ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನ ನಂತರ, ಆರ್. ಅಶ್ವಿನ್ ಅವರು ಸಿಎಸ್‌ಕೆ ಮ್ಯಾನೇಜ್ಮೆಂಟ್‌ನ ತಂತ್ರಗಾರಿಕೆಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಯುವ ಆಟಗಾರ ಆಯುಷ್ ಮ್ಹಾತ್ರೆಯವರ ಗಾಯವನ್ನು ನಿರ್ವಹಿಸಿದ ರೀತಿ ಮತ್ತು ಬ್ಯಾಟಿಂಗ್ ಕ್ರಮಾಂಕದಲ್ಲಿನ ತಪ್ಪುಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚೆನ್ನೈ: ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 10 ರನ್‌ಗಳಿಂದ ಸೋತ ಬೆನ್ನಲ್ಲೇ, ತಂಡದ ಮಾಜಿ ಆಟಗಾರ ಆರ್. ಅಶ್ವಿನ್ ಅವರು ಸಿಎಸ್‌ಕೆ ಮ್ಯಾನೇಜ್ಮೆಂಟ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಂಡದ ತಂತ್ರಗಾರಿಕೆಯಲ್ಲಿನ ತಪ್ಪುಗಳು ಮತ್ತು ಗಾಯಗೊಂಡ ಯುವ ಆಟಗಾರರನ್ನು ನಿಭಾಯಿಸಿದ ರೀತಿಯ ಬಗ್ಗೆ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಸಿಎಸ್‌ಕೆ ಮೇಲೆ ಅಶ್ವಿನ್ ಅಸಮಾಧಾನ

ಬ್ಯಾಟಿಂಗ್ ಕ್ರಮಾಂಕದಲ್ಲಿ ಮ್ಯಾಥ್ಯೂ ಶಾರ್ಟ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರನ್ನು ಕಣಕ್ಕಿಳಿಸಿದ ರೀತಿಯನ್ನು ಅಶ್ವಿನ್ ಪ್ರಶ್ನಿಸಿದ್ದಾರೆ. "ಏನೂ ಅರ್ಥಮಾಡಿಕೊಳ್ಳದೆ ಈ ಆಟಗಾರರನ್ನು ಆಡಲು ಕಳುಹಿಸುತ್ತಾರಾ? ನನಗೆ ಇದು ಅರ್ಥವಾಗುತ್ತಿಲ್ಲ. ಬೇರೆ ಗ್ರೌಂಡ್‌ಗಳಲ್ಲಿ ಏನಾಗುತ್ತಿದೆ ಎಂದು ನೀವು ನೋಡುವುದಿಲ್ಲವೇ? ಡೆವಾಲ್ಡ್ ಬ್ರೆವಿಸ್ ಅವರಂತಹ ಆಟಗಾರನನ್ನು ಫಿನಿಶರ್ ಆಗಿ ಕಳುಹಿಸುತ್ತೀರಾ? ಅದಕ್ಕೂ ಮುನ್ನ ಮ್ಯಾಥ್ಯೂ ಶಾರ್ಟ್ ಅವರನ್ನು ಕಳುಹಿಸುತ್ತೀರಿ. ಆಯುಷ್ ಮ್ಹಾತ್ರೆಯವರು ನೀಡಿದ ಆ ಭರ್ಜರಿ ಆರಂಭವನ್ನು ತಂಡ ಉಳಿಸಿಕೊಳ್ಳಲು ವಿಫಲವಾಯಿತು. ಇದು ನನಗೆ ನಿಜಕ್ಕೂ ಶಾಕ್ ನೀಡಿದೆ, ಇದಕ್ಕೆ ನನ್ನ ಬಳಿ ಉತ್ತರವಿಲ್ಲ" ಎಂದು ಅಶ್ವಿನ್ ನೇರವಾಗಿ ಹೇಳಿದ್ದಾರೆ.

