ವಿದೇಶದಿಂದ ಬಂದಿರುವ ಹೋಂ ಕ್ವಾರೆಂಟೈನ್‌ನಲ್ಲಿರುವ 235 ಮಂದಿಯ ಎಡಗೈಗೆ ಮುದ್ರೆ ಹಾಕುವ ಕೆಲಸ ಆರೋಗ್ಯ ಇಲಾಖೆ ಶುಕ್ರವಾರದಿಂದ ಆರಂಭಿಸಿದೆ. ಅಂದರೆ, ಅವರುಗಳು ಸಾರ್ವಜನಿಕ ಸ್ಥಳದಲ್ಲಿ ಓಡಾಡುವುದು ಕಂಡುಬಂದರೆ ತಕ್ಷಣವೇ ಮಾಹಿತಿ ನೀಡಲು ಇದರಿಂದ ಅನುಕೂಲವಾಗಲಿದೆ. 

ಚಿಕ್ಕಮಗಳೂರು(ಮಾ.28): ಮಹಾಮಾರಿ ಕೊರೋನಾ ವೈರಸ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಆದೇಶಕ್ಕೆ ಜಿಲ್ಲೆಯ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆಸ್ಪ್ರೇಲಿಯಾದಿಂದ ಚಿಕ್ಕಮಗಳೂರಿಗೆ ಬಂದಿದ್ದ ಮಹಿಳೆ ಮೃತಪಟ್ಟಿದ್ದು ಕೊರೋನಾ ವೈರಸ್‌ನಿಂದ ಅಲ್ಲ ಎಂದು ಗಂಟಲು ದ್ರವ ಪರೀಕ್ಷಾ ವರದಿ ಶುಕ್ರವಾರ ದೃಢಪಡಿಸಿದೆ.

ವಿದೇಶದಿಂದ ಬಂದಿರುವ ಹೋಂ ಕ್ವಾರೆಂಟೈನ್‌ನಲ್ಲಿರುವ 235 ಮಂದಿಯ ಎಡಗೈಗೆ ಮುದ್ರೆ ಹಾಕುವ ಕೆಲಸ ಆರೋಗ್ಯ ಇಲಾಖೆ ಶುಕ್ರವಾರದಿಂದ ಆರಂಭಿಸಿದೆ. ಅಂದರೆ, ಅವರುಗಳು ಸಾರ್ವಜನಿಕ ಸ್ಥಳದಲ್ಲಿ ಓಡಾಡುವುದು ಕಂಡುಬಂದರೆ ತಕ್ಷಣವೇ ಮಾಹಿತಿ ನೀಡಲು ಇದರಿಂದ ಅನುಕೂಲವಾಗಲಿದೆ.

ಕೊರೋನಾ ಭೀತಿ: ಕೇರಳ-ಕೊಡಗು ಗಡಿಗಳು ಬಂದ್..!

ಇನ್ನು ಜಿಲ್ಲೆಯ ಎನ್‌.ಆರ್‌.ಪುರ ತಾಲೂಕಿನ ಸೀತೂರು, ಕೊಪ್ಪ ತಾಲೂಕಿನ ಜಯಪುರದ ಕಟ್ಟೆಮನೆ ಗ್ರಾಮಗಳಲ್ಲಿ ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ. ಗ್ರಾಮಸ್ಥ ರು ರಸ್ತೆಗಳಲ್ಲಿ ಕಲ್ಲು-ಮುಳ್ಳಿನ ಬೇಲಿಯನ್ನು ನಿರ್ಮಿಸಿದ್ದಾರೆ.

ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಗೂ ಜನರ ನಡುವೆ ಅಂತರ ಕಾಯ್ದುಕೊಳ್ಳಲು ಆಸ್ಪತ್ರೆಯ ಹೊರ ಭಾಗದಲ್ಲಿ ಕ್ಲಿನಿಕ್‌ ತೆರೆಯಲಾಗಿತ್ತು.

ಕೊರೋನಾ ಶಂಕೆ: ಗ್ರಾಮದಿಂದ ಹೊರ ಹೋಗುವಂತೆ ವ್ಯಕ್ತಿ ಮೇಲೆ ಹಲ್ಲೆ

ಹೊಟೇಲ್‌ ಬಂದ್‌ ಆಗಿದ್ದರಿಂದ ಭಿಕ್ಷುಕರಿಗೆ, ನಿರ್ಗತಿಕರಿಗೆ ತುಂಬಾ ತೊಂದರೆಯಾಗಿತ್ತು. ಇದನ್ನು ಮನಗಂಡು ಕೆಲವು ಮಂದಿ ತಿಂಡಿ ಮನೆಯಲ್ಲಿ ಸಿದ್ಧಪಡಿಸಿ ಹಂಚಿಕೆ ಮಾಡಿದ್ದರು. ಶುಕ್ರವಾರ ಪ್ರಾಣಿ ದಯಾ ಸಂಘದವರು ಮನೆಯಲ್ಲಿ ಊಟವನ್ನು ಸಿದ್ಧಪಡಿಸಿ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಬೀದಿ ನಾಯಿಗಳಿಗೆ ಹಂಚಿಕೆ ಮಾಡಿದರು.

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಹರೀಶ್‌ ಪಾಂಡೆ ಅವರು ಮಲೆನಾಡಿನ ತಾಲೂಕುಗಳಿಗೆ ಭೇಟಿ ನೀಡಿ ಕೊರೋನಾ ಮುಂಜಾಗ್ರತೆ ಕುರಿತು ಪರಿಶೀಲಿಸಿದರು.

ಗುಡ್‌ ನ್ಯೂಸ್: ಬೆಂಗಳೂರು ವಿಜ್ಞಾನಿಗಳಿಂದ ಕೊರೋನಾ ನಿಷ್ಕ್ರಿಯ ಯಂತ್ರ!

ಜಿಲ್ಲೆಯಲ್ಲಿ ಅಂಗಡಿ ಮುಂಗಟ್ಟು ಬಂದ್‌ ಆಗಿದ್ದು, ದಿನಸಿ, ತರಕಾರಿ ಮಾರಾಟ ಎಂದಿನಂತೆ ಇದ್ದು, ಜನರು ಅಂತರ ಕಾಯ್ದುಕೊಂಡು ಖರೀದಿ ಮಾಡುತ್ತಿದ್ದಾರೆ. ಬೇಕಾಬಿಟ್ಟಿರಸ್ತೆಗೆ ಬರದಂತೆ ಪೊಲೀಸರು ಜನರಿಗೆ ತಿಳಿ ಹೇಳಿ ಕಳುಹಿಸಿದರು.