ಐಪಿಎಲ್ 2025ಕ್ಕೆ ಮುನ್ನ ಟ್ರೋಫಿ ಗೆದ್ದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಫಿಲ್ ಸಾಲ್ಟ್ ಅವರನ್ನು ಕೈಬಿಟ್ಟ ಕೆಕೆಆರ್ ನಿರ್ಧಾರವನ್ನು ಅನಿಲ್ ಕುಂಬ್ಳೆ ತೀವ್ರವಾಗಿ ಟೀಕಿಸಿದ್ದಾರೆ. ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಕೆಕೆಆರ್ ಸ್ಥಿರತೆ ತೋರುತ್ತಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ: ಐಪಿಎಲ್ 2025ರ ಸೀಸನ್ಗೂ ಮುನ್ನ, ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ ನಾಯಕ ಶ್ರೇಯಸ್ ಅಯ್ಯರ್ ಮತ್ತು ಓಪನರ್ ಫಿಲ್ ಸಾಲ್ಟ್ ಅವರನ್ನು ಕೈಬಿಟ್ಟ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಿರ್ಧಾರವನ್ನು ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ತೀವ್ರವಾಗಿ ಟೀಕಿಸಿದ್ದಾರೆ. ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳುವಲ್ಲಿ ಫ್ರಾಂಚೈಸಿ ತೋರುತ್ತಿರುವ ಅಸ್ಥಿರತೆ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಎಂದು ಕುಂಬ್ಳೆ ಸ್ಟಾರ್ ಸ್ಪೋರ್ಟ್ಸ್ ಚರ್ಚೆಯೊಂದರಲ್ಲಿ ಹೇಳಿದ್ದಾರೆ.
'2024ರಲ್ಲಿ ಕೆಕೆಆರ್ ಮೂರನೇ ಬಾರಿ ಟ್ರೋಫಿ ಗೆದ್ದಾಗ, ಶ್ರೇಯಸ್ ಅಯ್ಯರ್ ಮತ್ತು ಫಿಲ್ ಸಾಲ್ಟ್ ಆ ಗೆಲುವಿನ ಪ್ರಮುಖ ಶಕ್ತಿಗಳಾಗಿದ್ದರು. ಆದರೆ ತಂಡ ಅವರಿಬ್ಬರನ್ನೂ ಕೈಬಿಟ್ಟಿತು. ಆಟಗಾರರನ್ನು ಉಳಿಸಿಕೊಳ್ಳುವ ವಿಚಾರದಲ್ಲಿ ಕೆಕೆಆರ್ಗೆ ಸ್ಥಿರತೆಯೇ ಇಲ್ಲ. ಐಪಿಎಲ್ ಗೆದ್ದ ನಾಯಕನನ್ನೇ ಬಿಟ್ಟುಕೊಟ್ಟು ಅವರು ದೊಡ್ಡ ನಷ್ಟ ಅನುಭವಿಸಿದ್ದಾರೆ' ಎಂದು ಕುಂಬ್ಳೆ ಹೇಳಿದ್ದಾರೆ. ಸದ್ಯದ ನಾಯಕ ಅಜಿಂಕ್ಯ ರಹಾನೆ ಅವರ ಅನುಭವವನ್ನು ಗೌರವಿಸುತ್ತೇನೆ, ಆದರೆ ಟ್ರೋಫಿ ಗೆದ್ದ ನಾಯಕನ ಕೊರತೆ ತಂಡದಲ್ಲಿ ಕಾಣಿಸುತ್ತಿದೆ ಎಂದೂ ಅವರು ಸೇರಿಸಿದ್ದಾರೆ. ರಹಾನೆಗೆ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ನಾಯಕತ್ವದ ಅನುಭವವಿದ್ದರೂ, ಐಪಿಎಲ್ ಟ್ರೋಫಿ ಗೆದ್ದುಕೊಡಲು ಸಾಧ್ಯವಾಗಿಲ್ಲ ಎಂಬುದನ್ನು ಕುಂಬ್ಳೆ ಹೇಳಿದ್ದಾರೆ.
