ಕೊರೋನಾ ಸೋಂಕಿತರನ್ನು ಭಾರತದ ಗಡಿಗೆ ತಳ್ಳಿದ ಪಾಕ್ ಸೇನೆ; ಶತ್ರು ರಾಷ್ಟ್ರದ ಅಸಲಿಯತ್ತು ಬಹಿರಂಗ!
ಕೊರೋನಾ ವೈರಸ್ ದೇಶದ ಜನತೆಯ ಒಗ್ಗಟ್ಟನ್ನು ಮಾತ್ರ ಪ್ರಶ್ನಿಸುತ್ತಿಲ್ಲ, ಇದರ ಜೊತೆಗೆ ಕೆಲ ದೇಶಗಳ ಅಸಲಿಯತ್ತನ್ನು ಬಹಿರಂಗ ಮಾಡುತ್ತಿದೆ. ಚೀನಾದ ಕೊರೋನಾದಿಂದ ಇದೀಗ ವಿಶ್ವದ ಮುಂದೆ ಪಾಕಿಸ್ತಾನ ಬೆತ್ತಲಾಗಿದೆ. ಭಾರತ ವಿರುದ್ಧ ಸದಾ ಕಾಲು ಕೆರೆದು ಬರುವ ಪಾಕಿಸ್ತಾನ ಹಾಗೂ ಪಾಕ್ ಸೇನೆಯ ನಿಜಗುಣ ಜಗಜ್ಜಾಹೀರಾಗಿದೆ.
ಮೀರ್ಪುರ್(ಮಾ.30): ಕೊರೋನಾ ವೈರಸ್ ಹರಡುತ್ತಿದ್ದಂತೆ ಭಾರತದಲ್ಲಿ ಹಲವು ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಹೆಚ್ಚಿನ ಒತ್ತು ನೀಡುತ್ತಿದೆ. ನಿರ್ಗತಿಕನಾಗಿದ್ದರೂ, ವಿದೇಶಿಗನಾಗಿದ್ದರೂ, ಭಾರತದೊಳಗೆ ಅಕ್ರಮವಾಗಿದ್ದರೂ ಸದ್ಯ ಈ ಮಣ್ಣಿನಲ್ಲಿರುವ ಪ್ರತಿಯೊಬ್ಬರ ಆರೋಗ್ಯವೇ ಮುಖ್ಯ ಎಂದು ಭಾರತ ನಿರಂತರ ಹೋರಾಟ ನಡೆಸುತ್ತಿದೆ. ಆದರೆ ಅತ್ತ ಪಾಕಿಸ್ತಾನ ಹಾಗಲ್ಲ, ಸೋಂಕಿತರನ್ನು ಭಾರತದ ಗಡಿಯತ್ತ ತಳ್ಳುತ್ತಿದ್ದಾರೆ. ಇದೇ ಎರಡು ದೇಶದ ವ್ಯತ್ಯಾಸ.
ಕೊರೋನಾ ಲಾಕ್ಡೌನ್ - ಪಾಕಿಸ್ತಾನದಲ್ಲಿ ಹಿಟ್ಟಿಗೂ ಹಾಹಾಕಾರ
ಪಾಕಿಸ್ತಾನದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸಾವಿರ ದಾಟಿದೆ. ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಪಾಕಿಸ್ತಾನ ಇದೀಗ ಸೋಂಕಿತರ ಚಿಕಿತ್ಸೆ ಹಾಗೂ ವೈರಸ್ ಹರದಂತೆ ತಡೆಯಲು ಹೆಣಗಾಡುತ್ತಿದೆ. ಇದೀಗ ಪಾಕಿಸ್ತಾನ ಸರ್ಕಾರ ಹಾಗೂ ಸೇನೆ ಜಂಟಿಯಾಗಿ ಕೊರೋನಾ ಸೋಂಕಿತರನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶಗಳಾದ ಗಿಲ್ಗಿಟ್, ಬಾಲ್ಟಿಸ್ತಾನ, ಬಲೂಚಿಸ್ತಾನ ಪ್ರದೇಶಗಳಿಗೆ ರವಾನಿಸುತ್ತಿದೆ.
ಗಿಲ್ಗಿಟ್, ಬಲೂಚಿಸ್ತಾನದ ನಗರ ಮೀರ್ಪುರ್ನಲ್ಲಿನ ಆಸ್ಪತ್ರೆಗಳಿಗೆ ಸಮಾರಂಭದ ಹಾಲ್ಗಳನ್ನು ಐಸೋಲೇಶನ್ ವಾರ್ಡ್ಗಳಾಗಿ ಪರಿವರ್ತಿಸಲಾಗಿರುವ ಕೇಂದ್ರಗಳಿಗೆ ರವಾನಿಸಲಾಗುತ್ತಿದೆ. ಇದೀಗ ಪಾಕ್ ಆಕ್ರಮಿತ ಕಾಶ್ಮೀರ ನಿವಾಸಿಗಳು ಪಾಕಿಸ್ತಾನ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ. ಗಿಲ್ಗಿಟ್, ಬಲೂಚಿಸ್ತಾನ ಪ್ರದೇಶಗಳನ್ನು ಪಾಕಿಸ್ತಾನ ಡಸ್ಟ್ಬಿನ್ ಎಂದುಕೊಂಡಿದೆ. ಇದಕ್ಕಾಗಿ ಪಾಕ್ ಸೇನೆ ಸೋಂಕಿತರನ್ನು ಇಲ್ಲಿಗೆ ರವಾನಿಸುತ್ತಿದ್ದಾರೆ ಎಂದು ಪ್ರತಿಭಟನೆ ನಡೆಸುತ್ತಿದ್ದಾರೆ,
ಕೊರೋನಾ ಸೋಂಕಿತನೊಂದಿಗೆ ಸೆಲ್ಫೀ ತೆಗೆದುಕೊಂಡ ಪಾಕ್ ಸಿಬ್ಬಂದಿ!
