಳು (COVID 19) ಏರಿಕೆ ಕಂಡು ಪರಿಸ್ಥಿತಿ ಗಂಭೀರವಾಗದಿದ್ದರೆ ಐಪಿಎಲ್ ಭಾರತದಲ್ಲೇ ನಡೆಸಲು ಉದ್ದೇಶಿಸಲಾಗಿದೆ. ಲೀಗ್ ಹಂತದ ಪಂದ್ಯಗಳನ್ನು ಮುಂಬೈ (Mumbai) ಮತ್ತು ಪುಣೆಯಲ್ಲಿ (Pune) ನಡೆಸಲು ಯೋಜನೆ ರೂಪಿಸಲಾಗಿದೆ. ನಾಕೌಟ್ ಹಂತದ ಪಂದ್ಯಗಳ ಸ್ಥಳಗಳ ಕುರಿತು ಮುಂದೆ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ. ಆದರೆ ಐಪಿಎಲ್ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ. ಮಾರ್ಚ್ ಕೊನೆಯ ವಾರದಿಂದ 15ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ
2021ನೇ ಸಾಲಿನ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳು ಭಾರತದಲ್ಲಿಯೇ ನಡೆದಿದ್ದವು. ಆದರೆ ಟೂರ್ನಿಯ ಮಧ್ಯ ಭಾಗದಲ್ಲಿ ಬಯೋ ಬಬಲ್ನೊಳಗೆ ಕೋವಿಡ್ 19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಐಪಿಎಲ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರ ಮಾಡಲಾಗಿತ್ತು. ಐಪಿಎಲ್ನ ಭಾಗ-2 ಪಂದ್ಯಗಳು ಯುಎಇನ ಅಬುದಾಬಿ, ದುಬೈ ಹಾಗೂ ಶಾರ್ಜಾ ಮೈದಾನಗಳಲ್ಲಿ ಅಚ್ಚುಕಟ್ಟಾಗಿ ನಡೆದಿದ್ದವು.
ಇನ್ನು 2022ನೇ ಸಾಲಿನ ಐಪಿಎಲ್ ಟೂರ್ನಿಗೂ ಮುನ್ನ ಇದೇ ಫೆಬ್ರವರಿ 12 ಹಾಗೂ 13ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು (IPL Mega Auction) ನಡೆಯಲಿದೆ. ಈ ಬಾರಿ ಒಟ್ಟು 10 ಫ್ರಾಂಚೈಸಿಗಳು ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿವೆ. ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ಸಾವಿರಕ್ಕೂ ಅಧಿಕ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಆದರೆ ಇದರಲ್ಲಿ ಬಿಸಿಸಿಐ ಒಟ್ಟು 590 ಆಟಗಾರರ ಹೆಸರನ್ನು ಅಂತಿಮಗೊಳಿಸಿದೆ. ಈ 590 ಆಟಗಾರರಲ್ಲಿ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರ ಹರಾಜಿನಲ್ಲಿ ಖರೀದಿಸಲಿವೆ.
IPL Broadcasting Rights: 45,000 ಕೋಟಿ ರುಪಾಯಿ ಬಂಪರ್ ನಿರೀಕ್ಷೆಯಲ್ಲಿ ಬಿಸಿಸಿಐ..!
ಪ್ಲೇ-ಆಫ್ ವೇಳೆ ಮಹಿಳೆಯರ 20 ಚಾಲೆಂಜ್:
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಪ್ಲೇ-ಆಫ್ ವೇಳೆ ಮಹಿಳೆಯರ ಟಿ20 ಚಾಲೆಂಜ್ ಆಯೋಜಿಸಲಾಗಿದೆ. ಮಹಿಳಾ ಐಪಿಎಲ್ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಆದರೆ ಈ ಬಾರಿ ಮಹಿಳಾ ಟಿ20 ಆಯೋಜಿಸುತ್ತೇವೆ’ ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ. ಮಹಿಳಾ ಟಿ20 ಚಾಲೆಂಜ್ ಟೂರ್ನಿ 2018ರಲ್ಲಿ ಆರಂಭಗೊಂಡಿತ್ತು. ಆದರೆ ಕಳೆದ ಬಾರಿ ಟೂರ್ನಿ ನಡೆದಿರಲಿಲ್ಲ.
ಹಗಲು-ರಾತ್ರಿ ಟೆಸ್ಟ್ಗೆ ಬೆಂಗ್ಳೂರು ಆತಿಥ್ಯ: ದಾದಾ
ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಹಗಲು-ರಾತ್ರಿ ಟೆಸ್ಟ್ಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಖಚಿತ ಪಡಿಸಿದ್ದಾರೆ.
ವೆಸ್ಟ್ಇಂಡೀಸ್ ವಿರುದ್ಧದ ಸರಣಿ ಫೆ.20ರಂದು ಕೋಲ್ಕತಾದಲ್ಲಿ ಅಂತ್ಯಗೊಳ್ಳಲಿದ್ದು, ಬಳಿಕ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ಆತಿಥ್ಯ ವಹಿಸಲಿದೆ. ಫೆಬ್ರವರಿ ತಿಂಗಳ ಅಂತ್ಯದಿಂದ ಸರಣಿಗೆ ಚಾಲನೆ ದೊರೆಯಲಿದೆ. ‘ಪಿಂಕ್ ಬಾಲ್(ಹಗಲು-ರಾತ್ರಿ) ಟೆಸ್ಟ್ ಬೆಂಗಳೂರಿನಲ್ಲೇ ನಡೆಯಲಿದೆ. ಶ್ರೀಲಂಕಾ ವಿರುದ್ಧ ಸರಣಿಗೆ ಇನ್ನೂ ಸ್ಥಳಗಳ ಆಯ್ಕೆ ಮಾಡಿಲ್ಲ, ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಗಂಗೂಲಿ ತಿಳಿಸಿದ್ದಾರೆ.
ಟೀಂ ಇಂಡಿಯಾದ ನಾಯಕತ್ವದ ವಿಚಾರವನ್ನು ಆಯ್ಕೆ ಸಮಿತಿಗೆ ಬಿಡಲಾಗುವುದು. ಅವರ ಕೈಗೊಳ್ಳುವ ನಿರ್ಧಾರಕ್ಕೆ ನಾವು ಆದ್ಯತೆ ನೀಡಲಿದ್ದೇವೆ ಎಂದು ಗಂಗೂಲಿ ತಿಳಿಸಿದ್ದಾರೆ.
