ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯದ ವೇಳೆ, ಅಭಿಮಾನಿಯೊಬ್ಬ ನಿಂಬೆಹಣ್ಣು ಹಿಡಿದು ಮಂತ್ರ ಪಠಿಸಿದಂತೆ ಕಾಣಿಸಿಕೊಂಡಿದ್ದಾನೆ. ಇದರ ಬೆನ್ನಲ್ಲೇ ಶಿವಂ ದುಬೆ ವಿಕೆಟ್ ಕಳೆದುಕೊಂಡಿದ್ದು, ಈ ಘಟನೆಯು ವಾಮಾಚಾರದ ಚರ್ಚೆಗೆ ಕಾರಣವಾಗಿದೆ ಮತ್ತು ಈ ಕುರಿತು ಸಿಎಸ್ಕೆ ಫ್ರಾಂಚೈಸಿ ಬಿಸಿಸಿಐಗೆ ದೂರು ನೀಡಿದೆ.
ಹೈದರಾಬಾದ್: ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತಾ? ಇದನ್ನು ನಾವು ನೀವೆಲ್ಲಾ ಕೇಳಿಯೇ ಬೆಳೆದಿದ್ದೇವೆ. ಆದರೆ ಒಮ್ಮೊಮ್ಮೆ ಕಾಕತಾಳೀಯವೋ, ವಿಚಿತ್ರವೋ ಗೊತ್ತಿಲ್ಲ ಕಣ್ಣ ಮುಂದೆಯೇ ಕೆಲವೊಂದು ಅನಿರೀಕ್ಷಿತ ಪವಾಡಗಳೇ ನಡೆದು ಬಿಡುತ್ತವೆ. ಇದೀಗ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸನ್ರೈಸರ್ಸ್ ಹೈದರಾಬಾದ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮ್ಯಾಚ್ನಲ್ಲಿ ಸ್ಟೇಡಿಯಂನಲ್ಲೇ ವಾಮಾಚಾರ ನಡೆಯಿತಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಚೆನ್ನೈ ಹಾಗೂ ಹೈದರಾಬಾದ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ಆರೆಂಜ್ ಆರ್ಮಿ 10 ರನ್ ಅಂತರದ ರೋಚಕ ಜಯ ಸಾಧಿಸಿತು. ಪಂದ್ಯ ರೋಚಕ ಘಟ್ಟದಲ್ಲಿದ್ದಾಗ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಸನ್ರೈಸರ್ಸ್ ಹೈದರಾಬಾದ್ ಅಭಿಮಾನಿಯೊಬ್ಬ ನಿಂಬೆಹಣ್ಣು ಹಿಡಿದುಕೊಂಡು ಏನೋ ಮಂತ್ರ ಹೇಳಿದಂತೆ ಕಾಣಿಸಿಕೊಳ್ಳುತ್ತಾನೆ. ಇದರ ಬೆನ್ನಲ್ಲೇ ಚೆನ್ನೈ ತಂಡದ ಅಪಾಯಕಾರಿ ಬ್ಯಾಟರ್ ಶಿವಂ ದುಬೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರುತ್ತಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೀಗಿದೆ ನೋಡಿ ಆ ವೈರಲ್ ವಿಡಿಯೋ:
ಬಿಸಿಸಿಐ ಬಳಿ ದೂರು ದಾಖಲಿಸಿದ ಸಿಎಸ್ಕೆ ಫ್ರಾಂಚೈಸಿ:
ಇನ್ನು ಈ ಬ್ಲಾಕ್ ಮ್ಯಾಜಿಕ್ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬಿಸಿಸಿಐ ಬಳಿ ಸ್ಟೇಡಿಯಂನಲ್ಲಿ ಆದ ಈ ರೀತಿಯ ಘಟನೆಯ ಬಗ್ಗೆ ಅಧಿಕೃತವಾಗಿ ದೂರು ದಾಖಲಿಸಿದೆ. ವ್ಯಕ್ತಿಯೋರ್ವ ನಿಂಬೆ ಹಣ್ಣು ಹಿಡಿದುಕೊಂಡು ವಾಮಾಚಾರ ನಡೆಸಿದ ಬೆನ್ನಲ್ಲೇ ನಮ್ಮ ಆಟಗಾರರ ಪ್ರದರ್ಶನ ದಿಢೀರ್ ಕುಸಿತ ಕಂಡಿತು. ಕ್ರಿಕೆಟ್ ಅನಿಶ್ಚಿತತೆಯ ಆಟ ಎನ್ನುವುದು ನಮಗೆಲ್ಲರಿಗೂ ಗೊತ್ತಿದೆ. ಕ್ರಿಕೆಟ್ ಒಂದು ಕೌಶಲ್ಯ, ತಂತ್ರಗಾರಿಕೆ ಹಾಗೂ ಕ್ರೀಡಾಸ್ಪೂರ್ತಿಯ ಪ್ರದರ್ಶನಕ್ಕೆ ವೇದಿಕೆಯಾಗಬೇಕೇ ಹೊರತು, ಈ ರೀತಿಯ ವಾಮಾಚಾರಕ್ಕೆ ಅವಕಾಶ ಮಾಡಿಕೊಡಬಾರದು. ಬಿಸಿಸಿಐ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಬಿಸಿಸಿಐ ಬಳಿ ಆಗ್ರಹಿಸಿದೆ.