ಪ್ರಮುಖ ಆಟಗಾರರನ್ನು ಉಳಿಸಿಕೊಂಡರಷ್ಟೇ ಕಪ್ ಗೆಲ್ಲಲು ಸಾಧ್ಯ
'ಒಂದು ಫ್ರಾಂಚೈಸಿಯಿಂದ ಇನ್ನೊಂದು ತಂಡಕ್ಕೆ ಹೋಗಿ ಅಲ್ಲಿಯೂ ಯಶಸ್ಸು ಸಾಧಿಸುವುದು ಸುಲಭವಲ್ಲ. ಅಲ್ಲಿನ ಮ್ಯಾನೇಜ್ಮೆಂಟ್, ವಾತಾವರಣ ಮತ್ತು ಒತ್ತಡ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ಆದರೆ ಶ್ರೇಯಸ್ ಅಯ್ಯರ್ ಅದನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ' ಎಂದು ಅನಿಲ್ ಕುಂಬ್ಳೆ ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖ ಆಟಗಾರರನ್ನು ಉಳಿಸಿಕೊಂಡರೆ ಮಾತ್ರ ಕೆಕೆಆರ್ ಮುಂದೆಯೂ ಟ್ರೋಫಿ ಗೆಲ್ಲುವ ಸ್ಪರ್ಧೆಯಲ್ಲಿ ಉಳಿಯಲು ಸಾಧ್ಯ ಎಂದು ಅವರು ಎಚ್ಚರಿಸಿದ್ದಾರೆ.
ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ತೊರೆದ ನಂತರ ಪಂಜಾಬ್ ಕಿಂಗ್ಸ್ ಸೇರಿದ ಶ್ರೇಯಸ್ ಅಯ್ಯರ್, ಮೊದಲ ಸೀಸನ್ನಲ್ಲೇ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದರು. ಸುಮಾರು ಒಂದು ದಶಕದ ನಂತರ ಪಂಜಾಬ್ ಐಪಿಎಲ್ ಫೈನಲ್ ತಲುಪಿತ್ತು. ಶ್ರೇಯಸ್ ಅವರ ಈ ಸಾಧನೆಯನ್ನು ಕುಂಬ್ಳೆ ಬಹಳವಾಗಿ ಹೊಗಳಿದ್ದಾರೆ. ನಾಯಕನಾಗಿ ಐಪಿಎಲ್ ಇತಿಹಾಸದಲ್ಲಿ ಮೂರು ವಿಭಿನ್ನ ತಂಡಗಳನ್ನು ಫೈನಲ್ಗೆ ಮುನ್ನಡೆಸಿದ ಅಪರೂಪದ ದಾಖಲೆ ಶ್ರೇಯಸ್ ಹೆಸರಿನಲ್ಲಿದೆ. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರನ್ನರ್-ಅಪ್ ಮಾಡಿದ್ದರು. 2024ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ಗೆ ಟ್ರೋಫಿ ಗೆದ್ದುಕೊಟ್ಟರು. 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ಗೆ ತಲುಪಿಸಿದ್ದಾರೆ.
ಪಾಕ್ ಟಿ20 ಬಿಟ್ಟು ಐಪಿಎಲ್ ಸೇರಿದ ವೇಗಿ ಮುಜರ್ಬಾನಿ
ಕೋಲ್ಕತಾ: ಜಿಂಬಾಬ್ವೆಯ 6 ಅಡಿ 8 ಇಂಚು ಎತ್ತರದ ವೇಗಿ ಬ್ಲೆಸಿಂಗ್ ಮುಜರ್ಬಾನಿ ಐಪಿಎಲ್ನ ಕೋಲ್ಕತಾ ನೈಟ್ರೈಡರ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್)ಗೆ ಆಯ್ಕೆಯಾಗಿದ್ದ ಮುಜರ್ಬಾನಿ, ಐಪಿಎಲ್ ತಂಡದಿಂದ ಆಫರ್ ಬರುತ್ತಿದ್ದಂತೆ ಪಿಎಸ್ಎಲ್ ತೊರೆದು ಭಾರತಕ್ಕೆ ಬರಲು ಒಪ್ಪಿದ್ದಾರೆ. ಬಾಂಗ್ಲಾ ವೇಗಿ ಮುಸ್ತಾಫಿಜುರ್ ರಹಮಾನ್ರನ್ನು ಹೊರಹಾಕಿದ ಬಳಿಕ ತಂಡಕ್ಕೆ ವಿದೇಶಿ ವೇಗಿಯ ಅವಶ್ಯಕತೆ ಇತ್ತು. ಇತ್ತೀಚೆಗೆ ಭಾರತದಲ್ಲೇ ನಡೆದ ಟಿ20 ವಿಶ್ವಕಪ್ನಲ್ಲಿ 13 ವಿಕೆಟ್ ಕಬಳಿಸಿದ ಮುಜರ್ಬಾನಿಯನ್ನು ಕೆಕೆಆರ್ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಮುಜರ್ಬಾನಿ 137 ಟಿ20 ಪಂದ್ಯಗಳಿಂದ 155 ವಿಕೆಟ್ ಕಬಳಿಸಿದ್ದಾರೆ.


