ಸತತ ಸೋಲುಗಳ ನಂತರ ಕೋಲ್ಕತಾ ನೈಟ್ ರೈಡರ್ಸ್ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲುವು ಸಾಧಿಸಿದೆ. ಈ ಗೆಲುವಿನ ಬಗ್ಗೆ ಮಾತನಾಡಿದ ನಾಯಕ ಅಜಿಂಕ್ಯ ರಹಾನೆ, ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಅವರನ್ನು ಶ್ಲಾಘಿಸಿದರು. ಅಲ್ಲದೆ, ಇಂತಹ ಪಿಚ್ಗಳಲ್ಲಿ ಸ್ಟ್ರೈಕ್ ರೇಟ್ಗಿಂತ ವಿಕೆಟ್ಗಳ ನಡುವಿನ ಓಟಕ್ಕೆ ಆದ್ಯತೆ ನೀಡುವುದು ಮುಖ್ಯ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಕೋಲ್ಕತಾ: ಈ ಸೀಸನ್ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಗೂ ಗೆಲುವಿನ ಸಿಹಿ ಸಿಕ್ಕಿದೆ. ಈ ಗೆಲುವಿನಿಂದಾಗಿ ತಂಡದ ಕ್ಯಾಪ್ಟನ್ ಅಜಿಂಕ್ಯ ರಹಾನೆ ನಿಟ್ಟುಸಿರು ಬಿಟ್ಟಿದ್ದಾರೆ. ಭಾನುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ನಂತರ ರಹಾನೆ ತಮಾಷೆಯಾಗಿಯೇ ಮಾತು ಆರಂಭಿಸಿದರು.
ಹೆಚ್ಚುವರಿ ಐದು ನಿಮಿಷ ಸಿಕ್ತು!
"ಈ ಸೀಸನ್ನ ಮೊದಲ ಆರು ಮ್ಯಾಚ್ಗಳಲ್ಲಿ ಐದರಲ್ಲಿ ಸೋತಿದ್ದೆವು. ಹಾಗಾಗಿ, ಮ್ಯಾಚ್ ಮುಗಿದ ತಕ್ಷಣ ಬೇಗ ಡ್ರೆಸ್ಸಿಂಗ್ ರೂಮ್ಗೆ ವಾಪಸ್ ಹೋಗಬೇಕಿತ್ತು. ಆದರೆ ಈ ಗೆಲುವಿನ ನಂತರ ಗ್ರೌಂಡ್ನಲ್ಲಿ ಹೆಚ್ಚುವರಿಯಾಗಿ ಐದು ನಿಮಿಷ ಕಳೆಯಲು ಅವಕಾಶ ಸಿಕ್ಕಿದ್ದಕ್ಕೆ ಖುಷಿ ಇದೆ," ಎಂದು ರಹಾನೆ ನಕ್ಕರು. ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಅವರನ್ನು ನಾಯಕ ಹಾಡಿ ಹೊಗಳಿದರು. "ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಬಗ್ಗೆ ನನಗೆ ತುಂಬಾ ಖುಷಿಯಿದೆ. ವರುಣ್ ಕಳಪೆ ಫಾರ್ಮ್ನಲ್ಲಿದ್ದರೂ, ಕಳೆದ ಮೂರು ಪಂದ್ಯಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಹಾಗೆಯೇ, ಮಾನಸಿಕವಾಗಿ ತೀವ್ರ ಒತ್ತಡದಲ್ಲಿದ್ದ ರಿಂಕು, ಪಂದ್ಯವನ್ನು ಫಿನಿಶ್ ಮಾಡಿದ ರೀತಿ ನೋಡಲು ಕಾಯುತ್ತಿದ್ದೆ," ಎಂದು ರಹಾನೆ ಖುಷಿ ವ್ಯಕ್ತಪಡಿಸಿದ್ದಾರೆ.
ಅಚ್ಚರಿ ಹೇಳಿಕೆ ಕೊಟ್ಟ ಅಜಿಂಕ್ಯ ರಹಾನೆ
ಉತ್ತಮ ದೇಶೀಯ ಸೀಸನ್ ನಂತರ ತಂಡಕ್ಕೆ ಬಂದ ಅನುಕೂಲ್ ರಾಯ್ ಅವರ ಪ್ರದರ್ಶನವನ್ನೂ ಅವರು ಶ್ಲಾಘಿಸಿದರು. 156 ರನ್ಗಳ ಗುರಿ ಬೆನ್ನಟ್ಟುವಾಗ ಸ್ಟ್ರೈಕ್ ರೇಟ್ ಬಗ್ಗೆ ರಹಾನೆ ತಮ್ಮ ನಿಲುವು ಸ್ಪಷ್ಟಪಡಿಸಿದರು. ಇಂತಹ ಪಿಚ್ಗಳಲ್ಲಿ ಸ್ಟ್ರೈಕ್ ರೇಟ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬಾರದು, ಬದಲಾಗಿ ವಿಕೆಟ್ಗಳ ನಡುವಿನ ಓಟಕ್ಕೆ ಆದ್ಯತೆ ನೀಡಬೇಕು ಎಂದರು.
"ದೊಡ್ಡ ಸಿಕ್ಸರ್ಗಳನ್ನು ಬಾರಿಸುವುದಕ್ಕಿಂತ ಸಿಂಗಲ್ಸ್ ಮತ್ತು ಡಬಲ್ಸ್ ತೆಗೆದು ಸ್ಕೋರ್ ಬೋರ್ಡ್ ಮುಂದೆ ಸಾಗಿಸುವುದರ ಮೇಲೆ ನಾವು ಗಮನ ಹರಿಸಬೇಕಿತ್ತು. ಕಳೆದ ಪಂದ್ಯಗಳಲ್ಲಿ ನಾವು ಇಂತಹ ತಪ್ಪುಗಳನ್ನು ಮಾಡಿದ್ದೆವು. ಈ ಪಂದ್ಯದಿಂದ ಕಲಿಯುವುದು ಬಹಳಷ್ಟಿದೆ," ಎಂದು ರಹಾನೆ ಸೇರಿಸಿದರು. ಮುಂಬರುವ ಐದು ದಿನಗಳ ವಿರಾಮವು ತಂಡಕ್ಕೆ ತಪ್ಪುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಡ್ರೆಸ್ಸಿಂಗ್ ರೂಮ್ನ ವಾತಾವರಣ ಉತ್ತಮವಾಗಿದೆ ಎಂದು ರಹಾನೆ ಹೇಳಿದರು. ಏಪ್ರಿಲ್ 26 ರಂದು ಲಖನೌ ವಿರುದ್ಧ ಕೋಲ್ಕತ್ತಾ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.
9ನೇ ಸ್ಥಾನಕ್ಕೇರಿದ ಕೋಲ್ಕತಾ ನೈಟ್ ರೈಡರ್ಸ್:
ಆರಂಭದಿಂದಲೂ ಸತತ ಸೋಲುಗಳಿಂದ ಕಂಗೆಟ್ಟಿದ್ದ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಇದೀಗ ಗೆಲುವಿನ ಖಾತೆ ತೆರೆಯುತ್ತಿದ್ದಂತೆಯೇ ಕೊಂಚ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದೆ. ಇದೀಗ ಕೆಕೆಆರ್ ತಂಡವು ಅಂಕಪಟ್ಟಿಯಲ್ಲಿ 09ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಜಾರಿದೆ.