ತಂಡದ ತಂತ್ರಗಾರಿಕೆಯ ತಪ್ಪುಗಳ ಜೊತೆಗೆ, ಯುವ ಆಟಗಾರ ಆಯುಷ್ ಮ್ಹಾತ್ರೆಗೆ ಗಾಯವಾದಾಗ ತಂಡದ ಫಿಸಿಯೋಗಳ ವರ್ತನೆಯನ್ನೂ ಅಶ್ವಿನ್ ಪ್ರಶ್ನಿಸಿದ್ದಾರೆ. ಗಾಯದಿಂದ ಕುಂಟುತ್ತಿದ್ದರೂ ಮ್ಹಾತ್ರೆಯವರನ್ನು ಮತ್ತೆ ಓಡಿಸಿದ್ದು ದೊಡ್ಡ ತಪ್ಪು ಎಂದು ಅಶ್ವಿನ್ ಅಸಮಾಧಾನ ಹೊರಹಾಕಿದ್ದಾರೆ. "ಆಯುಷ್ ಮ್ಹಾತ್ರೆಯವರಿಂದ ನಡೆಯಲು ಕೂಡ ಆಗದೆ ಕುಂಟುತ್ತಿದ್ದರು. ಫಿಸಿಯೋ ಮೈದಾನಕ್ಕೆ ಬಂದು ಪರೀಕ್ಷಿಸಿದರು. ಆದರೂ ಅವರನ್ನು ಮತ್ತೆ ಯಾಕೆ ಆಡಲು ಬಿಟ್ಟರು? ಅವರು 'ರಿಟೈರ್ಡ್ ಔಟ್' ಆಗಿ ಹೋಗಬಹುದಿತ್ತಲ್ಲವೇ? ಕುಂಟುತ್ತಿದ್ದ ಆಟಗಾರನಿಂದ ಮತ್ತೆ ರನ್‌ಗಳಿಗಾಗಿ ಓಡಿಸಿದರು. ಇದು ಬಹಳ ದೊಡ್ಡ ತಪ್ಪು" ಎಂದು ಅಶ್ವಿನ್ ಹೇಳಿದ್ದಾರೆ.

ಪ್ರತಿ ವರ್ಷ ಚೆನ್ನೈ ತಂಡದಲ್ಲಿ ಮಾತ್ರ ಇಷ್ಟೊಂದು ಆಟಗಾರರಿಗೆ ಗಾಯಗಳಾಗುವುದೇಕೆ ಎಂದೂ ಅಶ್ವಿನ್ ಪ್ರಶ್ನಿಸಿದ್ದಾರೆ. "ನಾನು ಐದು ವರ್ಷ ಇಂಜೆಕ್ಷನ್ ತೆಗೆದುಕೊಂಡು ಆಡಿದ್ದೇನೆ. ಗಾಯಗಳನ್ನು ಸರಿಯಾಗಿ ನಿರ್ವಹಿಸಬೇಕು. ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಪ್ರತಿ ವಾರ ಮೆಡಿಕಲ್ ರಿಪೋರ್ಟ್ ನೀಡುತ್ತಾರೆ. ಒಬ್ಬ ಯುವ ಆಟಗಾರನನ್ನು ಇಷ್ಟು ಅಜಾಗರೂಕತೆಯಿಂದ ನಿಭಾಯಿಸಿದ್ದು ನೋಡಿ ನನಗೆ ಆಘಾತವಾಯಿತು" ಎಂದು ಅಶ್ವಿನ್ ಹೇಳಿದ್ದಾರೆ.

ಚೆನ್ನೈ ತಂಡವನ್ನು ಇನ್ನಿಲ್ಲದಂತೆ ಕಾಡುತ್ತಿದೆ ಗಾಯದ ಸಮಸ್ಯೆ

ಈ ಸೀಸನ್‌ನಲ್ಲಿ ಚೆನ್ನೈ ತಂಡದ ಗಾಯಾಳುಗಳ ಪಟ್ಟಿ ದೊಡ್ಡದಾಗುತ್ತಿದೆ. ಎಂ.ಎಸ್. ಧೋನಿ, ಖಲೀಲ್ ಅಹಮದ್, ಮತ್ತು ನೇಥನ್ ಎಲ್ಲಿಸ್ ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಮ್ಹಾತ್ರೆಯವರಿಗೂ ಗಾಯವಾಗಿದೆ. ಸತತ ಎರಡು ಗೆಲುವುಗಳ ನಂತರ ಹೈದರಾಬಾದ್ ವಿರುದ್ಧ ಸೋತ ಚೆನ್ನೈ, ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.