ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಬಳಿಕ ಕ್ರಿಕೆಟ್ ಟೂರ್ನಿ ಆರಂಭವಾಗುವ ನಿರೀಕ್ಷೆ ಇತ್ತು. ಆದರೆ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಿಸಿಸಿಐ ಇದೀಗ ಜಿಂಬಾಬ್ವೆ ಪ್ರವಾಸ ರದ್ದು ಮಾಡಿದೆ.  

ಮುಂಬೈ(ಜೂ.12): ಕೊರೋನಾ ವೈರಸ್ ಕಾರಣ ಕ್ರಿಕೆಟ್ ನಿಂತು ಹೋಗಿದೆ. ಭಾರತದಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಕ್ರಿಕೆಟ್ ಪುನರ್ ಆರಂಭವಾಗುವ ನಿರೀಕ್ಷೆ ಇತ್ತು. ಆದರೆ ಇದು ಹುಸಿಯಾಗಿದೆ. ಆಗಸ್ಟ್ ತಿಂಗಳಲ್ಲಿ ಆಯೋಜಿಸಿದ್ದ ಭಾರತ ಹಾಗೂ ಜಿಂಬಾಬ್ವೆ ನಡುವಿನ ನಿಗದಿತ ಓವರ್ ಸರಣಿ ರದ್ದು ಮಾಡಲಾಗಿದೆ. ಈ ಮೂಲಕ ಬಿಸಿಸಿ ಮಹತ್ವದ ನಿರ್ಧಾರ ಪ್ರಕಟಿಸಿದೆ.

Add Asianetnews Kannada as a Preferred SourcegooglePreferred

ಈ ವರ್ಷ ಖಾಲಿ ಮೈದಾನದಲ್ಲಾದರೂ ಐಪಿಎಲ್ ನಡೆಸಿಯೇ ಸಿದ್ಧ: ಗಂಗೂಲಿ

ಜೂನ್-ಜುಲೈ ತಿಂಗಳಲ್ಲಿ ಆಯೋಜಿಸಿದ್ದ ಭಾರತ-ಶ್ರೀಲಂಕಾ ಸರಣಿಯನ್ನು ಮುಂದೂಡಲಾಗಿದ ಎಂದು ಲಂಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿತ್ತು. ಇದೀಗ ಬಿಸಿಸಿಐ ಜಿಂಬಾಬ್ವೆ ಪ್ರವಾಸವನ್ನೇ ಮುಂದೂಡಿದೆ. ಐಪಿಎಲ್ ಟೂರ್ನಿ ಸೇರಿದಂತೆ ಪ್ರಮುಖ ಸರಣಿಗಳತ್ತ ಗಮನ ಹರಿಸಿರುವ ಬಿಸಿಸಿಐ ಜಿಂಬಾಬ್ವೆ ಸರಣಿಯನ್ನು ಮುಂದೂಡುವ ಬದಲು ರದ್ದು ಮಾಡಿದೆ.

ಜಿಂಬಾಬ್ವೆ ವಿರುದ್ಧ 3 ಏಕದಿನ ಹಾಗೂ 3 ಟಿ20 ಸರಣಿ ಆಯೋಜಿಸಲಾಗಿತ್ತು. ವೇಳಾಪಟ್ಟಿ ಪ್ರಕಾರ ಜೂನ್ 24 ರಂದು ಟೀಂ ಇಂಡಿಯಾ, ಜಿಂಬಾಬ್ವೆಗೆ ಪ್ರಯಾಣ ಬೆಳೆಸಬೇಕಿತ್ತು. ಆದರೆ ಕೊರೋನಾ ವೈರಸ್ ಕಾರಣ ಟೂರ್ನಿ ರದ್ದು ಮಾಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಹೇಳಿದ್ದಾರೆ. 

ಭಾರತದಲ್ಲಿ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಬಿಸಿಸಿಐ, ಆಟಗಾರರ ತರಬೇತಿ ಶಿಬಿರನ್ನು ರದ್ದುಗೊಳಿಸಿದೆ. ಕೊರೋನಾ ನಿಯಂತ್ರಣಕ್ಕೆ ಬಂದ ಬಳಿಕವೇ ಕ್ರಿಕೆಟ್ ಪುನರ್ ಆರಂಭದ ಕುರಿತು ಚಿಂತಿಸಲಾಗುವುದು ಎಂದು ಜೈ ಶಾ ಹೇಳಿದ್ದಾರೆ.