ಸನ್ರೈಸರ್ಸ್ ಚಾಲೆಂಜ್ ಗೆಲ್ಲದೆ ಶರಣಾದ ಸಿಎಸ್ಕೆ
ಹೈದರಾಬಾದ್: 5 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಐಪಿಎಲ್ನಲ್ಲಿ 4ನೇ ಸೋಲು ಕಂಡಿದೆ. ಶನಿವಾರ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸಿಎಸ್ಕೆ 10 ರನ್ಗಳಿಂದ ಪರಾಭವಗೊಂಡಿತು. 6 ಪಂದ್ಯಗಳಲ್ಲಿ 3ನೇ ಗೆಲುವು ಸಾಧಿಸಿದ ಸನ್ರೈಸರ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿತು.
ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಸ್ಫೋಟಕ ಆರಂಭದ ಹೊರತಾಗಿಯೂ 200ರ ಗಡಿ ದಾಟಲಿಲ್ಲ. ಪವರ್-ಪ್ಲೇನಲ್ಲಿ 75, ಬಳಿಕ 10ನೇ ಓವರ್ ಮುಕ್ತಾಯಕ್ಕೆ 112 ರನ್ ಗಳಿಸಿದ್ದ ತಂಡ ಸತತ ವಿಕೆಟ್ ನಷ್ಟಕ್ಕೊಳಗಾಯಿತು. ಹೀಗಾಗಿ ತಂಡ 9 ವಿಕೆಟ್ಗೆ 194 ರನ್ ಸೇರಿಸಿತು. 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ, 22 ಎಸೆತಕ್ಕೆ 59 ರನ್ ಸಿಡಿಸಿ ಔಟಾದರು. ಹೆನ್ರಿಚ್ ಕ್ಲಾಸೆನ್ 39 ಎಸೆತಕ್ಕೆ 59 ರನ್ ಕೊಡುಗೆ ನೀಡಿದರು. ಅನ್ಶುಲ್, ಓವರ್ಟನ್ ತಲಾ 3 ವಿಕೆಟ್ ಪಡೆದರು.
ಬ್ಯಾಟಿಂಗ್ ವೈಫಲ್ಯ:
ಕಳೆದೆರಡು ಪಂದ್ಯಗಳಲ್ಲಿ ಮಿಂಚಿನ ಆಟವಾಡಿದ್ದ ಸಿಎಸ್ಕೆ ಈ ಬಾರಿ ಮತ್ತೆ ವಿಫಲವಾಯಿತು. ಆರಂಭದಲ್ಲಿ ಆಯುಶ್ ಮ್ಹಾತ್ರೆ ಅಬ್ಬರದ ಹೊರತಾಗಿಯೂ ತಂಡಕ್ಕೆ ಗೆಲ್ಲಲಾಗಲಿಲ್ಲ. ಸಂಜು ಸ್ಯಾಮ್ಸನ್(7), ನಾಯಕ ಋತುರಾಜ್ ಗಾಯಕ್ವಾಡ್(19) ಮತ್ತೆ ವಿಫಲರಾದರು. ಆಯುಶ್ 13 ಎಸೆತಕ್ಕೆ 30 ರನ್ ಚಚ್ಚಿದರೆ, ಮ್ಯಾಥ್ಯೂ ಶಾರ್ಟ್ 34, ಸರ್ಫರಾಜ್ 25 ರನ್ ಕೊಡುಗೆ ನೀಡಿದರು. ಆದರೆ ತಂಡ 184 ವಿಕೆಟ್ಗೆ 08 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಸ್ಕೋರ್: ಸನ್ರೈಸರ್ಸ್ 194/9 (ಅಭಿಷೇಕ್ 59, ಕ್ಲಾಸೆನ್ 59, ಅನ್ಶುಲ್ 3-22, ಓವರ್ಟನ್ 3-37), ಸಿಎಸ್ಕೆ 184/8 (ಶಾರ್ಟ್ 34, ಆಯುಶ್ 30, ಎಶಾನ್ ಮಾಲಿಂಗ 3-29)


