Asianet Suvarna News Asianet Suvarna News

ICC U-19 World Cup : ಹಾಲಿ ಚಾಂಪಿಯನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಹಂತಕ್ಕೇರಿದ ಭಾರತ

* ಐಸಿಸಿ ಅಂಡರ್ 19 ಏಕದಿನ ವಿಶ್ವಕಪ್ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ 5 ವಿಕೆಟ್ ಗೆಲುವು
* ಹಾಲಿ ಚಾಂಪಿಯನ್‌ ಬಾಂಗ್ಲಾಗೆ ಸೋಲುಣಿಸಿದ ಭಾರತ ತಂಡ
* ಕಳೆದ ಆವೃತ್ತಿಯ ವಿಶ್ವಕಪ್‌ ಫೈನಲ್‌ನಲ್ಲಿ ಎದುರಾಗಿದ್ದ ಸೋಲಿಗೆ ಸೇಡು ತೀರಿಸಿಕೊಂಡ ಯುವ ಭಾರತ

Angkrish Rasheeed Shines India defeats defending champion Bangladesh to ICC U 19 World Cup Semi Final san
Author
Bengaluru, First Published Jan 30, 2022, 12:37 AM IST

ಆಂಟಿಗಾ (ಜ.29): ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಸಾಂಘಿಕ ನಿರ್ವಹಣೆ ತೋರಿದ ಭಾರತ ತಂಡ (India U19 ) ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ನ (ICC U-19 World Cup) ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಶನಿವಾರ ಹಾಲಿ ಚಾಂಪಿಯನ್ ಬಾಂಗ್ಲಾದೇಶ (Bangladesh U19) ತಂಡವನ್ನು 5 ವಿಕೆಟ್ ಗಳಿಂದ ಮಣಿಸಿದೆ. ಆ ಮೂಲಕ ಯಶ್ ಧುಲ್ (Yash Dhull) ಸಾರಥ್ಯದ ಭಾರತ ತಂಡ ಸೆಮಿಫೈನಲ್ ಹಂತಕ್ಕೇರಿದ್ದು, ಫೆಬ್ರವರಿ 2 ರಂದು ಇದೇ ಮೈದಾನದಲ್ಲಿ ನಡಯಲಿರುವ ಉಪಾಂತ್ಯ ಕದನದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಯಶ್ ಧುಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ರವಿ ಕುಮಾರ್ ಹಾಗೂ ವಿಕ್ಕಿ ಓತ್ಸ್ವಾಲ್ ನೇತೃತ್ವದಲ್ಲಿ ಭರ್ಜರಿ ದಾಳಿ ನಡೆಸಿದ ಭಾರತ ತಂಡ ಬಾಂಗ್ಲಾದೇಶ ತಂಡವನ್ನು 37.1 ಓವರ್ ಗಳಲ್ಲಿ 111 ರನ್ ಗಳಿಗೆ ಆಲೌಟ್ ಮಾಡಿತು. ಪ್ರತಿಯಾಗಿ ಭಾರತ ತಂಡ ಆಂಗ್ಕ್ರಿಶ್ ರಘುವಂಶಿ (Angkrish Raghuvanshi) ಹಾಗೂ ಶೇಖ್ ರಶೀದ್ (Shaik Rasheed) ಅವರ ಜವಾಬ್ದಾರಿಯುತ ಆಟದ ನೆರವಿನಿಂದ 30.5 ಓವರ್ ಗಳಲ್ಲಿ 5 ವಿಕೆಟ್ ಗೆ 117 ರನ್ ಪೇರಿಸಿ ಗೆಲುವು ಕಂಡಿತು.

ಈ ಗೆಲುವಿನೊಂದಿಗೆ ಭಾರತ ತಂಡ ಕಳೆದ ಆವೃತ್ತಿಯ ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧವೇ ಎದುರಾದ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಯಶ
ಕಂಡಿತು. ಮೊತ್ತ ಬೆನ್ನಟ್ಟಿದ್ದ ಭಾರತ ತಂಡ ರನ್ ಖಾತೆ ತೆರೆಯುವ ಮುನ್ನವೇ ಹರ್ನೂರ್ ಸಿಂಗ್ ವಿಕಟ್ ಕಳೆದುಕೊಂಡಿತಾದರೂ, 2ನೇ ವಿಕೆಟ್ ಗೆ ಆಂಗ್ಕ್ರಿಶ್ ರಘುವಂಶಿ (44 ರನ್, 65 ಎಸತ, 7 ಬೌಂಡರಿ) ಹಾಗೂ ಶೇಖ್ ರಶೀದ್ (26 ರನ್, 59 ಎಸೆತ, 3 ಬೌಂಡರಿ) ಆಕರ್ಷಕ 70 ರನ್ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಗೆಲುವಿನ ವಿಶ್ವಾಸ ಮೂಡಿಸಿದ್ದರು.
 


ಆದರೆ, ಕೇವಲ 5 ರನ್ ಅಂತರದಲ್ಲಿ ಇವರಿಬ್ಬರೂ ಪೆವಿಲಿಯನ್ ಸೇರಿಕೊಂಡಾಗ ಭಾರತ ಆತಂಕ ಎದುರಿಸಿತಾದರೂ, ನಾಯಕ ಯಶ್ ಧುಲ್ (20*) ಆಕರ್ಷಕ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ರಿಪ್ಪನ್ ಮೊಂಡಲ್, ತಮ್ಮ ಬೌಲಿಂಗ್ ದಾಳಿಯಲ್ಲಿ ಸಿದ್ಧಾರ್ಥ್ ಯಾದವ್ ಅವರನ್ನು 6 ರನ್ ಗೆ ಹಾಗೂ ರಾಜ್ ಬಾಜ್ವಾ ಅವರನ್ನು ಶೂನ್ಯಕ್ಕೆ ಔಟ್ ಮಾಡಿದಾಗ ಭಾರತ ಹಿನ್ನಡೆ ಕಂಡಿತ್ತು. ಆದರೆ, ಯಾವ ಆತಂಕಕ್ಕೂ ಅವಕಾಶ ನೀಡದ ನಾಯಕ ಯಶ್ ಧುಲ್ 30.5 ಓವರ್ ಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಗೆಲುವಿಗೆ 1 ರನ್ ಬೇಕಿದ್ದ ವೇಳೆ ಕೌಶಲ್ ಥಾಂಬೆ ಸಿಕ್ಸರ್ ಸಿಡಿಸಿ ತಂಡಕ್ಕೆ ಜಯ ನೀಡಿದರು.

