ಮುಚ್ಚಿದ ಪೇಯಿಂಗ್‌ ಗೆಸ್ಟ್‌ ಗಳು| ಮಾ.31ರ ವರೆಗೆ ಶಾಲಾ- ಕಾಲೇಜುಗಳಿಗೆ ರಜೆ|ಎಲ್ಲಾ ವಿದ್ಯಾರ್ಥಿಗಳನ್ನು ಮನೆಗಳಿಗೆ ಕಳುಹಿಸಲಾಗಿದೆ| ಕೆಲವೇ ಮಂದಿಗೆ ಪಿಜಿಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ| 

ಬೆಂಗಳೂರು(ಮಾ.25): ಕೊರೋನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ವಹಿವಾಟುಗಳನ್ನು ಬಂದ್‌ ಮಾಡುವಂತೆ ಸರ್ಕಾರ ಸೂಚಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿರುವ ಪೇಯಿಂಗ್‌ ಗೆಸ್ಟ್‌ (ಪಿ.ಜಿ) ಗಳನ್ನು ಮುಚ್ಚಲಾಗುತ್ತಿದೆ. ಪರಿಣಾಮ, ಊರುಗಳಿಗೆ ಹೋಗದೆ ನಗರದಲ್ಲಿಯೇ ಉಳಿದುಕೊಂಡಿರುವವರಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿತ್ತಿರುವವರು, ವ್ಯಾಸಂಗಕ್ಕಾಗಿ ಪಿಜಿಗಳಲ್ಲಿ ಉಳಿದುಕೊಂಡು ಓದುತ್ತಿರುವವರು, ಬಾಡಿಗೆ ಕಟ್ಟಲು ಸಾಧ್ಯವಾಗದೆ ಕಡಿಮೆ ವೆಚ್ಚದಲ್ಲಿ ಪಿ.ಜಿ.ಗಳಲ್ಲಿ ಉಳಿದುಕೊಳ್ಳುವವರು, ವಿವಿಧ ರಾಜ್ಯಗಳಿಂದ ಬಂದು ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಪಿ.ಜಿ.ಗಳಲ್ಲಿ ಉಳಿದು ಕೊಂಡಿರುವವರಿಗೆ ಪರಿಸ್ಥಿತಿ ಹದಗೆಟ್ಟಿದೆ.

ಕೊರೋನಾ ಭೀತಿ ನಡುವೆಯೇ 72 ಸಾವಿರು ಲಡ್ಡು ವಿತರಣೆ

ಹಾಸ್ಟೆಲ್‌ಗಳು ಖಾಲಿ:

ಸಮಾಜ ಕಲ್ಯಾಣ ಇಲಾಖೆ, ವಿಶ್ವವಿದ್ಯಾಲಯ ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ ವಿದ್ಯಾರ್ಥಿಗಳನ್ನು ಕೂಡ ಊರುಗಳಿಗೆ ಕಳುಹಿಸಲಾಗಿದೆ. ಈಗಾಗಲೇ ಮಾ.31ರ ವರೆಗೆ ಶಾಲಾ- ಕಾಲೇಜುಗಳಿಗೆ ರಜೆ ನೀಡಿರುವುದರಿಂದ ಎಲ್ಲಾ ವಿದ್ಯಾರ್ಥಿಗಳನ್ನು ಮನೆಗಳಿಗೆ ಕಳುಹಿಸಲಾಗಿದೆ.

ಸದ್ಯ ಮಾ.31ರ ವರೆಗೆ ಸಂಪೂರ್ಣ ಬಂದ್‌ ಮಾಡಿರುವುದರಿಂದ ಹೆಚ್ಚಿನ ಜನರು ಪಿಜಿಯಲ್ಲಿ ಉಳಿದು ಕೊಂಡಿರುವವರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಆದರೆ, ಬೇರೆಲ್ಲೂ ಉಳಿದುಕೊಳ್ಳಲು ಸ್ಥಳವಿಲ್ಲದವರು ಪಿಜಿಗಳಲ್ಲಿಯೇ ಉಳಿದುಕೊಂಡಿದ್ದಾರೆ. ಇಂತಹವರಿಗೆ ಕರ್ನಾಟಕ ಬಂದ್‌ ಮಾರಕವಾಗಿದೆ. ರಾಜರಾಜೇಶ್ವರಿ ನಗರದ ಪಿಜಿ ಮಾಲೀಕ ಮಹೇಶ್‌ ಮಾತನಾಡಿ, ದೇಶಾದ್ಯಂತ ಬಂದ್‌ ಮಾಡಿರುವುದರಿಂದ ಮತ್ತು ಹೆಚ್ಚಿನ ಜನಜಂಗುಳಿ ಇದ್ದರೆ ಸೋಂಕು ಹರಡುವ ಭೀತಿ ಇರುವುದರಿಂದ ತಾತ್ಕಾಲಿಕವಾಗಿ ಪಿಜಿ ಖಾಲಿ ಮಾಡುವಂತೆ ಸೂಚಿಸಲಾಗಿದೆ. ಶೇ.90 ರಷ್ಟು ಜನರು ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಇನ್ನೂ ಕೆಲವೇ ಮಂದಿ ಇದ್ದಾರೆ. ಎಲ್ಲೂ ಹೋಗಲು ಸಾಧ್ಯವಿಲ್ಲವೆಂದು ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದರಿಂದ ಉಳಿದುಕೊಳ್ಳಲು ಅವಕಾಶ ನೀಡಲಾಗಿದೆ ಎಂದರು.

ಭಾರತ ಲಾಕ್‌ಡೌನ್‌: ನಿಮಗೆ ಏನೇ ಬೇಕಾದ್ರೂ ನನಗೆ ಕರೆ ಮಾಡಿ ಎಂದ ಶಾಸಕ!

ಇನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸುತ್ತಲಿನ ಪ್ರದೇಶದ ಪಿಜಿಗಳಲ್ಲಿ ಉಳಿದುಕೊಂಡಿದ್ದಾರೆ. ಇಂತಹವರಿಗೆ ಪಿಜಿಗಳಲ್ಲಿ ಪ್ರವೇಶ ನೀಡಲು ನಿರಾಕರಿಸುತ್ತಿದ್ದಾರೆ. ವಿಮಾನ ನಿಲ್ದಾಣದಿಂದ ನೇರವಾಗಿ ಪಿಜಿ ಗಳಿಗೆ ಬಂದರೆ ಸೋಂಕು ತಗಲಬಹುದು ಎಂಬ ಅನುಮಾನ ಇರುವುದರಿಂದ ಆತಂಕದಿಂದ ಪಿಜಿಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಕಾರಣದಿಂದಲೇ ತಾತ್ಕಾಲಿಕವಾಗಿ ತಮ್ಮ ಊರುಗಳಿಗೆ ಹೊರಡುವಂತೆಯೂ ಸೂಚಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪಿಜಿಗಳಲ್ಲಿ ಉಳಿದುಕೊಂಡಿರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ.