ಟಿ20 ವಿಶ್ವಕಪ್ ಗೆದ್ದು ತವರಿಗೆ ಆಗಮಿಸಿರುವ ಟೀಂ ಇಂಡಿಯಾ, ಇಂದು ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರ ನಿವಾಸದಲ್ಲಿ ಔತಣ ಕೂಟದಲ್ಲಿ ಭಾಗವಹಿಸಿತ್ತು. ಈ ವೇಳೆ ಬಿಸಿಸಿಐ, ಮೋದಿಗೆ ನಮೋ 1 ಜೆರ್ಸಿ ನೀಡಿದೆ. ಪ್ರಧಾನಿಗೆ ನಂ.1 ಜೆರ್ಸಿಯನ್ನೇ ನೀಡಿದ್ದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
ನವದೆಹಲಿ: ಕಳೆದೊಂದು ದಶಕದಿಂದಲೂ ಐಸಿಸಿ ಟ್ರೋಫಿ ಬರ ಎದುರಿಸುತ್ತಾ ಬಂದಿದ್ದ ಟೀಂ ಇಂಡಿಯಾ, ಕೊನೆಗೂ ವೆಸ್ಟ್ ಇಂಡೀಸ್ನಲ್ಲಿ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು 7 ರನ್ ರೋಚಕ ಜಯ ಸಾಧಿಸಿ, ಚುಟುಕು ವಿಶ್ವಕಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದೇ ವೇಳೆ ಬಿಸಿಸಿಐ, ಪ್ರಧಾನಿ ನರೇಂದ್ರ ಮೋದಿಗೆ ನಂ.1 ಸಂಖ್ಯೆಯ ಜೆರ್ಸಿಯನ್ನು ಗಿಫ್ಟ್ ನೀಡಿ ಗಮನ ಸೆಳೆದಿದೆ.
ಹೌದು, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹಾಗೂ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಪ್ರಧಾನಿ ಮೋದಿಗೆ 'ನಮೋ 1" ಸಂಖ್ಯೆಯ ಜೆರ್ಸಿಯನ್ನು ಗಿಫ್ಟ್ ಆಗಿ ನೀಡಿದೆ. ಈ ಜೆರ್ಸಿಯು, ಪ್ರಧಾನಿ ಮೋದಿಯವರಿಗೆ ಕ್ರಿಕೆಟ್ ಸಮುದಾಯದ ಮೇಲಿರುವ ಪ್ರೀತಿ ಹಾಗೂ ಗೌರವಾಧರಗಳನ್ನು ಗಮನದಲ್ಲಿಟ್ಟುಕೊಂಡು ನಂ.1 ಸಂಖ್ಯೆಯ ಜೆರ್ಸಿಯನ್ನು ಮೋದಿಯವರಿಗೆ ಗಿಫ್ಟ್ ನೀಡಿದೆ.
ಪ್ರಧಾನಿ ಮೋದಿ ಮೀಟ್ ಮಾಡಿದ ಟೀಂ ಇಂಡಿಯಾ, ಮುಂಬೈಗೆ ಮುಂದಿನ ಪಯಣ!
ಈ ಕುರಿತಂತೆ ಟ್ವೀಟ್ ಮಾಡಿರುವ ಬಿಸಿಸಿಐ, "ಜಯಶಾಲಿ ಭಾರತ ಕ್ರಿಕೆಟ್ ತಂಡವು ಇಂದು ಮಾನ್ಯ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿತು. ನೀವು ನಮಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ ಹುರಿದುಂಬಿಸಿದ್ದಕ್ಕೆ ಹಾಗೂ ಅಪಾರವಾದ ಬೆಂಬಲ ನೀಡಿದಕ್ಕೆ ಹೃದಯಪೂರ್ವಕ ಧನ್ಯವಾದಗಳು ಎಂದು ಟ್ವೀಟ್ ಮಾಡಿದೆ.
ಇಂದು ಮುಂಜಾನೆ 6 ಗಂಟೆಗೆ ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಟೀಂ ಇಂಡಿಯಾಗೆ ಅಭಿಮಾನಿಗಳಿಂದ ಭವ್ಯ ಸ್ವಾಗತ ದೊರೆಯಿತು. ಇದಾದ ಬಳಿಕ ಖಾಸಗಿ ಹೋಟೆಲ್ಗೆ ತೆರಳಿದ್ದ ಟೀಂ ಇಂಡಿಯಾ ಆಟಗಾರರು, ಆ ಬಳಿಕ, ಪ್ರಧಾನಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಅವರ ನಿವಾಸಕ್ಕೆ ಭೇಟಿ ನೀಡಿ ಔತಣಕೂಟದಲ್ಲಿ ಭಾಗವಹಿಸಿದರು. ಇಲ್ಲಿನ ಲೋಕ್ ಕಲ್ಯಾಣ್ ಮಾರ್ಗ್ನಲ್ಲಿರುವ ಪ್ರಧಾನಿ ಮೋದಿ ನಿವಾಸಕ್ಕೆ ವಿಶೇಷವಾಗಿ ಸಿದ್ದಪಡಿಸಿದ 'ಚಾಂಪಿಯನ್ಸ್' ಜೆರ್ಸಿ ತೊಟ್ಟ ಟೀಂ ಇಂಡಿಯಾ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳು, ಇಂದು ಬೆಳಗ್ಗೆ 11 ಗಂಟೆಗೆ ಭೇಟಿ ನೀಡಿದರು.