ಮಾರ್ಚ್ ಆರಂಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಮೀರ್ಪುರ್ ಪಟ್ಟಣದಲ್ಲಿ ಕೇವಲ ಒಂದು ಕೊರೋನಾ ವೈರಸ್ ಕೇಸ್ ಪತ್ತೆಯಾಗಿತ್ತು. ಸೋಂಕಿತನನ್ನು ಆಸ್ಪತ್ರೆಗೆ ಸೇರಲಾಗಿದೆ. ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ. ಆದರೆ ಪಾಕಿಸ್ತಾನ ಸೇನೆ ಪಾಕಿಸ್ತಾನ ಪಂಜಾಬ್ ಪ್ರಾಂತ್ಯದಲ್ಲಿನ ಕೊರೋನಾ ಸೋಂಕಿತರನ್ನು ಇದೀಗ ಮೀರ್ಪುರ್ಗೆ ತಂದು ಬಿಡಲಾಗುತ್ತಿದೆ. ಇಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಸೂಕ್ತ ಚಿಕಿತ್ಸೆ ಇಲ್ಲ. ಇದೀಗ ಇಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 100 ರ ಗಡಿ ದಾಟಿದೆ. ಇದಕ್ಕೆಲ್ಲಾ ಪಾಕಿಸ್ತಾನ ಸರ್ಕಾರ ಹಾಗೂ ಸೇನೆ ಕಾರಣ ಎಂದು ಗಿಲ್ಗಿಟ್ನ ಸಾಮಾಜಿಕ ಕಾರ್ಯಕರ್ತ ಡಾ.ಅಮ್ಜಾದ್ ಆಯುಬ್ ಮಿರ್ಜಾ ಆರೋಪಿಸಿದ್ದಾರೆ.
ಪಾಕಿಸ್ತಾನ ಸೇನೆ ಇದೀಗ ಭಾರತದ ಗಡಿ ಪ್ರದೇಶಗಳಲ್ಲಿನ ಗ್ರಾಮಗಳಲ್ಲಿ ಐಸೋಲೇಶನ್ ವಾರ್ಡ್ ಹೆಸರಲ್ಲಿ ಕೊರೋನಾ ಸೋಂಕಿತರನ್ನು ಇರಿಸುವ ಚಿಂತನೆ ನಡೆಸುತ್ತಿದೆ. ಇದರಿಂದ ಏನೂ ಅರಿಯದ ಗ್ರಾಮಸ್ಥರು ಮಾತ್ರವಲ್ಲ ಗಡಿ ಪ್ರದೇಶದಲ್ಲಿ ಕೊರೋನಾ ಸೋಂಕು ಹರಡಲು ಮುಂದಾಗುತ್ತಿದೆ ಎಂದು ಮಿರ್ಜಾ ಹೇಳಿದ್ದಾರೆ.
ಬಲೂಚಿಸ್ತಾನ ಹೋರಾಟಗಾರರು ಇದೀಗ ಪಾಕಿಸ್ತಾನಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಇರಾನ್ನಿಂದ 100ಕ್ಕೂ ಹೆಚ್ಚು ಜನ ಬಲೂಚ್ಗೆ ಆಗಮಿಸಿದ್ದಾರೆ. ಆದರೆ ಪಾಕಿಸ್ತಾನ ಸೇನೆ ಇದುವರೆಗೂ ಅವರನ್ನು ಕ್ವಾರಂಟೈನ್ನಲ್ಲಿಡುವ ಅಥವಾ ತಪಾಸಣೆ ಮಾಡುವ ಗೋಜಿಗೆ ಹೋಗಿಲ್ಲ. ಸಂಪೂರ್ಣ ಬಲೂಚಿಸ್ತಾನವನ್ನುು ನಿರ್ಲಕ್ಷ್ಯ ಮಾಡಿದೆ. ಈ ಮೂಲಕ ಬಲೂಚಿಸ್ತಾನದ ನಾಶಕ್ಕೆ ಪಾಕಿಸ್ತಾನ ಹೊರಟಿದೆ ಎಂದು ಬಲೂಚಿಸ್ತಾನ ಲಿಬರೇಶನ್ ಫ್ರಂಟ್ ನಾಯಕ ನಿಝಾರ್ ಬಲೂಚ್ ಆರೋಪಿಸಿದ್ದಾರೆ.
ಪಾಕಿಸ್ತಾನದಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಸಿಂಧ್ ಪ್ರಾಂತ್ಯದಲ್ಲಿ 400 ಕೇಸ್ ದೃಢಪಟ್ಟಿದೆ. ಇನ್ನು ಪಂಜಾಬ್ ಪ್ರಾಂತ್ಯದಲ್ಲಿ 300, ಖೈಬರ್ ಪ್ರದೇಶಲ್ಲಿ 78 ಕೇಸ್ಗಳು ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಪಾಕಿಸ್ತಾನದಲ್ಲಿ ಕೊರೋನಾ ವೈರಸ್ ದ್ವಿಗುಣಗೊಳ್ಳುತ್ತಿದೆ.