Brendan Taylor Ban : ಜಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್ ಗೆ ನಿಷೇಧ ಶಿಕ್ಷೆ ವಿಧಿಸಿದ ಐಸಿಸಿ!
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡಕ್ಕೆ ಭಾರತ ಕಡಿವಾಣ ಹಾಕಿತು. ವೇಗದ ಬೌಲಿಂಗ್ ಗೆ ನೆರವೀಯುವ ಪಿಚ್ ನ ಸಂಪೂರ್ಣ ಲಾಭ ಪಡೆದ ರವಿಕುಮಾರ್, ಪಂದ್ಯದ 2ನೇ ಓವ್ ನಲ್ಲಿಯೇ ಆರಂಭಿಕ ಆಟಗಾರ ಮಫೀಜುಲ್ ಇಸ್ಲಾಂ ಅವರನ್ನು ಕೇವಲ 2 ರನ್ ಗೆ ಔಟ್ ಮಾಡಿದರು. ಆ ಬಳಿಕ ಇಫ್ತಿಕಾರ್ ಹುಸೇನ್ ಹಾಗೂ ಪ್ರಾಂತಿಕ್ ನಬೀಲ್ ಅವರ ವಿಕೆಟ್ ಉರುಳಿಸಿ ಮಿಂಚಿದರು. ಈ ಹಂತದಲ್ಲಿ ಜೊತೆಯಾಟ ಆರಿಫುಲ್ ಇಸ್ಲಾಂ ಹಾಗೂ ಐಚಾ ಮೊಲ್ಲಾ 23 ರನ್ ಗಳ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ಮಾಡಿದ್ದರು.

MS Dhoni Advices : ಫಲಿತಾಂಶದ ಮೇಲಲ್ಲ, ಪ್ರಕ್ರಿಯೆ ಮೇಲೆ ಹೆಚ್ಚಿನ ಗಮನ ನೀಡಿ!
ಇನ್ನೇನು ಈ ಜೋಡಿ ಅಪಾಯಕಾರಿ ಆಗುತ್ತಿದೆ ಎನ್ನುವ ಹಂತದಲ್ಲಿ ದಾಳಿಗಿಳಿದ ವಿಕ್ಕಿ ಓತ್ಸ್ವಾಲ್ ಆರಿಫುಲ್ ಹಾಗೂ ಮೊಹಮದ್ ಫಾಹಿಮ್ ವಿಕೆಟ್ ಕಳೆದುಕೊಂಡಾಗ ಬಾಂಗ್ಲಾದೇಶ 50 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. 17 ರನ್ ಬಾರಿಸಿದ ಐಚ್ ಮೊಲ್ಲಾ ರನೌಟ್ ಆಗಿ ನಿರ್ಗಮಿಸಿದಾಗ ಬಾಂಗ್ಲಾದೇಶ 56 ರನ್ ಬಾರಿಸಿತ್ತು. ಈ ಹಂತದಲ್ಲಿ ಜೊತೆಯಾದ ಮೆಹ್ರೂಬ್ (30) ಹಾಗೂ ಆಶಿಖಿರ್ ಜಮಾನ್ (16) 8ನೇ ವಿಕೆಟ್ ಗೆ 50 ರನ್ ಜೊತೆಯಾಟವಾಡಿ ತಂಡವನ್ನು 100ರಗಡಿ ದಾಟಿಸಿತ್ತು. ಈ ಎರಡು ವಿಕೆಟ್ ಗಳನ್ನು ಬೇಗನೆ ಕಳೆದುಕೊಂಡ ಬಾಂಗ್ಲಾದೇಶ 37.1 ಓವರ್ ಗಳಲ್ಲಿ 111 ರನ್ ಗೆ ಆಲೌಟ್ ಆಗಿತ್ತು.

ಬಾಂಗ್ಲಾದೇಶ: 37.1 ಓವರ್ ಗಳಲ್ಲಿ 111 (ಮೆಹ್ರೂಬ್ 30, ಐಚ್ ಮೊಲ್ಲಾ 17, ಆಶಿಖಿರ್ ಜಮಾನ್ 16, ರವಿಕುಮಾರ್ 14ಕ್ಕೆ 3, ವಿಕ್ಕಿ ಓತ್ಸ್ವಾಲ್ 25ಕ್ಕೆ 2), ಭಾರತ: 30.5 ಓವರ್ ಗಳಲ್ಲಿ 5 ವಿಕೆಟ್ ಗೆ 117 (ಆಂಗ್ಕ್ರಿಶ್ ರಘುವಂಶಿ 44, ಶೇಖ್ ರಶೀದ್ 26, ಯಶ್ ಧುಲ್ 20*, ರಿಪ್ಪನ್ ಮೊಂಡಲ್ 31ಕ್ಕೆ 4), ಪಂದ್ಯಶ್ರೇಷ್ಠ: ರವಿ ಕುಮಾರ್

Follow Us:
Download App:
  • android
  • ios