ಹಾರ್ದಿಕ್ ಪಾಂಡ್ಯ ಟಿ20ಯಲ್ಲಿ ವಿಶ್ವ ನಂ.1 ಆಲ್ರೌಂಡರ್..! ಈ ಸಾಧನೆ ಮಾಡಿದ ಮೊದಲ ಭಾರತೀಯ
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ತಮ್ಮ ನಿವಾಸದಲ್ಲಿ ಟೀಂ ಇಂಡಿಯಾ ಆಟಗಾರರನ್ನು ಆತ್ಮೀಯವಾಗಿ ಆಹ್ವಾನಿಸಿದರು. ಇದಷ್ಟೇ ಅಲ್ಲದೇ ಟಿ20 ವಿಶ್ವಕಪ್ ಟೂರ್ನಿಯ ಕುರಿತಾಗಿ ಆಟಗಾರರ ಅನುಭವಗಳನ್ನು ಪ್ರೀತಿಯಿಂದ ಆಲಿಸಿದರು. ಇನ್ನು ಟೀಂ ಇಂಡಿಯಾಗೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ರೋಹಿತ್ ಶರ್ಮಾ ಹಾಗೂ ತಂಡದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಪ್ರಧಾನಿ ನರೇಂದ್ರ ಮೋದಿಯವರ ಜತೆ ಟ್ರೋಫಿ ಹಿಡಿದು ಫೋಟೋಗೆ ಫೋಸ್ ಕೊಟ್ಟರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಟ್ರೋಫಿಯನ್ನು ಹಿಡಿದುಕೊಳ್ಳದೇ, ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ ರೋಹಿತ್ ಶರ್ಮಾ ಹಾಗೂ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಕೈಗಳನ್ನು ಹಿಡಿದು ಫೋಸ್ ಕೊಡುವ ಮೂಲಕ ಟ್ರೋಫಿ ಗೆಲ್ಲಿಸಿಕೊಟ್ಟವರಿಗೆ ಕ್ರೆಡಿಟ್ ನೀಡುವ ಮೂಲಕ ಪ್ರಧಾನಿ ಮೋದಿ ಗಮನ ಸೆಳೆದಿದ್ದಾರೆ. ಈ ಕ್ಷಣದ ಫೋಟೋಗಳೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೀಗಿದೆ ನೋಡಿ ಆ ಫೋಟೋ:
ಇನ್ನು ಪ್ರಧಾನಿ ನರೇಂದ್ರ ಮೋದಿಯ ಈ ನಡೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಟ್ರೋಫಿ ಹಿಡಿದುಕೊಂಡಿದ್ದರೇ, ಪ್ರಧಾನಿ ಮೋದಿ ಅವರ ಕೈಗಳನ್ನು ಹಿಡಿದುಕೊಂಡಿದ್ದಾರೆ. ಎಂತಹ ನಾಯಕ ಎಂದು ನೆಟ್ಟಿಗರೊಬ್ಬರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿ ಔತಣಕೂಟದಲ್ಲಿ ಭಾಗವಹಿಸಿದ ಬಳಿಕ ಟೀಂ ಇಂಡಿಯಾ ಆಟಗಾರರು, ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು ಸಂಜೆ 5 ಗಂಟೆಯಿಂದ ತೆರೆದ ವಾಹನದಲ್ಲಿ ನಾರಿಮನ್ ಪಾಯಿಂಟ್ನಿಂದ ಸುಮಾರು 2 ಕಿ. ಮೀ. ದೂರ ಇರುವ ವಾಂಖೇಡೆ ಕ್ರೀಡಾಂಗಣದವರೆಗೆ ಆಟಗಾರರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಿದ್ದಾರೆ.
2 ಗಂಟೆ ಗಳ ಕಾಲ ಮೆರವಣಿಗೆ ನಡೆಯುವ ನಿರೀಕ್ಷೆಯಿದ್ದು, ಬಳಿಕ 7 ಗಂಟೆಗೆ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಿಸಿಸಿಐ ಘೋಷಿಸಿರುವ 125 ಕೋಟಿ ರು. ನಗದು ಬಹುಮಾನವನ್ನೂ ಇದೇ ವೇಳೆ ಹಸ್ತಾಂತರಿಸಲಾಗುತ್ತದೆ.
