ಹಠಾತ್‌ ಲಾಕ್‌ಡೌನ್‌ಗೆ ರಾಹುಲ್‌ ಕಿಡಿ| ಹಠಾತ್‌ ಲಾಕೌಟ್‌ನಿಂದಲೇ ಬಡವರ ಗೊಂದಲ, ಆತಂಕಗಳು ಸೃಷ್ಟಿ

ನವದೆಹಲಿ(ಮಾ.30): ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಹಠಾತ್ತಾಗಿ ದೇಶವನ್ನೇ ಲಾಕ್‌ಡೌನ್‌ ಮಾಡಿದ ಪರಿಣಾಮ ದೇಶದಲ್ಲಿ ಗೊಂದಲಗಳು ಮತ್ತು ಆತಂಕಗಳಿಗೆ ಕಾರಣ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಕಿಡಿಕಾರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ ಪತ್ರ ಬರೆದಿರುವ ರಾಹುಲ್‌, ‘ವಿಶಿಷ್ಟಜನ ಸಮೂಹದಿಂದ ಕೂಡಿರುವ ಭಾರತವನ್ನು ಅರ್ಥೈಸಿಕೊಳ್ಳುವುದು ಕಷ್ಟಕರ. ಹೀಗಾಗಿ, ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಇತರೆ ರಾಷ್ಟ್ರಗಳ ರೀತಿಯಲ್ಲಿ ಸಂಪೂರ್ಣ ಲಾಕೌಟ್‌ ಮಾಡುವ ಬದಲಾಗಿ, ನಾವು ಇನ್ನಿತರ ಭಿನ್ನ ಕ್ರಮಗಳನ್ನು ಕೈಗೊಳ್ಳಬೇಕಿದೆ’ಎಂದು ಪ್ರತಿಪಾದಿಸಿದ್ದಾರೆ.

ದೇಶದಲ್ಲಿ ದಿನನಿತ್ಯದ ದುಡಿಮೆಯನ್ನು ನೆಚ್ಚಿ ಜೀವನ ನಡೆಸುವ ಬಡವರಿದ್ದಾರೆ. ಹೀಗಾಗಿ, ಆರ್ಥಿಕತೆಯ ಮೇಲಿನ ನಿರ್ಬಂಧದಿಂದಾಗಿ ನಗರಗಳಲ್ಲಿ ಉದ್ಯೋಗವಿಲ್ಲದ ಕೂಲಿ ಕಾರ್ಮಿಕರು ಗುಂಪು ಗುಂಪಾಗಿ ತಮ್ಮ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ಈ ಮೂಲಕ ಇವರು ಗ್ರಾಮೀಣ ಪ್ರದೇಶಗಳಿಗೂ ಕೊರೋನಾವನ್ನು ವ್ಯಾಪಿಸುವ ಹೊಸ ಆತಂಕ ಸೃಷ್ಟಿಯಾಗಿದೆ ಎಂದು ಈ ಪತ್ರದಲ್ಲಿ ರಾಹುಲ್‌ ಉಲ್ಲೇಖಿಸಿದ್ದಾರೆ.