ಆರಂಭಿಕ ಆಟಗಾರ ಶುಭ್‌ಮನ್‌ ಗಿಲ್‌ ಆಕರ್ಷಕ ಶತಕ ಹಾಗೂ ಕೆಳ ಕ್ರಮಾಂಕದಲ್ಲಿ ಅಕ್ಷರ್‌ ಪಟೇಲ್‌ ಹಾಗೂ ಶಾರ್ದೂಲ್‌ ಠಾಕೂರ್‌ ಅವರ ಸಾಹಸಿಕ ಬ್ಯಾಟಿಂಗ್‌ನ ಹೊರತಾಗಿಯೂ ಟೀಮ್‌ ಇಂಡಿಯಾ ಏಷ್ಯಾಕಪ್‌ನ ಸೂಪರ್‌ 4 ಹಂತದ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಲು ಕಂಡಿದೆ.

ಕೊಲಂಬೊ (ಸೆ.15): ಭಾನುವಾರ ಶ್ರೀಲಂಕಾ ವಿರುದ್ಧದ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೂ ಮುನ್ನ ಅಭ್ಯಾಸ ಪಂದ್ಯದಂತಿದ್ದ ಸೂಪರ್‌ 4 ಹಂತ ತನ್ನ ಅಂತಿಮ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ 6 ರನ್‌ಗಳ ಸೋಲು ಕಂಡಿದೆ. ಆರಂಭಿಕ ಆಟಗಾರ ಶುಭ್‌ಮನ್‌ ಗಿಲ್‌ 133 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ 122 ರನ್‌ ಪೇರಿಸಿ ತಂಡದ ಹೋರಾಟದಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು. ಒಂದು ಹಂತದಲ್ಲಿ 170 ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದ ಹಂತದಲ್ಲಿ ಕೆಳ ಕ್ರಮಾಂಕದಲ್ಲಿಅಕ್ಷರ್‌ ಪಟೇಲ್‌ ಹಾಗೂ ಶಾರ್ದೂಲ್‌ ಠಾಕೂರ್‌ ಭರ್ಜರಿಯಾಗಿ ಆಟವಾಡುವ ಮೂಲಕ ತಂಡದ ಗೆಲುವಿನ ಅಂಚಿಗೆ ತಂದಿದ್ದರು. ಆದರೆ, ಗೆಲುವಿಗೆ 9 ಎಸೆತಗಳಲ್ಲಿ 12 ರನ್‌ ಬೇಕಿದ್ದ ಹಂತದಲ್ಲಿ ಅಕ್ಷರ್‌ ಪಟೇಲ್‌ ಹಾಗೂ ಶಾರ್ದೂಲ್‌ ಠಾಕೂರ್‌ ಇಬ್ಬರೂ ಔಟಾಗಿದ್ದರಿಂದ ಭಾರತ ತಂಡ ಸೋಲಿನತ್ತ ಸಾಗಿತು. ಇದರೊಂದಿಗೆ ಭಾರತ ತಂಡ ಅಜೇಯವಾಗಿ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ಗೇರುವ ಭಾರತದ ಆಸೆ ಭಗ್ನಗೊಂಡಿದೆ. ಸೋಲಿನ ನಡುವೆಯೂ ಭಾನುವಾರ ಇದೇ ಮೈದಾನದಲ್ಲಿ ಭಾರತ ತಂಡ ಶ್ರೀಲಂಕಾ ವಿರುದ್ಧ ಫೈನಲ್‌ ಪಂದ್ಯದಲ್ಲಿ ಕಾದಾಟ ನಡೆಸಲಿದೆ.

Add Asianetnews Kannada as a Preferred SourcegooglePreferred

ಶುಕ್ರವಾರ ಆರ್‌.ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದಿದ್ದ ಭಾರತ ತಂಡ ಮೊದಲು ಬೌಲಿಂಗ್‌ ಮಾಡುವ ನಿರ್ಧಾರ ಮಾಡಿತ್ತು. ನಾಯಕ ಶಕೀಬ್‌ ಅಲ್‌ ಹಸನ್‌ ಅವರ ಆಕರ್ಷಕ 80 ರನ್‌ ಹಾಗೂ ತೌಹಿದ್‌ ಹೃದಯ್‌ ಬಾರಿಸಿದ 54 ರನ್‌ಗಳ ನೆರವಿನಿಂದ 8 ವಿಕೆಟ್‌ಗೆ 265 ರನ್‌ ಪೇರಿಸಿತ್ತು. ಪ್ರತಿಯಾಗಿ ಭಾರತ ತಂಡ 49.5 ಓವರ್‌ಗಳಲ್ಲಿ259 ರನನ್‌ಗೆ ಆಲೌಟ್‌ ಆಯಿತು.